ಚನ್ನಪಟ್ಟಣ: ಚುನಾವಣೆ ದೃಷ್ಟಿಯಿಂದ ನಾನು ಇಲ್ಲಿಗೆ ಬರುತ್ತಿಲ್ಲ. ನಾನು ಈ ಜಿಲ್ಲೆಯವನು. ನಾಲ್ಕು ಬಾರಿ ಈ ಭಾಗದ ಜನ ನನ್ನನ್ನು ಆಯ್ಕೆ ಮಾಡಿದ್ದಾರೆ. ನಾನು ಬೇರೆ ಎಲ್ಲೂ ಹೋಗಲು ಆಗುವುದಿಲ್ಲ. ನಾನು ಇಲ್ಲೇ ಹುಟ್ಟಿದ್ದೇನೆ, ಇಲ್ಲೇ ಸಾಯುತ್ತೇನೆ. ನಿಮ್ಮನ್ನು ಟೂರಿಂಗ್ ಟಾಕೀಸ್ ಥರ ಬಳಸಲು ಆಗುವುದಿಲ್ಲ. ನೀವು ಹೃದಯವಂತಿಕೆಯಿಂದ ನಮಗೆ ಶಕ್ತಿ ನೀಡಬೇಕು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಾರ್ವಜನಿಕರಿಗೆ ಮನವಿ ಮಾಡಿದರು. ತಾಲೂಕಿನ ಕೆಂಗಲ್ ಬಳಿಯ ತಿಮ್ಮಮ್ಮ ದಾಸೇಗೌಡ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ಭವ್ಯವಾದ ಗುರುಭವನವನ್ನು ಮಂಜೂರು ಮಾಡಲಾಗುವುದು. ಇಲ್ಲಿ ಅನೇಕ ಶಿಕ್ಷಕರಿಗೆ ನಿವೇಶನ ಇಲ್ಲ ಎಂದು ಸಮಸ್ಯೆ ಹೇಳಿಕೊಂಡಿದ್ದಾರೆ. ನಿವೇಶನ ನೀಡುವ ಬಗ್ಗೆ ಚರ್ಚೆ ಮಾಡುತ್ತೇನೆ. ಅದೇ ರೀತಿ ಗುರುಭವನ ಸ್ಥಾಪನೆಗೆ ನೀವೇ ಜಾಗ ಗುರುತಿಸಿ ಎಂದರು.
ರಾಜ್ಯದಲ್ಲಿ ಪ್ರತಿ ವರ್ಷ ೧೦ ಸಾವಿರ ಕೋಟಿ ರು. ಸಿಎಸ್ಆರ್ ನಿಧಿ ಸಂಗ್ರಹವಾಗುತ್ತದೆ. ಮುಂದಿನ ದಿನಗಳಲ್ಲಿ ಇದನ್ನು ಶಿಕ್ಷಣ ಕ್ಷೇತ್ರಕ್ಕೆ ಬಳಸಲು ತೀರ್ಮಾನಿಸಿದ್ದೇವೆ. ಪ್ರತಿ ಮೂರ್ನಾಲ್ಕು ಪಂಚಾಯಿತಿ ಮಟ್ಟದಲ್ಲಿ ಪಬ್ಲಿಕ್ ಶಾಲೆ ನಿರ್ಮಿಸಲು ತೀರ್ಮಾನಿಸಿದ್ದೇವೆ. ಈ ಶಾಲೆಗಳನ್ನು ಖಾಸಗಿಯವರು ನಿಭಾಯಿಸುತ್ತಾರೆ. ರಾಜ್ಯದಲ್ಲಿ ೫೦ ಸಾವಿರ ಶಿಕ್ಷಕರ ಕೊರತೆ ಇದ್ದು, ಈ ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ಖಾಸಗಿ ಶಾಲೆಯವರು ತುಂಬಲಿದ್ದಾರೆ ಎಂದರು.
ಎಲ್ಲಾ ತಾಲೂಕುಗಳಲ್ಲಿ ಮೂರ್ನಾಲ್ಕು ಶಾಲೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಮುಂದೆ ಶಿಕ್ಷಣಕ್ಕಾಗಿ ಯಾರೂ ನಗರಕ್ಕೆ ವಲಸೆ ಹೋಗಬಾರದು ಎಂಬುದು ನಮ್ಮ ಆಲೋಚನೆ. ಮುಂದಿನ ೩ ವರ್ಷಗಲ್ಲಿ ಸುಮಾರು ೨ ಸಾವಿರ ಶಾಲೆ ನಿರ್ಮಿಸಲು ತೀರ್ಮಾನಿಸಿದ್ದೇವೆ. ಈ ಜಿಲ್ಲೆಯಲ್ಲಿರುವ ಎಲ್ಲಾ ಕಂಪನಿಗಳು ತಮ್ಮ ಸಿಎಸ್ಆರ್ ನಿಧಿಯನ್ನು ಇದಕ್ಕೆ ಬಳಸಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ ಎಂದರು.ಚನ್ನಪಟ್ಟಣದ ಕೆಂಗಲ್ನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಗುರುಭವನಕ್ಕೆ ಇಲ್ಲಿನ ಶಿಕ್ಷಕರು ಮನವಿ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ, ಉನ್ನತ ಹುದ್ದೆಯಲ್ಲಿದ್ದವರ ಕ್ಷೇತ್ರದಲ್ಲಿ ಗುರು ಭವನ ಇಲ್ಲ ಇಲ್ಲವೇ?. ಈಗಾಗಲೇ ತಾಲೂಕಿಗೆ ನೂರಾರು ಕೋಟಿ ರು. ವಿಶೇಷ ಅನುದಾನ ತಂದಿದ್ದೇನೆ. ನಾನು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಆಗಲಿ, ಎಂಎಲ್ಸಿ ಸಿ.ಪಿ. ಯೋಗೇಶ್ವರ್ ಅವರನ್ನಾಗಲಿ ದೂಷಿಸುವುದಿಲ್ಲ. ಯಾರೇ ಆಗಲಿ ರಾಜಕೀಯದಲ್ಲಿ ಎಲ್ಲರಿಗೂ ಬದ್ಧತೆ ಇರಬೇಕು ಎಂದು ಎಚ್.ಡಿ ಕುಮಾರಸ್ವಾಮಿಗೆ ಟಾಂಗ್ ಡಿಸಿಎಂ ಡಿಕೆ ಶಿವಕುಮಾರ್ ನೀಡಿದರು.
ಕನಕಪುರದಲ್ಲಿ ನಾನು ನನ್ನ ಸ್ವಂತ ೨೦ ಎಕರೆ ಭೂಮಿಯನ್ನು ಸರ್ಕಾರಿ ಶಾಲೆಗೆ ದಾನ ಮಾಡಿದ್ದೇನೆ. ನಾನು ತಿಹಾರ್ ಜೈಲಿನಿಂದ ಬಂದಾಗ ಒಂದು ಮಾತು ಹೇಳಿದ್ದೆ, ನಾನು ಹುಟ್ಟುತ್ತಾ ಕೃಷಿಕ, ವೃತ್ತಿಯಲ್ಲಿ ಉದ್ಯಮಿ, ಆಯ್ಕೆಯಲ್ಲಿ ಶಿಕ್ಷಣ ತಜ್ಞ, ಆಸಕ್ತಿಯಲ್ಲಿ ರಾಜಕಾರಣಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.