- ಹರಪನಹಳ್ಳಿಯಲ್ಲಿ ತಾಲೂಕು ಪಂಚಮಸಾಲಿ ಸಮಾಜದಿಂದ ವಚನಾನಂದ ಶ್ರೀಗಳಿಗೆ ನೈತಿಕ ಬೆಂಬಲ
ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಹರಿಹರ ಪಂಚಮಸಾಲಿ ಪೀಠದ ಆಡಳಿತದಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿರುವ ಅವ್ಯವಹಾರಗಳು ಹಾಗೂ ಅವ್ಯವಸ್ಥೆಗಳಿಂದ ಸಮಾಜ ಮುಜುಗರಕ್ಕೆ ಈಡಾಗಿರುವುದು ವಿಷಾದನೀಯ ಸಂಗತಿ ಎಂದು ಪಂಚಮಸಾಲಿ ಸಮಾಜದ ಮುಖಂಡ ಶಶಿಧರ ಪೂಜಾರ ಹೇಳಿದರು.ಹರಪನಹಳ್ಳಿಯ ಪ್ರವಾಸಿ ಮಂದಿರದಲ್ಲಿ ಶನಿವಾರ ತಾಲೂಕು ಪಂಚಮಸಾಲಿ ಸಮಾಜ ಮುಖಂಡರೊಂದಿಗೆ ಸುದ್ದಿಗೋಷ್ಠಿ ನಡೆಸಿ, ವಚನಾನಂದ ಶ್ರೀಗಳಿಗೆ ನೈತಿಕ ಬೆಂಬಲ ವ್ಯಕ್ತಪಡಿಸಿ ಅವರು ಮಾತನಾಡಿದರು.
ಸಮಾಜದ ಪೀಠಕ್ಕೆ ಹಣ, ಭೂಮಿ ಇತ್ಯಾದಿ ದೇಣಿಗೆ ನೀಡಿದವರ ಸಂಪೂರ್ಣ ವಿವರಗಳು ಸ್ಪಷ್ಟವಾಗಿ ದಾಖಲಿಸಿ ಸಮಾಜದ ಭಕ್ತರಿಗೆ ಲಭ್ಯವಾಗುವಂತೆ ಪ್ರಕಟಿಸಬೇಕು. ಮಠಕ್ಕೆ ಸಂಬಂಧಿಸಿದ ಆಸ್ತಿಗಳು ಕೆಲವು ವ್ಯಕ್ತಿಗಳ ವೈಯಕ್ತಿಕ ಹೆಸರಿನಲ್ಲಿ ದಾಖಲಾಗಿರುವುದು ಗಂಭೀರ ವಿಚಾರವಾಗಿದೆ. ಆದ್ದರಿಂದ ಅವುಗಳನ್ನು ಮಠದ ಹೆಸರಿನಲ್ಲಿ ಕಾನೂನುಬದ್ಧವಾಗಿ ವರ್ಗಾವಣೆ ಮಾಡಬೇಕು. ಈ ಪ್ರಕ್ರಿಯೆಯ ವೆಚ್ಚವನ್ನು ಸಂಬಂಧಿತ ವ್ಯಕ್ತಿಗಳೇ ಭರಿಸಬೇಕು ಎಂದು ಆಗ್ರಹಿಸಿದರು.
ವಕೀಲ ಕೆ.ಬಸವರಾಜ ಮಾತನಾಡಿ, ಬೈಲಾ ಪ್ರಕಾರ ಟ್ರಸ್ಟ್ ಸದಸ್ಯರು ಪ್ರತಿ 5 ವರ್ಷಕ್ಕೊಮ್ಮೆ ಬದಲಾಗಬೇಕು. ಆದರೆ, ಈ ನಿಯಮವನ್ನು ಪಾಲಿಸಲಾಗಿಲ್ಲ. ಬೈಲಾ ಅನುಸಾರ ತಕ್ಷಣ ಹೊಸ ಟ್ರಸ್ಟ್ ರಚಿಸಬೇಕು. ಸಮಾಜದ ಪೀಠವನ್ನು ಕೊಪ್ಪಳದ ಹನುಮನಾಳ್ರವರು ಹುಟ್ಟು ಹಾಕಿದ್ದಾರೆ. ಯಾವುದೇ ಟ್ರಸ್ಟ್ ಸದಸ್ಯರಲ್ಲ ಎಂದು ಸ್ಪಷ್ಟಪಡಿಸಿದ ಅವರು, ಇಲ್ಲಿ ಟ್ರಸ್ಟ್ ಆಗಲಿ, ಸ್ವಾಮೀಜಿಯಾಗಲಿ ದೊಡ್ಡವರಲ್ಲ. ಸಮಾಜವೇ ದೊಡ್ಡದು. ಸಮಾಜದ ಪೀಠದ ಸ್ಥಾಪನೆಗೆ ಹರಪನಹಳ್ಳಿ ತಾಲೂಕು ಕೊಡುಗೆ ಅಪಾರವಾಗಿದೆ. ಹಾಗಾಗಿ, ಈಗಿರುವ ಶ್ರೀಗಳಿಗೆ ಸಮಾಜದಿಂದ ನೈತಿಕ ಬೆಂಬಲ ನೀಡಲಾಗುವುದು. ಒಂದು ವೇಳೆ ಟ್ರಸ್ಟ್, ಸ್ವಾಮೀಜಿ ಹಾಗೂ ಸಮಾಜದ ಬಾಂಧವರ ನಡುವೆ ಈ ಸಮಸ್ಯೆ ಶೀಘ್ರ ಇತ್ಯರ್ಥ ಆಗದಿದ್ದಲ್ಲಿ ಕಾನೂನಾತ್ಮಕ ಹೋರಾಟ ಮಾಡಲು ಮುಂದಾಗುವುದಾಗಿ ಹೇಳಿದರು.
- - -
ಹರಪನಹಳ್ಳಿ ನಗರದ ಪ್ರವಾಸಿ ಮಂದಿರದಲ್ಲಿ ಪಂಚಮಸಾಲಿ ಸಮಾಜದ ಮುಖಂಡರು ವಚನಾನಂದ ಶ್ರೀಗಳಿಗೆ ನೈತಿಕ ಬೆಂಬಲ ಸೂಚಿಸಿದರು.