ಹರಪನಹಳ್ಳಿ: ನನ್ನ ಬ್ಯಾಗ್ ಗುರುತಿಗೆ ಮತ ಹಾಕಿ ವಿಧಾನಸೌಧಕ್ಕೆ ಕಳಿಸಿದರೆ ನಾನು ಬ್ಯಾಗ್ ತುಂಬ ಕ್ಷೇತ್ರಕ್ಕೆ ಅನುದಾನ ತರುವೆ ಎಂದು ಭರವಸೆ ಕೊಟ್ಟಿದ್ದೆ. ಆ ಪ್ರಕಾರ ಇದೀಗ ಬ್ಯಾಗ್ ತುಂಬ ಅನುದಾನ ತಂದಿರುವೆ. ಇನ್ನು ಅಭಿವೃದ್ಧಿ ಪರ್ವ ಆರಂಭ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ತಿಳಿಸಿದರು.
ಗುರುವಾರ ಪಟ್ಟಣದ ಹೊಸ ಕೋರ್ಟ್ ಬಳಿ ವಿವಿಧ ಸಿಸಿ ರಸ್ತೆಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ತಾಲೂಕಿನ 18 ಗ್ರಾಮಗಳಲ್ಲಿ ಕಾಂಕ್ರಿಟ್ ರಸ್ತೆ, ಚರಂಡಿ ಕಾಮಗಾರಿಗಳನ್ನು ನಿರ್ಣಿಸಲು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಜಿಲ್ಲಾ ಉಸ್ತುವಾರಿ ಸಚಿವರ ಕೋಟಾದಲ್ಲಿ ₹23.38 ಕೋಟಿ ಹೆಚ್ಚುವರಿ ಅನುದಾನ ಬಂದಿದೆ. ಇದೀಗ ಕಾಮಗಾರಿಗಳ ಆರಂಭಕ್ಕೆ ಚಾಲನೆ ನೀಡಿದ್ದೇನೆ ಎಂದರು.ಅಲ್ಲದೆ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯಿಂದ ₹58 ಕೋಟಿ ಅನುದಾನ ಬಂದಿದ್ದು, ಅದರಲ್ಲಿ ಹರಪನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ₹48 ಕೋಟಿ, ಜಗಳೂರು ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ತಾಲೂಕಿನ ಅರಸಿಕೇರಿ ಹೋಬಳಿಗೆ ₹10 ಕೋಟಿ ಅನುದಾನ ನಿಗದಿಯಾಗಿದೆ ಎಂದರು.
ಕೆಕೆಆರ್ಡಿಬಿಯಲ್ಲಿ ಮುಖ್ಯಮಂತ್ರಿಗಳ ವಿವೇಚನಾ ನಿಧಿಯಡಿ ₹5 ಕೋಟಿ ಅನುದಾನ, ಸಚಿವರ ವಿವೇಚನಾ ನಿಧಿಯಡಿ ₹6.50 ಕೋಟಿ, ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿ ₹1 ಕೋಟಿ, ಎಸ್ಟಿಪಿ, ಟಿಎಸ್ಪಿ ಯೋಜನೆಯಲ್ಲಿ ₹1 ಕೋಟಿ, ಕುಡಿಯುವ ನೀರಿಗಾಗಿ ₹45 ಲಕ್ಷ, ಸ್ಲಂ ಬೋರ್ಡನಿಂದ 3 ಸಾವಿರ ಮನೆಗಳ ಮಂಜೂರು ಆಗಿವೆ ಎಂದರು.ಅಟಲ್ ಭೂ ಯೋಜನೆಯಡಿ ಸಣ್ಣ ನೀರಾವರಿ ಇಲಾಖೆಯಿಂದ ಚೆಕ್ ಡ್ಯಾಂ ನಿರ್ಮಾಣಕ್ಕೆ ₹3 ಕೋಟಿ, ತಾಲೂಕಿನಲ್ಲಿ 2 ವಸತಿನಿಲಯಗಳ ನಿರ್ಮಾಣಕ್ಕಾಗಿ ₹5 ಕೋಟಿ, 9 ಗ್ರಾಪಂಗಳ ಜಲಜೀವನ ಯೋಜನೆ ಪೂರ್ಣಗೊಳಿಸಲು ₹25 ಕೋಟಿ, 1200 ಮನೆಗಳು ಕಾರ್ಮಿಕ ಇಲಾಖೆಯಿಂದ ಮಂಜೂರು ಹೀಗೆ ಸಾಕಷ್ಟು ಅನುದಾನ ಬಂದಿದೆ. ಕಳೆದ 10 ತಿಂಗಳ ನಂತರ ಸಾಕಷ್ಟು ಅನುದಾನ ಹರಿದು ಬರುತ್ತಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಪುರಸಭಾ ಸದಸ್ಯರಾದ ಅಬ್ದುಲ್ ರಹಿಮಾನ್, ಟಿ. ವೆಂಕಟೇಶ, ಲಾಟಿ ದಾದಾಪೀರ, ಮುಖಂಡರಾದ ಜಾವೇದ್, ಹುಲ್ಲಿಕಟ್ಟಿ ಚಂದ್ರಪ್ಪ, ಒ. ಮಹಾಂತೇಶ, ಮತ್ತೂರು ಬಸವರಾಜ, ಸಾಸ್ವಿಹಳ್ಳಿ ನಾಗರಾಜ, ಗುಡಿನಾಗರಾಜ ಇತರರು ಉಪಸ್ಥಿತರಿದ್ದರು.