ಬಳ್ಳಾರಿ: ನಗರ ಸೇರಿದಂತೆ ಜಿಲ್ಲೆಯ ನಾನಾ ಕಡೆ ಮಂಗಳವಾರ ಧಾರಾಕಾರ ಮಳೆಯಾಗಿದೆ.
ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಬೆಳಿಗ್ಗೆ ಬಳ್ಳಾರಿಯಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಹೊತ್ತು ಮಳೆ ಸುರಿಯಿತು. ಮಧ್ಯಾಹ್ನವೂ ವರುಣನ ಆಗಮನವಾಯಿತು. ಜಿಲ್ಲೆಯ ಸಂಡೂರು, ಕಂಪ್ಲಿ ಹಾಗೂ ಸಿರುಗುಪ್ಪದಲ್ಲಿ ಗುಡುಗು ಸಮೇತ ಮಳೆಯಾಗಿದೆ.ಸೋಮವಾರ ತಡರಾತ್ರಿಯೂ ಜಿಲ್ಲೆಯ ಕಂಪ್ಲಿ ಹಾಗೂ ಸಂಡೂರು ತಾಲೂಕಿನಲ್ಲಿ ಅಲ್ಲಲ್ಲಿ ಉತ್ತಮ, ಮತ್ತೆ ಕೆಲವೆಡೆ ಸಾಧಾರಣ ಮಳೆಯಾಗಿದೆ. ಮಂಗಳವಾರ ಬೆಳಿಗ್ಗೆಯಿಂದ ಆಗಾಗ್ಗೆ ಸುರಿಯುತ್ತಿದ್ದ ಮಳೆ ರಾತ್ರಿ 7 ಗಂಟೆವರೆಗೆ ಮುಂದುವರಿದಿತ್ತು. ಇದರಿಂದ ದೀಪಾವಳಿ ಹಬ್ಬಕ್ಕೆಂದು ತಂದಿಟ್ಟುಕೊಂಡಿದ್ದ ಪಟಾಕಿಗಳು ಸದ್ದಡಗಿತ್ತು.
ಬಳ್ಳಾರಿಯ ಬಹುತೇಕ ರಸ್ತೆಗಳು ಗುಂಡಿಗಳಿಂದ ತುಂಬಿಕೊಂಡಿರುವುದರಿಂದ ಸಹಜ ಸಂಚಾರಕ್ಕೆ ಅಡ್ಡಿಯಾಗಿತ್ತು.ಸತತವಾಗಿ ಸುರಿದ ಮಳೆಯಿಂದಾಗಿ ರಸ್ತೆಗಳ ಮೇಲೆ ನೀರು ನಿಂತಿದ್ದು, ದ್ವಿಚಕ್ರ ವಾಹನ ಸವಾರರು ಪರದಾಡಿದರು. ಮಳೆನೀರು ಸರಾಗವಾಗಿ ಹರಿದು ಹೋಗಲು ಪೂರಕ ವ್ಯವಸ್ಥೆ ಇಲ್ಲದಿರುವುದರಿಂದ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದವು. ಹಳೆಯ ತಹಸೀಲ್ದಾರ್ ಕಚೇರಿ, ಜಿಲ್ಲಾಧಿಕಾರಿ ಕಚೇರಿ, ಸಬ್ ರಿಜಿಸ್ಟ್ರಾರ್ ಕಚೇರಿಗಳು ಗದ್ದೆಯಂತಾಗಿದ್ದವು.
