ಕನ್ನಡಪ್ರಭ ವಾರ್ತೆ ಮೇಲುಕೋಟೆ
ಸಮಾರಂಭದಲ್ಲಿ ಮೈಸೂರುಪೇಟ ತೊಡಿಸಿ ಅಭಿನಂದಿಸಿದ ನಂತರ ಹಿರಿಯ ಕೆಎಎಸ್ ಅಧಿಕಾರಿ ವೇಣುಗೋಪಾಲ್ ಮಾತನಾಡಿ, ನ್ಯಾಮನಹಳ್ಳಿಯಲ್ಲಿ 16 ವರ್ಷ ಮುಖ್ಯಶಿಕ್ಷಕರಾಗಿ ಸೇವೆ ಮಾಡಿದ ಸಂತಾನರಾಮನ್ ಗ್ರಾಮಸ್ಥರ ಹಾಗೂ ಡೇರಿ ಸಂಘದ ಮನವೊಲಿಸಿ ಗ್ರಾಮದ ಮಧ್ಯ ಭಾಗದ ಲಕ್ಷಾಂತರ ರು. ನಿವೇಶನವನ್ನು ಇಲಾಖೆಗೆ ಕೊಡಿಸಿ ಶಾಲಾ ಕೊಠಡಿಗಳನ್ನು ಮಂಜೂರು ಮಾಡಿಸಿ ಅಚ್ಚುಕಟ್ಟಾಗಿ ನಿರ್ಮಿಸಿದ್ದಾರೆ ಎಂದರು.
ಇಲ್ಲಿಂದ ವರ್ಗಾವಣೆಯಾದ ನಂತರ ಮೇಲುಕೋಟೆ ಶತಮಾನದ ಶಾಲೆಯನ್ನೂ ಉಳಿಸಿ ಮಾದರಿಯಾಗಿಸಿದ್ದಾರೆ. ಶಾಲೆ ಈ ವರ್ಷ150 ರ ಸಂಭ್ರಮ ಆಚರಿಸಿಕೊಳ್ಳುತ್ತಿದೆ. ಮುಖ್ಯಶಿಕ್ಷಕಿ ಪೂರ್ಣಿಮ ಪರಿಶ್ರಮದಲ್ಲಿ ನ್ಯಾಮನಹಳ್ಳಿ ಶಾಲೆ ಮೇಲುಕೋಟೆ ಹೋಬಳಿಯಲ್ಲೇ ಮಾದರಿಯಾಗಿದೆ ಎಂದರು.ತಾಲೂಕಿಗೆ 30 ವರ್ಷದ ನಂತರ ರಾಜ್ಯಪ್ರಶಸ್ತಿ ನಮ್ಮೂರಿನಲ್ಲಿ ಸೇವೆ ಮಾಡಿದ ಶಿಕ್ಷಕರಿಗೆ ಲಭಿಸಿರುವುದು ಅತ್ಯಂತ ಖುಷಿಕೊಡುವ ವಿಚಾರ. ಶಿಕ್ಷಣ ಇಲಾಖೆ ರಾಜ್ಯಪ್ರಶಸ್ತಿಯನ್ನು ಅರ್ಹಶಿಕ್ಷಕರಿಗೆ ನೀಡಿ ಗೌರವಿಸಿದೆ. ಈ ಸಂಭ್ರಮವನ್ನು ಹಿರಿಯ ವಿದ್ಯಾರ್ಥಿಗಳು ಹಬ್ಬದ ರೀತಿಯಲ್ಲಿ ಆಚಸಿರುವುದು ಗುರು-ಶಿಷ್ಯಪರಂಪರೆಯ ಭಾಂದವ್ಯದ ದೃಷ್ಟಿಯಲ್ಲಿ ಅತ್ಯಂತ ಅರ್ಥಪೂರ್ಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ಹಾಗೂ ಯುವಕರೇ ಗ್ರಾಮದ ಶಕ್ತಿ ಎಂಬುದನ್ನು ತೋರಿಸಿ ನಮ್ಮೂರ ಶಾಲಾಭಿವೃದ್ಧಿಯಲ್ಲಿ ಕೈಜೋಡಿಸಿ ನವೆಂಬರ್ ಮಾಹೆಯಲ್ಲಿ ಕನ್ನಡರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದರು.
ಸಮಾರಂಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ರಮ್ಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸತೀಶ್ ಮುಖ್ಯಶಿಕ್ಷಕಿ ಪೂರ್ಣಿಮ ಸಹಶಿಕ್ಷಕಿ ಜ್ಯೋತಿ ಇದ್ದರು. ಹಿರಿಯ ವಿದ್ಯಾರ್ಥಿಗಳಾದ ಅನಿಲ್, ಗಗನ ವಿಜಯ್ ಗುರುಗಳ ಬಗ್ಗೆ ಮಾತನಾಡಿದರು. ಇದಕ್ಕೂ ಮುನ್ನ ರಾಜ್ಯ ಪ್ರಶಸ್ತಿ ಪುರಸ್ಕೃತ ಸನ್ಮಾನಿತರನ್ನು ಪಟಾಕಿ ಸಿಡಿಸಿ ತಮಟೆ ಸದ್ದು ಮತ್ತು ಪುಟಾಣಿಗಳ ಪೂರ್ಣಕುಂಬಸ್ವಾಗತದೊಂದಿಗೆ ಸ್ವಾಗತಿಸಿ ಬೆಲ್ಲದಾರತಿ ಮಾಡಿ ವೇದಿಕೆಗೆ ಬರಮಾಡಿಕೊಳ್ಳಲಾಯಿತು.