ಕನ್ನಡಪ್ರಭ ವಾರ್ತೆ ಶಿವಮೊಗ್ಗ
4 ಸಾವಿರಕ್ಕೂ ಹೆಚ್ಚು ಜನರು ರನ್ ಮಲೆನಾಡು ಮ್ಯಾರಥಾನ್ ಮೂಲಕ ಮಲೆನಾಡಿನ ಜನರ ಆರೋಗ್ಯ, ಪರಿಸರ ಸಂರಕ್ಷಣೆಗಾಗಿ ನಗರದ ರಸ್ತೆಗಳಲ್ಲಿ ಓಡಿದರು. ನಗರದಲ್ಲಿ ನಡೆದ ಮ್ಯಾರಥಾನ್ ಓಟಕ್ಕೆ ಇದೇ ಮೊದಲ ಬಾರಿಗೆ ಅಧಿಕ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದು ಕಂಡು ಬಂತು. ಈ ಮೂಲಕ ಜಿಲ್ಲೆಯ ಮ್ಯಾರಥಾನ್ ಇತಿಹಾಸದಲ್ಲಿ ರನ್ ಮಲೆನಾಡು ಓಟವು ದಾಖಲೆ ಸೃಷ್ಟಿಸಿತು.
ನಗರದ ನೆಹರು ಕ್ರೀಡಾಂಗಣದ ಮುಂಭಾಗದಿಂದ ಬೆಳಿಗ್ಗೆ ಆರಂಭಗೊಂಡ ರನ್ ಮಲೆನಾಡು ಮ್ಯಾರಥಾನ್ ಓಟಕ್ಕೆ ರಾಜ್ಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮೊಹಮ್ಮದ್ ಹ್ಯಾರೀಸ್ ನಲ್ಪಾಡ್ ಅವರು ಸಾಂಕೇತಿಕ ಗಿಡಕ್ಕೆ ನೀರೆರೆದು ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಆ ಬಳಿಕ ಮಾತನಾಡಿದ ಅವರು, ಬೆಂಗಳೂರು ಜನರಿಗೆ ಬೆಂಗಳೂರಿನಷ್ಟು ಒಳ್ಳೆಯ ವಾತಾವರಣ ಇನ್ನೆಲ್ಲೂ ಇಲ್ಲ ಎನ್ನುವ ಜಂಭವಿದೆ, ಆದರೆ ನಾನು ಶಿವಮೊಗ್ಗಕ್ಕೆ ಬಂದಾಗ ಇಲ್ಲಿನ ಸುಂದರವಾದ ವಾತಾವರಣದ ಅನುಭವದೊಂದಿಗೆ ಬೆಂಗಳೂರನ್ನೇ ಮರೆತು ಬಿಟ್ಟಿದ್ದೇನೆ. ಇಂತಹ ಮಲೆನಾಡಿನ ಈ ಸೌಂದರ್ಯವನ್ನು ಆಸ್ವಾದಿಸುವುದೇ ಆನಂದ ಎಂದು ಬಣ್ಣಿಸಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಮಾತನಾಡಿ, ಮಲೆನಾಡು ಉಳಿಯಬೇಕಿದೆ, ಹಾಗೆಯೇ ಜನರ ಆರೋಗ್ಯವೂ ಸುಧಾರಣೆ ಕಾಣಬೇಕಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ, ಪರಿಸರ ರಕ್ಷಣೆ, ಕ್ರೀಡಾ ಸಂಸ್ಕೃತಿ ಹಾಗೂ ವಿಶೇಷ ಚೇತನರ ಸಬಲೀಕರಣದ ಉದ್ದೇಶದೊಂದಿಗೆ ಡಾ. ಶರತ್ ಮರಿಯಪ್ಪ ಫೌಂಡೇಷನ್ ಆಯೋಜಿಸಿದ ರನ್ ಮಲೆನಾಡು ಓಟಕ್ಕೆ ದೊಡ್ಡ ಬೆಂಬಲ ಸಿಕ್ಕಿದೆ. ಇದು ಇತರರಿಗೂ ಪ್ರೇರಣೆಯಾಗಿದೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ. ಶ್ರೀಕಾಂತ್ ಮಾತನಾಡಿ, ರನ್ ಮಲೆನಾಡು ಒಳ್ಳೆಯ ಉದ್ದೇಶಕ್ಕಾಗಿ ನಡೆದಿದೆ. ಆರೋಗ್ಯ, ಪರಿಸರ ರಕ್ಷಣೆ, ಕ್ರೀಡಾ ಸಂಸ್ಕೃತಿ ಹಾಗೂ ವಿಶೇಷ ಚೇತನರ ಸಬಲೀಕರಣದ ಸಂದೇಶ ಸಾರುವುದಕ್ಕೆ ಇಲ್ಲಿ 4 ಸಾವಿರಕ್ಕೂ ಹೆಚ್ಚು ಜನರು, ಕ್ರೀಡಾಪಟುಗಳು, ಮಕ್ಕಳು , ಹಿರಿಯರು ಮಳೆಯನ್ನು ಲೆಕ್ಕಿಸದೆ ಮಲೆನಾಡಿಗಾಗಿ ಓಡಿದ್ದು ಮರೆಯಲಾಗದ ಕ್ಷಣ ಎಂದರು.
ಕಾರ್ಯಕ್ರಮದಲ್ಲಿ ಹಾಪ್ಕಾಮ್ಸ್ ಅಧ್ಯಕ್ಷ ವಿಜಯ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಕೆ. ರಂಗನಾಥ್, ವಿನಯ್ ತಾಂದ್ಲೆ, ಪಾಲಾಕ್ಷ, ಗಿರೀಶ್, ರೇಖಾ ರಂಗನಾಥ್ ಮತ್ತಿತರರು ಇದ್ದರು.
ಪೋಟೋ: 06ಎಸ್ಎಂಜಿಕೆಪಿ04