ಹಾಸನ: ಬಹುತೇಕ ಹಾಸನ ಜಿಲ್ಲೆಯ ಯುವ ಕಲಾವಿದರೇ ನಟಿಸಿರುವ ‘ಕಂಗ್ರಾಜುಲೇಷನ್ಸ್ ಬ್ರದರ್’ ಚಿತ್ರ ಇದೇ ನವೆಂಬರ್ ತಿಂಗಳ ೨೧ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದ್ದು, ಚಿತ್ರವನ್ನು ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದು ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನ ಪ್ರದಾನ ಕಾರ್ಯದರ್ಶಿ ಚೌಡಳ್ಳಿ ಜಗದೀಶ್ ಮನವಿ ಮಾಡಿದರು. ಚಿತ್ರದ ಪ್ರಚಾರದ ಅಂಗವಾಗಿ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಹೊಸ ಕಲಾವಿದರು ಬರುತ್ತಿರುವುದು ಸ್ವಾಗತಾರ್ಹ, ಅದರಲ್ಲೂ ಹಾಸನದ ಕಲಾವಿದರು ಬೆಳ್ಳಿತೆರೆಯಲ್ಲಿ ಮಿಂಚುವುದು ನಮ್ಮೆಲ್ಲರ ಹೆಮ್ಮೆಯ ಸಂಗತಿ ಎಂದರು.
ನಿರ್ದೇಶಕ ಪ್ರತಾಪ್ ಗಂಧರ್ವ ಮಾತನಾಡಿ, ಬೆಂಗಳೂರು, ಹಾಸನ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಚಿತ್ರೀಕರಣಗೊಂಡು ಬಿಡುಗಡೆಗೆ ದಿನಗಣನೆ ಎಣಿಸುತ್ತಿರುವ ಈ ಚಿತ್ರ ಯುವ ಮನಸ್ಸುಗಳನ್ನು ಸೆಳೆಯುವ ಚಿತ್ರವಾಗಿದೆ. ಇದರ ಜೊತೆ ಕುಟುಂಬದ ಜೊತೆ ಕುಳಿತು ವೀಕ್ಷಿಸುವ ಚಿತ್ರವಾಗಿದೆ ಎಂದು ತಿಳಿಸಿ, ಚಿತ್ರದ ಯಶಸ್ಸಿಗೆ ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.
ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಖಜಾಂಚಿ ಎಚ್. ಡಿ. ಪಾರ್ಶ್ವನಾಥ್, ಮಲೆನಾಡು ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲರಾದ ಡಾ.ಎಚ್. ಜೆ ಅಮರೇಂದ್ರ, ಎಂಸಿಇ ಕಾಲೇಜು ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ಇಂದಿರಾ ಬಹದ್ದೂರು, ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಮಾಧ್ಯಮ ಸಂಯೋಜಕರಾದ ಕಟ್ಟಾಯ ಶಿವಕುಮಾರ್ ಇತರರು ಇದ್ದರು.