ಕನ್ನಡಪ್ರಭ ವಾರ್ತೆ ಮಂಡ್ಯ
ಏಳು ಜಿಲ್ಲೆಗಳ ಮಹಿಳಾ ಕಾಂಗ್ರೆಸ್ ಅಧ್ಯಕ್ಷರನ್ನು ರಾಜ್ಯಾಧ್ಯಕ್ಷೆ ಸೌಮ್ಯಾರೆಡ್ಡಿ ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದು, ಇದುವರೆಗೂ ಮಂಡ್ಯ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅಂಜನಾ ಶ್ರೀಕಾಂತ್ ಅವರ ಸ್ಥಾನಕ್ಕೆ ಎಚ್.ಬಿ.ಶುಭದಾಯಿನಿ ಅವರನ್ನು ನೇಮಕ ಮಾಡಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್.ಬಿ.ಶುಭದಾಯಿನಿ ಅವರು, ನನ್ನ ಮೇಲೆ ಪಕ್ಷದ ನಾಯಕರು ವಿಶ್ವಾಸವಿಟ್ಟು ಜವಾಬ್ದಾರಿಯುತ ಸ್ಥಾನ ನೀಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಪಕ್ಷವನ್ನು ಬಲವರ್ಧನೆಗೊಳಿಸುವುದಾಗಿ ಹೇಳಿದರು.ನಾನು ಈ ಹಿಂದೆಯೂ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದು, ಸ್ವಾತಂತ್ರ್ಯ ಹೋರಾಟಗಾರರಾದ ಪಿ.ಎನ್.ಜವರಪ್ಪಗೌಡರ ಮೊಮ್ಮಗಳಾಗಿ ಕಳೆದ ೩೦ ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿರುವುದಾಗಿ ತಿಳಿಸಿದರು.
ಪಕ್ಷದೊಳಗೆ ಮಹಿಳಾ ಘಟಕಕ್ಕೆ ಇನ್ನಷ್ಟು ಶಕ್ತಿ ತುಂಬುವುದರೊಂದಿಗೆ ಸಕ್ರಿಯವಾಗಿ ಚಟುವಟಿಕೆಗಳನ್ನು ನಡೆಸಲಾಗುವುದು. ಮಹಿಳಾ ಘಟಕಕ್ಕೆ ನವಚೈತನ್ಯ ತುಂಬುವುದಕ್ಕೆ ಹಗಲಿರುಳು ಶ್ರಮಿಸುತ್ತೇನೆ. ನನ್ನ ಆಯ್ಕೆಗೆ ಸಹಕರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ವಿಧಾನಸಭೆ, ವಿಧಾನಪರಿಷತ್ ಶಾಸಕರು, ಕಾಂಗ್ರೆಸ್ ಮುಖಂಡ ಸ್ಟಾರ್ ಚಂದ್ರು ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ವಿಜಯರಾಧಾಕೃಷ್ಣ, ಪದ್ಮ, ಜ್ಯೋತಿ, ಶಕುಂತಲಾ, ಕಮಲಾ ರಾಜು ಇದ್ದರು.