ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿಇಲ್ಲಿನ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಲಾರಿ ನಿಲ್ಲಿಸಿ ಮಲಗಿದ್ದ ಲಾರಿ ಚಾಲಕರೋರ್ವರು ಹೃದಯಾಘಾತದಿಂದ ಲಾರಿಯಲ್ಲೇ ಮೃತಪಟ್ಟಿದ್ದು, ಎರಡು ದಿನಗಳ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.
ಮೃತ ಖಲೀಲ್ ಖಾನ್ ಬುಧವಾರದಂದು ರಾತ್ರಿ ತನ್ನ ಮನೆಗೆ ಪೋನಾಯಿಸಿ ತನಗೆ ಎದೆ ನೋವು ಕಾಣಿಸಿರುವುದರಿಂದ ಉಪ್ಪಿನಂಗಡಿಯಲ್ಲಿ ವಿಶ್ರಾಂತಿ ಪಡೆದು ನಾಳೆ ಬರುವೆನೆಂದು ತಿಳಿಸಿದ್ದು, ಗುರುವಾರದಂದು ಅವರು ಮನೆಗೆ ಹಿಂತಿರುಗದೇ ಇದ್ದ ಕಾರಣ ಅವರ ಪತ್ತೆಗಾಗಿ ಸಾಮಾಜಿಕ ಜಾಲತಾಣದ ಮೊರೆ ಹೋಗಲಾಯಿತು. ಈ ವೇಳೆ ಉಪ್ಪಿನಂಗಡಿಯ ರಾ ಹೆ ೭೫ ರಲ್ಲಿನ ಲೋಬೋ ಕಾಂಪ್ಲೆಕ್ಸ್ ಮುಂಭಾಗದಲ್ಲಿ ನಿಲ್ಲಿಸಲಾದ ಲಾರಿಯನ್ನು ಪರಿಶೀಲಿಸಿದಾಗ ಅದರಲ್ಲಿ ವ್ಯಕ್ತಿಯೋರ್ವರು ಮಲಗಿದ್ದ ಸ್ಥಿತಿಯಲ್ಲಿಯೇ ಮೃತಪಟ್ಟಿರುವುದು ಕಂಡು ಬಂತು.
ಬಳಿಕ ಉಪ್ಪಿನಂಗಡಿಯ ಸಾಮಾಜಿಕ ಕಾರ್ಯಕರ್ತ ಫಾರೂಕ್ ಜಿಂದಗಿ ಹಾಗೂ ಉಪ್ಪಿನಂಗಡಿ ಎಸ್ಕೆಸ್ಸೆಸ್ಸೆಫ್ ವಿಖಾಯದ ತಂಡದವರು ಲಾರಿಯಿಂದ ಮೃತದೇಹವನ್ನು ತೆಗೆದು, ಉಪ್ಪಿನಂಗಡಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಇಲ್ಲಿನ ಮಾಲೀಕುದ್ದೀನಾರ್ ಮಸೀದಿಯಲ್ಲಿ ಮೃತದೇಹದ ಅಂತಿಮ ವಿಧಿ-ವಿಧಾನಗಳನ್ನು ನಡೆಸಿ, ಅವರ ಊರಿಗೆ ಮೃತದೇಹವನ್ನು ಕಳುಹಿಸಿಕೊಡಲಾಯಿತು.