ಕನ್ನಡಪ್ರಭ ವಾರ್ತೆ ಮೈಸೂರುಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ [ಮೂಡಾ] ಹಗರಣದಲ್ಲಿ ತಮ್ಮ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮತಿ ನೀಡಿಕೆ, ಇದರ ವಿರುದ್ಧ ಹೈಕೋರ್ಟಿನಲ್ಲಿ ತಾವು ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ,ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.ಮೂಡ ಹಗರಣ ವಿರೋಧಿಸಿ ಪ್ರತಿಪಕ್ಷಗಳಾದ ಬಿಜೆಪಿ- ಜೆಡಿಎಸ್ ನಡೆಸಿದ ಮೈಸೂರು ಚಲೋ ವಿರೋಧಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆದ ಜನಾಂದೋಲನ ಸಮಾವೇಶದ ನಂತರವೂ ಶ್ರಾವಣ ಶನಿವಾರ ಅಂಗವಾಗಿ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದ್ದ ಸಿದ್ದರಾಮಯ್ಯ ಅವರು ಒಂದು ತಿಂಗಳ ಒಳಗಾಗಿ ಮತ್ತೊಂದು ಬಾರಿ ಭೇಟಿ ನೀಡಿ, ಪೂಜೆ ಸಲ್ಲಿಸಿರುವುದು ಗಮನಾರ್ಹ.ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಮೊದಲ ಸಭೆಯ ಹಿನ್ನೆಲೆಯಲ್ಲಿ ಬೆಟ್ಟಕ್ಕೆಭೇಟಿ ನೀಡಿದ್ದರಿಂದ ದೇವಿಯ ದರ್ಶನ ಪಡೆದೆ ಎಂದು ಸಿದ್ದರಾಮಯ್ಯ ಎಷ್ಟೇ ಹೇಳಿಕೊಂಡರೂ ಹೈಕೋರ್ಟಿನಲ್ಲಿ ಸಲ್ಲಿಸಿರುವ ರಿಟ್ ಅರ್ಜಿಯ ತೀರ್ಪು ತಮ್ಮ ಪರವಾಗಿರಲಿ ಎಂದು ಹಿತೈಷಿಗಳ ಸಲಹೆ ಮೇರೆಗೆ ಶಕ್ತಿದೇವತೆ ಎದುರು ಪ್ರಾರ್ಥಿಸಿದ್ದಾರೆ ಎನ್ನಲಾಗಿದೆ.ಇದಕ್ಕಾಗಿ ಸೋಮವಾರ ಸಂಜೆಯೇ ವಿಶೇಷ ವಿಮಾನದಲ್ಲಿ ಮೈಸೂರಿಗೆ ಆಗಮಿಸಿ, ವಾಸ್ತವ್ಯ ಹೂಡಿದ್ದ ಅವರು ಮಂಗಳವಾರ ಅರಮನೆ ಎದುರು ಸುವರ್ಣ ಕರ್ನಾಟಕ ಕನ್ನಡರಥಕ್ಕೆ ಚಾಲನೆ ನೀಡಿ, ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಂತರ ಪ್ರಾಧಿಕಾರದ ಸಭೆ ನಡೆಸಿ, ವಿಶೇಷ ವಿಮಾನದಲ್ಲಿಯೇ ಬೆಂಗಳೂರಿಗೆ ತೆರಳಿದರು.ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್, ರಾಮಲಿಂಗಾರೆಡ್ಡಿ, ಎಚ್.ಕೆ. ಪಾಟೀಲ್, ಶಾಸಕದಾದ ಜಿ.ಟಿ, ದೇವೇಗೌಡ, ಯತೀಂದ್ರ ಸಿದ್ದರಾಮಯ್ಯ, ಡಾ.ಡಿ. ತಿಮ್ಮಯ್ಯ, ಕೆ. ಹರೀಶ್ ಗೌಡ, ಡಿ. ರವಿಶಂಕರ್, ಸಿ.ಎನ್. ಮಂಜೇಗೌಡ, ಕೆ. ವಿವೇಕಾನಂದ ಮೊದಲಾದವರು ಅವರಿಗೆ ಸಾಥ್ ನೀಡಿದ್ದರು.