ಅಂಕೋಲಾ: ಪುರಸಭಾ ವ್ಯಾಪ್ತಿಯ ಕೇಣಿ ಗ್ರಾಮದ ಗಾಂವಕರವಾಡದಲ್ಲಿ ನಿರಂತರ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಲಾವೃತ ಪರಿಸ್ಥಿತಿ ನಿರ್ಮಾಣವಾಗಿದೆ.
ಇದರಿಂದ ಸ್ಥಳೀಯ ನಿವಾಸಿಗಳು ಹಾಗೂ ಭಕ್ತರು ಸಂಚಾರಕ್ಕೆ ತೀವ್ರ ತೊಂದರೆ ಅನುಭವಿಸಿದ್ದಾರೆ.
ಯಾದು ನಾರಾಯಣ ಗಾಂವಕರ್, ರಂಗುನಾಥ ನಾರಾಯಣ ಗಾಂವಕರ್, ಮಹೇಶ್ ಗಾಂವಕರ್ ಸೇರಿದಂತೆ ಸುಮಾರು ಎಂಟು ಮನೆಗಳು ಹಾಗೂ ದನದ ಕೊಟ್ಟಿಗೆಗಳು ಜಲಾವೃತಗೊಂಡಿವೆ.ಮಾಹಿತಿ ತಿಳಿಯುತ್ತಿದ್ದಂತೆ ಅಂಕೋಲಾ ಪುರಸಭೆಯ ಸಮುದಾಯ ಸಂಘಟನಾಧಿಕಾರಿ ಡಿ. ಎಲ್. ರಾಥೋಡ್ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿ, ಸ್ಥಳೀಯರಿಂದ ಮಾಹಿತಿ ಪಡೆದರು.
ಪರಿಸ್ಥಿತಿ ಮತ್ತಷ್ಟು ಹದಗೆಟ್ಟಲ್ಲಿ ಗಂಜಿ ಕೇಂದ್ರ ತೆರೆಯಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಯಾವುದೇ ತುರ್ತು ಪರಿಸ್ಥಿತಿ ಎದುರಾದರೆ ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಡಿ. ಎಲ್. ರಾಥೋಡ್ ನಿವಾಸಿಗಳಿಗೆ ಮನವಿ ಮಾಡಿದರು.
ಬಳಲೆಯಲ್ಲಿ ಗುಡ್ಡ ಕುಸಿತ: ಅಂಕೋಲಾ ತಾಲೂಕಿನ ಬಳಲೆ ಬೊಮ್ಮಯ್ಯ ದೇವರ ದೇಗುಲದ ಪಕ್ಕದ ಚತುಷ್ಪಥ ಹೆದ್ದಾರಿಯ ಪಕ್ಕದಲ್ಲಿ ಗುಡ್ಡ ಕುಸಿತ ಉಂಟಾಗಿ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಸಂಚಾರ ಪಿಎಸ್ಐ ಸುನಿಲ್ ಹುಳ್ಳೊಳ್ಳಿ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದರು. ಗೋಕರ್ಣ ಪೊಲೀಸ್ ಠಾಣೆಯ 112 ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲು ಶ್ರಮಿಸಿದರು.ಶಾಲೆಗೆ ರಜೆ: ಅಂಕೋಲಾದಲ್ಲಿ ಗುರುವಾರ ತಡರಾತ್ರಿಯಿಂದಲೆ ಧಾರಾಕಾರ ಮಳೆ ಸುರಿದಿದ್ದರಿಂದ ಅಂಕೋಲಾದ ಅಂಗನವಾಡಿ ಹಾಗೂ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ತೀವ್ರ ಮಳೆಯಿಂದ ಗಂಗಾವಳಿಯ ನೀರಿನ ಮಟ್ಟವು ಹೆಚ್ಚುತ್ತಿದೆ. ಹೀಗೆ ಮಳೆ ಮುಂದುವರಿದರೆ ಕಾಳಜಿ ಕೇಂದ್ರ ತೆರೆಯಲು ತಾಲೂಕಾಡಳಿತ ಚಿಂತನೆ ನಡೆಸಿದೆ.