ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಗಲಕೋಟೆಯ ಹಾನಗಲ್ಲ ಶ್ರೀಕುಮಾರೇಶ್ವರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಅಂಗಾಂಗಗಳನ್ನು ಅವರ ಕುಟುಂಬ ವರ್ಗದವರು ದಾನಮಾಡಿದ ಅಪೂರ್ವ ಘಟನೆಯೊಂದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಅಪಘಾತದಲ್ಲಿ ತಲೆಗೆ ಗಾಯವಾಗಿ ಕೋಮಾ ಸ್ಥಿತಿಯಲ್ಲಿದ್ದ ಮುಧೋಳ ತಾಲೂಕಿನ ಜುನ್ನೂರ ಗ್ರಾಮದ 58 ವರ್ಷ ವಯಸ್ಸಿನ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಬಾಗಲಕೋಟೆಯ ಹಾನಗಲ್ಲ ಕುಮಾರೇಶ್ವರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರೋಗಿಯನ್ನು ವೆಂಟಿಲೇಟರ್ ಮೇಲೆ ಇಡಲಾಗಿದ್ದು ಚಿಕಿತ್ಸೆ ನೀಡಿದ ವೈದ್ಯರು ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ಹೇಳಿದರು. ನಂತರ ರೋಗಿಯ ಅಂಗಾಂಗ ದಾನ ಮಾಡುವಂತೆ ಕುಟುಂಬದವರ ಮನವೊಲಿಸಿದರು.

ತಕ್ಷಣವೇ ಸ್ಪಂದಿಸಿದ ಕುಟುಂಬದವರು ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದರು. ಅಂಗಾಂಗ ದಾನದ ಪ್ರಕ್ರಿಯೆ ಪೂರ್ಣಗೊಳಿಸಲು ರೋಗಿಯನ್ನು ತಕ್ಷಣವೇ ಬೆಳಗಾವಿಯ ಕೆ.ಎಲ್.ಇ ಆಸ್ಪತ್ರೆಗೆ ಕರೆದೊಯ್ಯುವುದು ಅಗತ್ಯವಾಗಿದ್ದರಿಂದ ಎಚ್.ಎಸ್.ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ರೊಜೆಕ್ಟ್ ಡೈರೆಕ್ಟರ್ ಮತ್ತು ಮಧುಮೇಹ ತಜ್ಞ ಡಾ.ನವೀನ ವಿ.ಚರಂತಿಮಠ ಅವರು ಪೊಲೀಸ್‌ ಇಲಾಖೆಯ ನೆರವು ಕೋರಿದರು. ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೊಯಲ್ ಅವರು ಸ್ಥಳಾಂತರಕ್ಕೆ ಅನುಕೂಲವಾಗಲೆಂದು ಜೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿದರು.

ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ದೇಹದಾನಕ್ಕೆ ಮುಂದಾದ ಕುಟುಂಬದವರನ್ನು ಮತ್ತು ಅಗತ್ಯದ ನೆರವು ನೀಡಿದ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ, ಗೌರವ ಕಾರ್ಯದರ್ಶಿಗಳಾದ ಮಹೇಶ ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ (ಬೇವೂರ), ಮೆಡಿಕಲ್ ಕಾಲೇಜ್ ಪ್ರಾಚಾರ್ಯ ಡಾ.ಭುವನೇಶ್ವರಿ ಯಳಮಲಿ, ವೈದ್ಯಕೀಯ ಅಧೀಕ್ಷಕ ಡಾ.ಶ್ರೀರಾಮ ಕೋರಾ, ಉಪಪ್ರಾಚಾರ್ಯ ಡಾ.ಸಿ.ಎಸ್.ಹಿರೇಮಠ ಮತ್ತು ಎಚ್.ಎಸ್.ಕೆ ಸುಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ರೊಜೆಕ್ಟ್ ಡೈರೆಕ್ಟರ್ ಡಾ.ನವೀನ ಚರಂತಿಮಠ ಅಭಿನಂದಿಸಿರುವರು.