ಆಸ್ತಿ, ಹಣಕ್ಕಿಂತ ಆರೋಗ್ಯವೇ ಮುಖ್ಯ: ಕ್ಲಿಪರ್ಡ್ ರೋಷನ್

KannadaprabhaNewsNetwork | Published : Nov 14, 2023 1:16 AM

ಸಾರಾಂಶ

ಸ್ತ್ರೀಬಂಧು ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ದಶಮಾನೋತ್ಸವ

ಕನ್ನಡಪ್ರಭ ವಾರ್ತೆ, ಭದ್ರಾವತಿ

ಮನುಷ್ಯರಿಗೆ ಆಸ್ತಿ, ಹಣಕ್ಕಿಂತ ಆರೋಗ್ಯವೇ ಮುಖ್ಯ. ಈ ಹಿನ್ನೆಲೆಯಲ್ಲಿ ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡಬೇಕೆಂದು ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಷಿಯಲ್ ಸರ್ವೀಸ್ ಸೊಸೈಟಿ ನಿರ್ದೇಶಕ ಫಾದರ್। ಕ್ಲಿಫರ್ಡ್ ರೋಷನ್ ಪಿಂಟೊ ಹೇಳಿದರು.

ತಾಲೂಕಿನ ಕಾರೇಹಳ್ಳಿ ಸಮುದಾಯ ಭವನದಲ್ಲಿ ಸೊಸೈಟಿಯ 35ನೇ ವಾರ್ಷಿಕೋತ್ಸವ ಹಾಗೂ ಸ್ತ್ರೀಬಂಧು ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ದಶಮಾನೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ಜಾಗೃತಿ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಮನುಷ್ಯರ ಬಳಿ ಎಷ್ಟೇ ಹಣ, ಚಿನ್ನ, ಆಸ್ತಿ ಇದ್ದರೂ, ಆಗರ್ಭ ಶ್ರೀಮಂತರಾಗಿದ್ದರೂ ಯಾವುದೂ ಲೆಕ್ಕಕ್ಕೆ ಬರುವುದಿಲ್ಲ. ಆರೋಗ್ಯವಂತನಾಗಿದ್ದರೇ ಮಾತ್ರ ಎಲ್ಲ ಶ್ರೀಮಂತಿಕೆ ಅಳಿಸಿಹಾಕಬಹುದು ಎಂದರು.

ಕಾರೇಹಳ್ಳಿ ಧರ್ಮಕೇಂದ್ರದ ಫಾದರ್। ಸಂತೋಷ್ ಮಾತನಾಡಿ, ನಗುವಿನಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.

ಶಿವಮೊಗ್ಗ ನಂಜಪ್ಪ ಆಸ್ಪತ್ರೆ ಸ್ತ್ರೀರೋಗ ತಜ್ಞೆ ನಮ್ರತಾ ಉಡುಪ, ಸ್ತನಕ್ಯಾನ್ಸರ್, ಗರ್ಭಕೋಶ ಮತ್ತು ಕರುಳು ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಿದರು.

ಶಿಬಿರದಲ್ಲಿ ಶಿವಮೊಗ್ಗ ನಂಜಪ್ಪ ಆಸ್ಪತ್ರೆ ಜನರಲ್ ಫಿಜಿಷಿಯನ್ ಹಾಗೂ ಮೂಳೆ, ಕೀಳು ಮತ್ತು ಮಕ್ಕಳ ತಜ್ಞರು ಉಚಿತ ತಪಾಸಣೆ ಮತ್ತು ಚಿಕಿತ್ಸೆ ನೀಡಿದರು.

ಶಿವಮೊಗ್ಗ ಐದೃಷ್ಟಿ ಆಸ್ಪತ್ರೆಯಿಂದ ಉಚಿತ ತಪಾಸಣೆ ನಡೆಸಲಾಯಿತು. ಕಾರೇಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸುಮಾರು 142 ಗ್ರಾಮಸ್ಥರು ಶಿಬಿರದ ಸದುಪಯೋಗ ಪಡೆದುಕೊಂಡರು.

- - - -ಡಿ13ಬಿಡಿವಿಟಿ1: ಕಾರೇಹಳ್ಳಿ ಸಮುದಾಯ ಭವನದಲ್ಲಿ ಆರೋಗ್ಯ ಜಾಗೃತಿ- ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಫಾದರ್। ಕ್ಲಿಫರ್ಡ್ ರೋಷನ್ ಪಿಂಟೊ ಉದ್ಘಾಟಿಸಿದರು.

Share this article