ಹೊನ್ನಾವರ: ನಾವು ೭೯ ನೇ ಸ್ವಾತಂತ್ರ್ಯೋತ್ಸವ ಆಚರಿಸಿಕೊಳ್ಳುತ್ತಿದ್ದೇವೆ. ಸಾರ್ವಜನಿಕ ಆರೋಗ್ಯ ಸೇವೆಗೆ ಅವಕಾಶ ದೊರಕಿರುವುದು ನಮ್ಮೆಲ್ಲರ ಸೌಭಾಗ್ಯ. ಆರೋಗ್ಯ ಸೇವೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ದೊರಕುವಂತಾಗಬೇಕು. ಇದಕ್ಕೆ ನಾವೆಲ್ಲರೂ ಸೇರಿ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದು ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಜೇಶ ಕಿಣಿ ಹೇಳಿದರು.ಅವರು ತಾಲೂಕು ಆಸ್ಪತ್ರೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನಡೆಸಿ ಮಾತನಾಡಿದರು.
ನಂತರ ಆಸ್ಪತ್ರೆಯ ಹಾಲ್ನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಸಿಬ್ಬಂದಿ ವರ್ಗ ಮತ್ತು ವೈದ್ಯಾಧಿಕಾರಿಗಳು, ಹಾಡು, ನೃತ್ಯ, ನಾಟಕದಲ್ಲಿ ಮಿಮಿಕ್ರಿಯಲ್ಲಿ ಭಾಗವಹಿಸಿ ಮನರಂಜಿಸಿದರು.
ವೈದ್ಯಾಧಿಕಾರಿಗಳು ಹಾಡು ಮತ್ತು ನಾಟಕದ ಮೂಲಕ ಗಮನ ಸೆಳೆದರು.ಕಾರ್ಯಕ್ರಮದಲ್ಲಿ ಸಹಾಯಕ ಆಡಳಿತಾಧಿಕಾರಿ ಶಶಿಕಲಾ ನಾಯ್ಕ ಸೇರಿದಂತೆ, ಎಲ್ಲ ತಜ್ಞ ವೈದ್ಯರು, ಸಿಬ್ಬಂದಿ ವರ್ಗ ಭಾಗವಹಿಸಿದರು. ಕ್ಷಕಿರಣ ಅಧಿಕಾರಿಗಳಾದ ಚಂದ್ರಶೇಖರ ಕಳಸ ಕಾರ್ಯಕ್ರಮ ನಿರ್ವಹಿಸಿದರು.