ಕನ್ನಡಪ್ರಭ ವಾರ್ತೆ ಆಲಮಟ್ಟಿ
ನಾರಾಯಣಪುರ ಜಲಾಶಯಕ್ಕೆ ಕುಡಿಯುವ ನೀರಿಗಾಗಿ ಕಾಲುವೆಗೆ ನೀರು ಹರಿಸುವ ಉದ್ದೇಶದಿಂದ ಆಲಮಟ್ಟಿ ಜಲಾಶಯದಿಂದ ಶನಿವಾರ ಮೊದಲ ಬಾರಿಗೆ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಲಾಗಿದೆ.ಜಲಾಶಯದ ಬಲಭಾಗದ ವಿದ್ಯುತ್ ಉತ್ಪಾದನಾ ಘಟಕದ ಮೂಲಕ 3,500 ಕ್ಯುಸೆಕ್ ನೀರನ್ನು ನದಿ ಪಾತ್ರಕ್ಕೆ ಹರಿಬಿಡಲಾಗುತ್ತಿದೆ. ಇದರೊಂದಿಗೆ ಪ್ರಸಕ್ತ ಹಂಗಾಮಿನಲ್ಲಿ ಇದೇ ಮೊದಲ ಬಾರಿಗೆ ವಿದ್ಯುತ್ ಉತ್ಪಾದನೆಯೂ ಆರಂಭವಾಗಿದೆ. ಹಂತ ಹಂತವಾಗಿ ನೀರನ್ನು ಬಿಡಬೇಕಾಗಿರುವುದರಿಂದ ರಾತ್ರಿ 8 ಗಂಟೆಯ ನಂತರ ಹೊರಹರಿವನ್ನು 8,000 ಕ್ಯುಸೆಕ್ಗೆ ಹೆಚ್ಚಿಸಲಾಗಿದೆ ಎಂದು ಆಲಮಟ್ಟಿ ಜಲಾಶಯದ ಅಧಿಕಾರಿಗಳು ತಿಳಿಸಿದರು.
ಜಲಾಶಯದ ಇಂದಿನ ಮಟ್ಟ:ಗರಿಷ್ಠ 519.60 ಮೀಟರ್ ಎತ್ತರದಲ್ಲಿ 123.081 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಶನಿವಾರ ಸಂಜೆ 517.42 ಮೀಟರ್ ಎತ್ತರದಲ್ಲಿ 89.8 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ಒಳಹರಿವಿನ ಪ್ರಮಾಣ 6,091 ಕ್ಯುಸೆಕ್ ಇತ್ತು.
ವಿದ್ಯುತ್ ಉತ್ಪಾದನೆ ಆರಂಭ:
ಆಲಮಟ್ಟಿ ಜಲಾಶಯದ ಬಲಭಾಗದಲ್ಲಿರುವ ಜಲ ವಿದ್ಯುದಾಗಾರದ 55 ಮೆಗಾವಾಟ್ ಸಾಮರ್ಥ್ರ್ಯ ಒಂದು ಘಟಕದಿಂದ ಶನಿವಾರ 3,500 ಕ್ಯುಸೆಕ್ ನೀರನ್ನು ನದಿಗೆ ಹರಿಸುವ ಮೂಲಕ 25 ಮೆಗಾವಾಟ್ ವಿದ್ಯುತ್ ಉತ್ಪಾದನೆ ಆರಂಭವಾಯಿತು. ರಾತ್ರಿ 8 ಗಂಟೆಗೆ ಹೊರಹರಿವು 8,000 ಕ್ಯುಸೆಕ್ಗೆ ಹೆಚ್ಚಿದ್ದರಿಂದ ಇನ್ನೊಂದು ಘಟಕ ಆರಂಭಗೊಂಡು ಒಟ್ಟಾರೆ 70 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ.
ಆಲಮಟ್ಟಿ ವಿದ್ಯುದಾಗಾರದಲ್ಲಿ ಶನಿವಾರದಿಂದ ವಿದ್ಯುತ್ ಉತ್ಪಾದನೆ ಆರಂಭಗೊಂಡಿದೆ. ಈ ವರ್ಷ ಘಟಕಕ್ಕೆ 520 ದಶಲಕ್ಷ ಯುನಿಟ್ ಉತ್ಪಾದನೆಯ ಗುರಿ ನೀಡಲಾಗಿದೆ.- ಚಂದ್ರಶೇಖರ ದೊರೆ ಸೂಪರಿಂಟೆಂಡೆಂಟ್ ಎಂಜಿನಿಯರ್, ಕೆಪಿಸಿಎಲ್, ಆಲಮಟ್ಟಿ