ಹರಿಹರದಲ್ಲಿ ಹರಿಹರೇಶ್ವರ ಸ್ವಾಮಿ ಸಂಭ್ರಮದ ಬ್ರಹ್ಮರಥೋತ್ಸವ

KannadaprabhaNewsNetwork | Published : Feb 13, 2025 12:46 AM

ಸಾರಾಂಶ

ನಗರದಲ್ಲಿ ಮಾಘ ಶುಕ್ಲ ಪೌರ್ಣಿಮೆಯ ಬುಧವಾರ ಸಹಸ್ರಾರು ಆಸ್ತಿಕರ ಸಮ್ಮುಖದಲ್ಲಿ ಕ್ಷೇತ್ರನಾಥ ಹರಿಹರೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಿತು.

- ಹರಹರ ಮಹಾದೇವ, ಗೋವಿಂದಾ.. ಗೋವಿಂದಾ... ಘೋಷಣೆ - - - ಕನ್ನಡ ಪ್ರಭ ವಾರ್ತೆ ಹರಿಹರ

ನಗರದಲ್ಲಿ ಮಾಘ ಶುಕ್ಲ ಪೌರ್ಣಿಮೆಯ ಬುಧವಾರ ಸಹಸ್ರಾರು ಆಸ್ತಿಕರ ಸಮ್ಮುಖದಲ್ಲಿ ಕ್ಷೇತ್ರನಾಥ ಹರಿಹರೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಿತು.

ರಥೋತ್ಸವ ಅಂಗವಾಗಿ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ಗಣಪತಿ ಪೂಜೆ, ರುದ್ರಾಭಿಷೇಕ ಅಲಂಕಾರ, ಪುಣ್ಯಾಹ, ನಾಂದಿ, ಕಂಕಣ, ಅಂಕುರಾರ್ಪಣೆ, ನವಗ್ರಹ ಸ್ಥಾಪನಾ ಪೂಜಾ, ಜಪ-ತಪ-ಹೋಮ ಹವನಾದಿಗಳು, ಆವಾಹಿತ ದೇವತೆಗಳ ಪೂಜೆ, ಪೂರ್ಣಾಹುತಿ-ಬಲಿದಾನ, ಧ್ವಜಾರೋಹಣ, ಮಹಾಪೂಜೆ, ಮಂತ್ರಪುಷ್ಪ, ಅಷ್ಠಾವಧಾನ ಹಾಗೂ ವಿಶೇಷ ಅಲಂಕಾರ ಸೇವೆಗಳು ಸಂಪನ್ನಗೊಂಡವು.

ದೇವಸ್ಥಾನದಿಂದ ಪಲ್ಲಕ್ಕಿಯಲ್ಲಿ ಹರಿಹರೇಶ್ವರನ ಉತ್ಸವಮೂರ್ತಿಯನ್ನು ಮಂಗಳವಾದ್ಯ ಹಾಗೂ ಭಕ್ತರ ಜಯ ಘೋಷಗಳೊಂದಿಗೆ ರಥದ ಬಳಿ ತರಲಾಯಿತು. ರಥಕ್ಕೆ ಸುತ್ತು ಹೊಡೆದ ನಂತರ ಉತ್ಸವಮೂರ್ತಿಯ ರಥಾರೋಹಣ ಮಾಡಲಾಯಿತು.

ಭಕ್ತರ ಹರಹರ ಮಹಾದೇವ, ಗೋವಿಂದಾ.. ಗೋವಿಂದಾ... ಎಂಬ ಘೋಷಣೆಗಳೊಂದಿಗೆ ಮೊಳಗಿಸಿದರು. ಬ್ರಹ್ಮರಥ ಚಲಿಸಿತು. ರಾಣಿ ಚೆನ್ನಮ್ಮ ವೃತ್ತದವರೆಗೆ ಸಾಗಿ ಪುನಃ ಸ್ವಸ್ಥಾನಕ್ಕೆ ಮರುಳಿತು. ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಭಕ್ತರು, ಬಾಳೆಹಣ್ಣು, ಉತ್ತತ್ತಿಗಳನ್ನು ರಥದ ಕಳಸಕ್ಕೆ ತೂರಿ ಭಕ್ತಿ ಭಾವ ತೋರಿದರು. ನಂತರ ಭಕ್ತರು ಹರಿಹರೇಶ್ವರ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ವಿವಿಧ ಸಂಘ-ಸಂಸ್ಥೆಗಳು ಭಕ್ತರಿಗೆ ಕುಡಿಯುವ ನೀರು, ಪಾನಕ, ಮಜ್ಜಿಗೆ ಬಿಸಿಬೆಳೆ ಬಾತ್, ಮೊಸರನ್ನ, ಜಿಲೇಬಿ ಹಾಗೂ ಅನ್ನದಾಸೋಹದ ವ್ಯವಸ್ಥೆ ಮಾಡಿದ್ದರು. ಜನದಟ್ಟಣೆ ನಿಯಂತ್ರಣಕ್ಕೆ ಸೂಕ್ತ ಪೊಲೀಸ್ ವ್ಯವಸ್ಥೆ ಮಾಡಲಾಗಿತ್ತು. ರಥೋತ್ಸವ ಯಶಸ್ವಿಯಾಗಿ ನಡೆಯಿತು.- - - -19ಎಚ್‍ಆರ್‍ಆರ್02:

ಹರಿಹರದಲ್ಲಿ ಶುಕ್ರವಾರ ಜನ ಸಾಗರದ ಜಯ ಘೋಷಗಳ ನಡುವೆ ಕ್ಷೇತ್ರನಾಥ ಹರಿಹರೇಶ್ವರನ ಬ್ರಹ್ಮರಥೋತ್ಸವ ನಡೆಯಿತು.

-9ಎಚ್‍ಆರ್‍ಆರ್02ಎ: ಹರಿಹರದ ಕ್ಷೇತ್ರನಾಥ ಹರಿಹರೇಶ್ವರ

Share this article