ನಾಡಿನ ಶ್ರೇಷ್ಠ ಸುಧಾರಕ ಹರ್ಡೇಕರ ಮಂಜಪ್ಪ

KannadaprabhaNewsNetwork | Published : Jan 4, 2024 1:45 AM

ಸಾರಾಂಶ

ನಾಡಿನ ಶ್ರೇಷ್ಠ ಸುಧಾರಕ ಹರ್ಡೇಕರ ಮಂಜಪ್ಪ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಹರ್ಡೇಕರ ಮಂಜಪ್ಪನವರು ಒಬ್ಬ ವಿಭೂತಿ ಪುರುಷರು. ನಮ್ಮ ಕನ್ನಡ ನಾಡಿನ ಶ್ರೇಷ್ಠ ಸುಧಾರಕರು. ಅವರ ಪರಿಶುದ್ಧವಾದ ಜೀವನ ಮತ್ತು ಶ್ರೇಷ್ಠ ಬರಹಗಳು ನಾಡಿನ ಪ್ರಗತಿಗೆ ಒಂದು ದಾರಿ ದೀಪವಾಗಿವೆ ಎಂದು ಜಗದ್ಗುರು ಶ್ರೀಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ತಿಳಿಸಿದರು.

ನವನಗರದ ಜಗದ್ಗುರು ಶ್ರೀ ಸಿದ್ಧರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠದಲ್ಲಿ ಏರ್ಪಡಿಡಿಸಿದ್ದ ಹರ್ಡೇಕರ ಮಂಜಪ್ಪ ಅವರ ಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಸ್ವತಃ ಗಾಂಧೀಜಿಯವರು ತಮ್ಮ ಮೇಲೆ ವಿಧಿಸಿಕೊಂಡಿದ್ದಕ್ಕಿಂತ ಹೆಚ್ಚಿನ ಶಿಸ್ತನ್ನು ಮಂಜಪ್ಪನವರು ತಮ್ಮ ವೈಯಕ್ತಿಕ ಜೀವನದಲ್ಲಿ ಅವಡಿಸಿಕೊಂಡಿದ್ದರು. ಚರಕದಿಂದ ನೂಲುವುದು ಮತ್ತು ಖಾದಿ ಬಟ್ಟೆಯ ನೇಯ್ಗೆಯನ್ನು ಸಹಾ ತಮ್ಮ ದಿನಚರಿಯಾಗಿಸಿಕೊಂಡ ಮಂಜಪ್ಪನವರು ತಮ್ಮ ಖಾದಿ ವಿಜಯ ಮಾಸ ಪತ್ರಿಕೆಯ ಮೂಲಕ ಖಾದಿ ಪ್ರಚಾರ ಕೈಗೊಂಡಿದ್ದರು ಎಂದು ಹೇಳಿದರು.

ಖಾದಿಯ ವಿಜ್ಞಾನ ಎಂಬ ಗ್ರಂಥವನ್ನು ರಚಿಸಿದರು. ಆದ್ದರಿಂದಲೇ ಜನ ಇವರನ್ನು ಕರ್ನಾಟಕದ ಗಾಂಧಿ ಎಂದು ಕರೆದರು. ಮಂಜಪ್ಪನವರಿಗೆ ಬಸವ ತತ್ವವೇ ಅವರ ಉಸಿರು. ಬಸವ ತತ್ವಕ್ಕೆ ಶರಣಾಗಿ, ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ 1913 ರಲ್ಲಿ ಬಸವ ಜಯಂತಿ ಆಚರಿಸಿದರು. ಬಸವ ಜಯಂತಿ ಆಚರಿಸುವ ಮೂಲಕ ವಿಶ್ವಕ್ಕೆ ಬಸವಣ್ಣನವರನ್ನು ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.

ಬಸವ ತತ್ವ ಮತ್ತು ಗಾಂಧಿ ತತ್ವಗಳನ್ನು ಜೀವನದಲ್ಲಿ ಪಾಲಿಸಿದರು. ಬಸವ ಪ್ರಜ್ಞೆಯು ಅವರ ಹಣೆಯಲ್ಲಿ ಸದಾ ವಿಭೂತಿ ಇರುತ್ತಿತ್ತು. ಗಾಂಧಿ ಪ್ರಜ್ಞೆಯು ಅವರು ಗಾಂಧೀಜಿಯವರಂತೆ ಖಾದಿ ಬಟ್ಟೆಗಳನ್ನು ಧರಿಸುವುದನ್ನು ಕಾಣಬಹುದು.ಯುವಕರನ್ನು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಲು ಸದಾ ಪ್ರೇರಣೆಯನ್ನು ತುಂಬಲು ಪ್ರಿಂಟಿಂಗ್ ಪ್ರೆಸ್ ಪ್ರಾರಂಭಿಸಿ ಹುರಿದುಂಬಿಸಿದರು. ಯುವಕರಿಗೆ ಪವಿತ್ರರಾಗಿರಿ, ಧೀರರಾಗಿರಿ, ಸ್ವತಂತ್ರ ರಾಷ್ಟ್ರದ ವೀರರಾಗಿರಿ ಎಂದು ಕರೆ ನೀಡಿದ ಒಬ್ಬ ಮಹಾತ್ಮರಾಗಿದ್ದಾರೆ.ಎಂದು ಹೇಳಿದರು.

ಸಮಾರಂಭದಲ್ಲಿ ರಾಜು, ವೆಂಕಟೇಶ, ಪಾಂಡು, ಗೋವಿಂದಪ್ಪ, ಯಂಕಣ್ಣ, ಮಾರುತಿ ಬಂಡಿವಡ್ಡರ, ಭರಮಪ್ಪ, ತಿಮ್ಮಣ್ಣ, ಕೊಲ್ಲಪ್ಪ, ಪಾಂಡು ನಾಗಪ್ಪ, ದುರ್ಗಪ್ಪ, ಅಶೋಕ ಜೈಕಾರ, ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Share this article