ಕನ್ನಡ ಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ಸರಿಯಾದ ಸಮಯಕ್ಕೆ ಬಗರ್‌ಹುಕುಂ ಗೆ ಸಂಬಂಧಿಸಿದಂತೆ ಕೆಲಸ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ ಅದನ್ನು ಬಿಟ್ಟು ಕಾಲಹರಣ ಮಾಡುತ್ತಿದ್ದೀರಿ ಇನ್ನೂ ಮುಂದಾದರೂ ನಿರ್ದಿಷ್ಠ ಗುರಿಯನ್ನು ಇಟ್ಟುಕೊಂಡು ಪ್ರಗತಿಯನ್ನು ತೋರಿಸಿ ಎಂದು ಶಾಸಕ ಸಿ.ಬಿ.ಸುರೇಶ್‌ ಬಾಬು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ನಡೆದ ಬಗರ್‌ಹುಕುಂ ಸಭೆಯಲ್ಲಿ ಮಾತನಾಡಿದ ಅವರು, ಹುಳಿಯಾರು ಕಂದಿಕೆರೆ ಹೋಬಳಿಯಲ್ಲಿ ಹೆಚ್ಚು ಈ ಬಗರ್‌ಹುಕುಂ ಜಮೀನುಗಳ ಕಡತಗಳು ಹೆಚ್ಚಾಗಿದ್ದು ಈ ವ್ಯಾಪ್ತಿಯ ಉಪತಹಸೀಲ್ದಾರ್, ರಾಜಸ್ವನಿರೀಕ್ಷಕರು, ಗ್ರಾಮಾಡಳಿತಾಧಿಕಾರಿಗಳು ಏನು ಮಾಡುತ್ತಿದ್ದೀರಿ. ಕನಿಷ್ಠ ದೊಡ್ಡರಾಂಪುರದ ೪೭ರ ಕಡತ ಏನಾಯಿತು ತಿಳಿಸಿ. ಮೂರುತಿಂಗಳಾದರು ಕಡತಗಳ ಬಗ್ಗೆ ಗಮನಹರಿಸಿಲ್ಲ. ರೈತರು ಅಲೆದಾಡುವುದು ತಪ್ಪಿಲ್ಲ. ತಾಲೂಕಿನ ಭೂಮಿ ಮಂಜೂರಾತಿಯ ಬಗರ್‌ಹುಕುಂ ಗೆ ಸಂಬಂಧಿಸಿದಂತೆ ಕಾಲಹರಣವಾಗುತ್ತಿದೆ ಹೊರತು ಯಾವುದೇ ಪ್ರಗತಿ ಮಾತ್ರ ಕಾಣುತ್ತಿಲ್ಲ. ಆದ್ದರಿಂದ ಮುಂದಿನ ೨೧ನೇ ತಾರೀಕನ್ನು ಗುರಿಯನ್ನಾಗಿಸಿಕೊಂಡು ತಾಲೂಕಿನ ಯಾವ ವೃತ್ತದಲ್ಲಿ ಎಷ್ಟು ವಜಾ, ಮಂಜೂರು, ಖಾತೆ ಮಾಡುವ ಹಾಗೂ ಸಭೆಯಲ್ಲಿಡುವಂತಹ ಕಡತಗಳ ಬಗ್ಗೆ ಮಾಹಿತಿ ಸಿದ್ಧಪಡಿಸಿಕೊಳ್ಳಿ ಎಂದರು.

ತಹಸೀಲ್ದಾರ್ ಮಮತಾ ಎಂ. ಮಾತನಾಡಿ ೧೭೦ ಆನ್‌ಲೈನ್‌ಗೆ ದಾಖಲಾಗದ ಪ್ರಕರಣಗಳಿದ್ದು ಅದರಲ್ಲಿ ದೊಡ್ಡರಾಂಪುರದ ೪೭ರ ಕಡತ ಸೇರಿಲ್ಲ ಏಕೆ ಎಂಬುದರ ಬಗ್ಗೆ ಸಂಬಂಧಪಟ್ಟ ಗ್ರಾಮಾಡಳಿತಾಧಿಕಾರಿ ಹಾಗೂ ರಾಜಸ್ವ ನಿರೀಕ್ಷಕರು ಉತ್ತರಿಸಿ. ನಿಗದಿತ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿ, ಪದೇ ಪದೇ ಜನಸ್ಪಂದನ ಕಾರ್ಯಕ್ರಮದಲ್ಲಿ ಈ ಭೂ ಮಂಜೂರಾತಿಗೆ ಸಂಬಂಧಿಸಿದಂತೆ ರೈತರು ಮನವಿಗಳನ್ನು ಸಲ್ಲಿಸುತ್ತಲೇ ಇದ್ದಾರೆ ಇನ್ನಾದರು ಸರಿಯಾಗಿ ಕೆಲಸ ಮಾಡಿ ಎಂದರು.

ಸಭೆಯಲ್ಲಿ ಬಗರ್‌ಹುಕುಂ ಕಮಿಟಿ ಸದಸ್ಯರಾದ ಬೇವಿನಹಳ್ಳಿ ಚನ್ನಬಸವಯ್ಯ ಸೇರಿದಮತೆ ಆರ್‌ ಆರ್ ಶಿರಸ್ಥೇದಾರ್ ವನಜಾಕ್ಷಿ , ವಿಷಯ ನಿರ್ವಾಹಕರು, ಬಗರ್‌ಹುಕುಂ ಸಮಿತಿ ಸದಸ್ಯರು, ರಾಜಸ್ವನಿರೀಕ್ಷಕರು, ಗ್ರಾಮಾಡಾಳಿತಾಧಿಕಾರಿಗಳು ಹಾಜರಿದ್ದರು.