- ಭೂಮಿ ಸೋಶಿಯಲ್ ಡೆವಲಪ್ಮೆಂಟ್ ಫೌಂಡೇಷನ್ ಅಸ್ಥಿತ್ವಕ್ಕೆ: ಅಧ್ಯಕ್ಷ
ಕನ್ನಡಪ್ರಭ ವಾರ್ತೆ ಹರಿಹರ
ನಗರದ ನಡುವಲಪೇಟೆಯ ನಾಮದೇವ ಸಿಂಪಿ ಕಲ್ಯಾಣ ಮಂಟಪದಲ್ಲಿ ಡಿ.3ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆವರೆಗೆ ಉಚಿತ ಆರೋಗ್ಯ ತಪಾಸಣೆ, ನೇತ್ರ ತಪಾಸಣೆ ಹಾಗೂ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಭೂಮಿ ಸೋಶಿಯಲ್ ಡೆವಲಪ್ಮೆಂಟ್ ಫೌಂಡೇಷನ್ ಅಧ್ಯಕ್ಷ ಟಿ.ಎನ್. ರಾಘವೇಂದ್ರ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಹರಿಹರದಲ್ಲಿ ನೂತನವಾಗಿ ಭೂಮಿ ಸೋಶಿಯಲ್ ಡೆವಲಪ್ಮೆಂಟ್ ಫೌಂಡೇಷನ್ ಅಸ್ಥಿತ್ವಕ್ಕೆ ಬಂದಿದೆ. ಫೌಂಡೇಷನ್ ಪ್ರಾರಂಭೋತ್ಸವ ಹಿನ್ನೆಲೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ತುಂಗಭದ್ರಾ ನದಿ, ದೇವಸ್ಥಾನ, ದೇವಸ್ಥಾನಗಳ ಸ್ವಚ್ಛತೆ, ನಮ್ಮ ಸುತ್ತಮುತ್ತಲಿನ ಪರಿಸರ ಸಂರಕ್ಷಣೆ, ಸಾಮಾಜಿಕ ಕಳಕಳಿ, ಸಮಾಜದ ಜನತೆಯ ಆರೊಗ್ಯದ ಬಗ್ಗೆ ಕಳಕಳಿಯನ್ನು ಫೌಂಡೇಷನ್ ಹೊಂದಿದೆ ಎಂದರು.
ಫೌಂಡೇಷನ್ ಪ್ರಧಾನ ಕಾರ್ಯದರ್ಶಿ ಎ.ರವಿಕುಮಾರ್ ಮಾತನಾಡಿ, ದಾವಣಗೆರೆಯ ಎಸ್.ಎಸ್. ನಾರಾಯಣ ಆಸ್ಪತ್ರೆ, ವಾಸನ್ ಕಣ್ಣಿನ ಆಸ್ಪತ್ರೆ, ಅಶ್ವಿನಿ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಪಿ.ಜಿ. ಸೆಂಟರ್, ಸಿದ್ಧಗಂಗಾ ಶ್ರೀ ಸ್ವಯಂಪ್ರೇರಿತ ರಕ್ತ ಕೇಂದ್ರ ಆಶ್ರಯದಲ್ಲಿ ನಡೆಯಲಿದೆ ಎಂದರು.
ಇಸಿಜಿ, 2ಡಿ ಇಕೋ ಮತ್ತು ವೈದ್ಯರೊಂದಿಗೆ ಸಮಾಲೋಚನೆ ಹೃದಯರೋಗ ನರರೋಗ, ಮೂತ್ರಕೋಶ, ಮೂತ್ರಪಿಂಡ, ಗ್ಯಾಸ್ಟೋಸೈನ್ಸ್ ವೈದ್ಯರು ಲಭ್ಯವಿರುತ್ತಾರೆ. ಹೃದಯಸಂಬಂಧಿ ರೋಗಿಗಳು, ಬಿ.ಪಿ. ಸಕ್ಕರೆ ಕಾಯಿಲೆ ಇರುವವರು ತಮ್ಮ ರಿಪೋರ್ಟ್ಗಳು ಹಾಗೂ ಮಾತ್ರೆಗಳು ಶಿಬಿರಕ್ಕೆ ಬರುವಾಗ ಕಡ್ಡಾಯವಾಗಿ ತರಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಫೌಂಡೇಷನ್ ಉಪಾಧ್ಯಕ್ಷರಾದ ಅಂಜು ಸುರೇಶ್, ಅರುಣಕುಮಾರ್ ಸ್ವಾಮಿ, ಸಹ ಕಾರ್ಯದರ್ಶಿ ಸಾಕ್ಷಿ ಪಿ. ಸಿಂಧೆ, ಖಜಾಂಚಿ ಗಂಗಾಧರ ದುರುಗೋಜಿ, ಪ್ರವೀಣ್ ಮಜ್ಜಿಗಿ, ಎಚ್.ಪ್ರಶಾಂತ್, ಅಂಬುಜಾಬಾಯಿ ರಾಜೊಳಿ ಉಪಸ್ಥಿತರಿದ್ದರು.
-02HRR.01: