107 ಕೆರೆಗಳಿಗೆ ನೀರು ತುಂಬಿಸಿದರನ್ನು ಏನೆಂದು ಕರೆಯಬೇಕು : ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿಗೆ ಎಚ್ಡಿಕೆ ತಿರುಗೇಟು

KannadaprabhaNewsNetwork |  
Published : Nov 02, 2024, 01:38 AM ISTUpdated : Nov 02, 2024, 11:47 AM IST
1ಕೆಆರ್ ಎಂಎನ್ 9.ಜೆಪಿಜಿಕೇಂದ್ರ ಸಚಿವ ಕುಮಾರಸ್ವಾಮಿರವರು ಕಾಂಗ್ರೆಸ್ ಪಕ್ಷದಿಂದ ಜೆಡಿಎಸ್ ಸೇರಿದ ಮುಖಂಡರನ್ನು ಬರಮಾಡಿಕೊಂಡರು. | Kannada Prabha

ಸಾರಾಂಶ

  ಹದಿನೇಳು ಕೆರೆಗಳಿಗೆ ನೀರು ತುಂಬಿಸಿದ ವ್ಯಕ್ತಿಯನ್ನು ಭಗೀರಥ ಎನ್ನುವುದಾದರೆ, 107 ಕೆರೆಗಳಿಗೆ ನೀರು ತುಂಬಿಸಿದರನ್ನು ಏನೆಂದು ಕರೆಯಬೇಕು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರಶ್ನಿಸಿದರು.

ಚನ್ನಪಟ್ಟಣ: ಹದಿನೇಳು ಕೆರೆಗಳಿಗೆ ನೀರು ತುಂಬಿಸಿದ ವ್ಯಕ್ತಿಯನ್ನು ಭಗೀರಥ ಎನ್ನುವುದಾದರೆ, 107 ಕೆರೆಗಳಿಗೆ ನೀರು ತುಂಬಿಸಿದರನ್ನು ಏನೆಂದು ಕರೆಯಬೇಕು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರಶ್ನಿಸಿದರು.

ಚನ್ನಪಟ್ಟಣದಲ್ಲಿ ಶುಕ್ರವಾರ ಕಾಂಗ್ರೆಸ್ ಪಕ್ಷದಿಂದ ಜೆಡಿಎಸ್ ಸೇರಿದ ಮುಖಂಡರನ್ನು ಬರಮಾಡಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾಗಿ ಹಾಗೂ ಐದು ವರ್ಷ ಚನ್ನಪಟ್ಟಣ ಶಾಸಕನಾಗಿ 107 ಕೆರೆಗಳಿಗೆ ನೀರು ತುಂಬಿಸಿದ್ದೇನೆ. ಅವರದೇ ಸರ್ಕಾರ ಇದೆ, ಕಡತಗಳನ್ನು ತೆಗೆದು ನೋಡಲಿ. ನಾನು 17 ಕೆರೆಗಳಿಗೆ ನೀರು ತುಂಬಿಸಿದೆ ಎಂದು ಹೇಳುತ್ತಾರೆ, ಆದರೆ 107 ಕೆರೆಗಳಿಗೆ ನೀರು ತುಬಿಸಿದ್ದನ್ನು ಇವರು ಏಕೆ ಮರೆ ಮಾಚುತ್ತಾರೆ? ನಿಜ ಹೇಳುವುದಕ್ಕೆ ಏನಾಗಿದೆ ಅವರಿಗೆ? ಕಡತ ಇಲ್ಲವೇ? ಆದೇಶಗಳು ಇಲ್ಲವೇ? ತೆರೆದು ನೋಡಲಿ ಎಂದು ಕಿಡಿಕಾರಿದರು.

ದೇವೇಗೌಡರು ಇಗ್ಗಲೂರು ಜಲಾಶಯ ಕಟ್ಟಿಸದಿದ್ದರೆ ಇವರು ಹದಿನೇಳು ಕೆರೆಗಳಿಗೆ ನೀರು ತುಂಬಿಸಲು ಸಾಧ್ಯ ಆಗುತ್ತಿತ್ತಾ? ಇವತ್ತು ಚನ್ನಪಟ್ಟಣ, ರಾಮನಗರ ತಾಲೂಕಿನ ಜನರಿಗೆ ಆ ಜಲಾಶಯ ಜೀವನಾಧಾರವಾಗಿದೆ. ಅದನ್ನೇಕೆ ಇವರು ಹೇಳುವುದಿಲ್ಲ? ಹಾಗಾದರೆ ಒಂದು ಬೃಹತ್ ಜಲಾಶಯವನ್ನೇ ಕಟ್ಟಿಸಿದ ದೇವೇಗೌಡರನ್ನು ಏನೆಂದು ಕರೆಯಬೇಕು? 107 ಕೆರೆಗಳಿಗೆ ನೀರು ತುಂಬಿಸಿದ ನನ್ನನ್ನು ಏನೆಂದು ಕರೆಯಬೇಕು? ನಾವೂ ಭಗೀರಥರು ಎಂದು ಬೋರ್ಡ್ ಹಾಕಿಕೊಂಡು ಓಡಾಡುತ್ತಿದ್ದೇವೆಯೇ? ಎಂದು ಖಾರವಾಗಿ ಪ್ರಶ್ನಿಸಿದರು.

ಬಹಿರಂಗ ಚರ್ಚೆಗೆ ಬರಲಿ ಎಂದು ಮಾಜಿ ಸಂಸದ ಸುರೇಶ್ ಸವಾಲು ಹಾಕಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಚನ್ನಪಟ್ಟಣಕ್ಕೆ ಸುರೇಶ್ ಕೊಡುಗೆ ಏನು? ದಿನವೂ ರಾತ್ರಿ ಮತ್ತಿಕೆರೆ ಹತ್ತಿರ ಲೋಡುಗಟ್ಟಲೇ ಕಲ್ಲು ಬರುತ್ತಲ್ಲಾ.. ಹೊರ ದೇಶಕ್ಕೆ ಕಳಿಸುವುದಕ್ಕೆ.. ಅದೇ ಅವರ ಕೊಡುಗೆ. ಅಂತಹವರ ಜತೆ ನಾನು ಬಹಿರಂಗ ಚರ್ಚೆಗೆ ಬರಬೇಕಾ ಎಂದು ತಿರುಗೇಟು ಕೊಟ್ಟರು.ವೈನಾಡಿನಲ್ಲಿ ಪ್ರಿಯಾಂಕಾಗಾಂಧಿ ಅವರನ್ನು ಏಕೆ ನಿಲ್ಲಿಸಿದರು?:

ಎರಡು ಬಾರಿ ನಿಖಿಲ್ ಸೋತಿದ್ದಾರೆ ಎಂದು ಜೆಡಿಎಸ್ ನಾಯಕರು ಹೇಳುತ್ತಿರುವುದಕ್ಕೆ ಕಾಂಗ್ರೆಸ್ ನಾಯಕರು ಟೀಕೆ ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಇದು ಕರ್ನಾಟಕ, ಯಾರು ಎಲ್ಲಿಗೆ ಬೇಕಾದರೂ ಹೋಗಿ ನಿಲ್ಲಬಹುದು. ರಾಹುಲ್ ಗಾಂಧಿ ಅಮೇಥಿಯಲ್ಲಿ ಸೋಲುತ್ತೇನೆ ಎಂದು ಹೆದರಿ ಕೇರಳದ ವೈನಾಡಿಗೆ ಹೋಗಿ ನಿಲ್ಲಲಿಲ್ಲವೇ? ಪ್ರಿಯಾಂಕಾ ಗಾಂಧಿ ಅಲ್ಲೇ ಉತ್ತರ ಪ್ರದೇಶದಲ್ಲಿ ಸ್ಪರ್ಧೆ ಮಾಡಬಹುದಿತ್ತು. ಅವರ ಕುಟುಂಬ ಯಾವಾಗಲೂ ಅಮೇಥಿ, ರಾಯ್ ಬರೇಲಿ ಕ್ಷೇತ್ರಗಳಲ್ಲಿ ನಿಲ್ಲುತ್ತಿದ್ದರು. ಹಾಗಾದರೆ, ಅವರು ಕೇರಳಕ್ಕೆ ಬಂದು ಏಕೆ ನಿಂತರು? ಈ ಬಗ್ಗೆ ಕಾಂಗ್ರೆಸ್ ನಾಯಕರ ಮೌನ ಯಾಕೆ ಎಂದು ತಿರುಗೇಟು ಕೊಟ್ಟರು.

ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ನಾಯಕರು

ದೀಪಾವಳಿ ದಿನದಂದು ಚನ್ನಪಟ್ಟಣ ಕ್ಷೇತ್ರದ ಅನೇಕ ಕಾಂಗ್ರೆಸ್ ಮುಖಂಡರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಮುಖ್ಯವಾಗಿ ಕುರುಬ ಸಮುದಾಯದ ನಾಯಕಿ ಮಂಗಳವಾರಪೇಟೆಯ ಗೀತಾ ಶಿವರಾಂ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡರು. ಗೀತಾ ಶಿವರಾಂ ಅವರು ನಗರಸಭೆ ಮಾಜಿ ಸದಸ್ಯರಾಗಿದ್ದು, ಪ್ರಭಾವಿ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಅವರ ನಿವಾಸಕ್ಕೆ ಭೇಟಿ ನೀಡಿದ್ದ ಸಚಿವರು, ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಹಾಗೆಯೇ, ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಜೆ.ಎಸ್.ರಾಜು, ಕಾಳಿಕಾಂಭ ದೇವಾಲಯ ಅಭಿವೃದ್ಧಿ ಅಧ್ಯಕ್ಷ ವೀರಭದ್ರಚಾರ್, ಸಮಾಜದ ಮುಖಂಡರಾದ ಬ್ರಹ್ಮಚಾರ್, ಸುರೇಶಚಾರ್, ರಘು ಆಚಾರ್, ಅಶ್ವತಚಾರ್ ಸೇರಿದಂತೆ ಹಲವಾರು ನಾಯಕರು ಜೆಡಿಎಸ್ ಸೇರ್ಪಡೆಯಾದರು. ಈ ಚುನಾವಣೆಯಲ್ಲಿ ಸಮುದಾಯದ ಬೆಂಬಲ ನಿಖಿಲ್ ಕುಮಾರಸ್ವಾಮಿ ಅವರಿಗೆ ಇರಲಿದೆ ಎಂದು ಘೋಷಿಸಿದರು. 

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