ಎಂದಿನಂತೆ ಜಿಲ್ಲಾ ಕ್ರೀಡಾಂಗಣ ಬಳಿಯ ಮೇಲ್ಸೇತುವೆ ಕೆಳಗೆ ಅಪಾರ ಪ್ರಮಾಣದ ಮಳೆನೀರು ಸಂಗ್ರಹಗೊಂಡಿತ್ತು. ಹೀಗಾಗಿ ವಾಹನ ಸವಾರರು ಬೇರೆ ಮಾರ್ಗದಿಂದ ಸಂಚರಿಸುವಂತಾಯಿತು. ಕೆಲವು ದ್ವಿಚಕ್ರ ವಾಹನ ಸವಾರರು ಮಳೆನೀರಿನಲ್ಲಿ ಸಿಲುಕಿ ಒದ್ದಾಡುವ ದೃಶ್ಯ ಕಂಡು ಬಂತು.ಗ್ರಾಮೀಣ ಪ್ರದೇಶದಲ್ಲಿ ಮಳೆಯ ಅಬ್ಬರ:
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ, ಕಂಪ್ಲಿ ಹಾಗೂ ಬಳ್ಳಾರಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಿದೆ ಎಂದು ತಿಳಿದು ಬಂದಿದೆ. ಬಳ್ಳಾರಿ ತಾಲೂಕಿನ ಅಮರಾಪುರ, ಅಂದ್ರಾಳು, ಅಸುಂಡಿ, ಬೆಳಗಲ್ಲು, ಗೋನಾಳ್, ಬೇವಿನಹಳ್ಳಿ, ಬಿಸಿಲಹಳ್ಳಿ, ಬೊಮ್ಮನಹಾಳು, ದಮ್ಮೂರು, ಗೋಟೂರು, ಗುಡದೂರು, ದಾಸರ ನಾಗೇನಹಳ್ಳಿ, ಮೋಕಾ, ರೂಪನಗುಡಿ, ಕಮ್ಮರಚೇಡು ಗ್ರಾಮಗಳಲ್ಲಿ ಸತತವಾಗಿ ಮಳೆಯಾಗುತ್ತಿದ್ದು, ಸಿರುಗುಪ್ಪ ತಾಲೂಕಿನ ಅಗಸನೂರು, ಉಡೇಗೋಳ, ಉತ್ತನೂರು, ಕರೂರು, ದರೂರು, ಆಗಲೂರು, ತೆಕ್ಕಲಕೋಟೆ, ಬಿ.ಎಂ.ಸೂಗೂರು, ಬಾಗೇವಾಡಿಯಲ್ಲಿ ಸತತ ಮೂರು ತಾಸುಗಳ ಕಾಲ ನಿರಂತರ ಮಳೆ ಸುರಿದಿದೆ. ಕಂಪ್ಲಿ ತಾಲೂಕಿನ ರಾಮಸಾಗರ, ಸುಗ್ಗೇನಹಳ್ಳಿ, ಬುಕ್ಕಸಾಗರ, ವಿಠಲಾಪುರ, ಸಣಾಪುರ, ಮೆಟ್ರಿ, ದೇವಲಾಪುರ ಗ್ರಾಮಗಳಲ್ಲಿ ಭಾರೀ ಮಳೆಯಾಗಿದೆ ಎಂದು ಮಾಹಿತಿಯಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಗ್ರಾಮೀಣ ಪ್ರದೇಶದ ಮಣ್ಣಿನ ಮನೆಗಳು ಕುಸಿಯುವ ಆತಂಕ ಎದುರಾಗಿದೆ.ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ಭತ್ತ ಹಾಗೂ ಮೆಣಸಿನಕಾಯಿ ಬೆಳೆಗೆ ಸಂಕಷ್ಟ ತಂದೊಡ್ಡಿದೆ. ಮಳೆಯ ಜೊತೆಗೆ ಜೋರಾಗಿ ಗಾಳಿ ಬೀಸುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಭತ್ತ ಹಾಲು ತುಂಬಿಕೊಂಡು ತೆನೆಕಟ್ಟುವ ಹಂತದಲ್ಲಿದ್ದು ಮಳೆಯ ಜೊತೆಗೆ ಜೋರಾಗಿ ಗಾಳಿ ಬೀಸುತ್ತಿರುವುದರಿಂದ ಭತ್ತ ಬಾಗಿಕೊಳ್ಳುತ್ತಿದೆ. ಭತ್ತ ನೆಲಕ್ಕೊರಗಿದರೆ ಇಳುವರಿಯಲ್ಲಿ ಭಾರೀ ಇಳಿಮುಖವಾಗಲಿದೆ. ಎಕರೆಗೆ 15ರಿಂದ 20 ಚೀಲಗಳಷ್ಟು ನಷ್ಟವಾಗುವ ಸಾಧ್ಯತೆಯಿದೆ ಎಂಬುದು ರೈತರ ಆತಂಕವಾಗಿದೆ.
ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಮೆಣಸಿನಕಾಯಿಗೂ ಮಳೆಯಿಂದ ಸಮಸ್ಯೆಯಾಗುವ ಸಾಧ್ಯತೆಯಿದೆ. ಈವರೆಗೆ ದೊಡ್ಡ ಪ್ರಮಾಣದ ಮಳೆಯಾಗಿಲ್ಲ. ಇದೀಗ ಶುರುಗೊಳ್ಳುತ್ತಿರುವುದರಿಂದ ಮೆಣಸಿನಕಾಯಿ ಬೆಳೆಗೆ ರೋಗ ಬಾಧೆ ಹೆಚ್ಚಾಗಲಿದೆ. ಮೆಣಸಿನಕಾಯಿಗೆ ಟ್ರಿಪ್ಸ್ ರೋಗ ಕಂಡು ಬಂದಿದ್ದು ಇದರಿಂದ ರೈತರು ಆತಂಕದಲ್ಲಿದ್ದಾರೆ.ಏತನ್ಮಧ್ಯೆ ವರುಣನ ಆಗಮನ ರೈತರನ್ನು ಮತ್ತಷ್ಟೂ ಆತಂಕಕ್ಕೆ ದೂಡಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಮಾಧವ ರೆಡ್ಡಿ ಕರೂರು ಅವರು ತಿಳಿಸಿದರು. ಕನ್ನಡಪ್ರಭ ಜತೆ ಮಾತನಾಡಿದ ಅವರು, ಭತ್ತ ಹಾಗೂ ಮೆಣಸಿನಕಾಯಿ ಬೆಳೆಗಾರರು ಮಳೆಯಿಂದ ಕಂಗಾಲಾಗಿದ್ದಾರೆ. ಈ ಬಾರಿ ಯಾವ ಬೆಳೆಗೂ ಉತ್ತಮ ದರವಿಲ್ಲ. ಇದರ ನಡುವೆ ಮಳೆಯಿಂದ ನಷ್ಟವಾದರೆ ರೈತರ ಸ್ಥಿತಿ ಮತ್ತಷ್ಟು ಸಮಸ್ಯೆಗೆ ದೂಡುವ ಸಾಧ್ಯತೆಯಿದೆ ಎನ್ನುತ್ತಾರೆ. ಮೆಕ್ಕೆಜೋಳಕ್ಕೆ ಸದ್ಯ ಮಳೆಯಿಂದ ಯಾವ ಸಮಸ್ಯೆಯಿಲ್ಲವಾದರೂ ದರ ಸಂಪೂರ್ಣ ಕುಸಿತವಾಗಿದೆ. ಕಳೆದ ಬಾರಿ ₹2600 ಇದ್ದ ಮೆಕ್ಕೆಜೋಳ ಈ ಬಾರಿ ₹1600ಕ್ಕೆ ಕುಸಿದಿದೆ ಎಂದು ತಿಳಿಸಿದರು.
ಪಟಾಕಿ ಸದ್ದಡಗಿಸಿದ ಮಳೆ:ಬೆಳಿಗ್ಗೆಯಿಂದ ಆಗಾಗ್ಗೆ ಮಳೆ ಸುರಿಯುತ್ತಲೇ ಇದ್ದು ಜನರು ಮನೆಯಿಂದ ಹೊರ ಬರದಂತಾಗಿದೆ. ದೀಪಾವಳಿ ಹಬ್ಬದ ಸಡಗರದಲ್ಲಿದ್ದ ಜನರಿಗೆ ವರುಣನ ಆಗಮನ, ಬೇಡದ ಅತಿಥಿಯಾಗಿದೆ. ಹಬ್ಬದ ಹಿನ್ನಲೆಯಲ್ಲಿ ಸದಾ ಗಿಜಿಗುಡುತ್ತಿದ್ದ ಬಳ್ಳಾರಿಯ ಪ್ರಮುಖ ವಾಣಿಜ್ಯ ಕೇಂದ್ರಗಳೆನಿಸಿದ ಬೆಂಗಳೂರು ರಸ್ತೆ, ಬ್ರಾಹ್ಮಣಬೀದಿ, ಶ್ರೀಕನಕ ದುರ್ಗಮ್ಮ ದೇವಸ್ಥಾನ ಮೈದಾನ, ಎಲೆ ಬಜಾರ್, ಗ್ರಹಂ ರಸ್ತೆಗಳು ಜನರಿಲ್ಲದೆ ಬಿಕೋ ಎಂದವು. ಬೆಳಿಗ್ಗೆಯಿಂದ ತುಂತುರು ಮಳೆಯಾಗುತ್ತಿರುವುದರಿಂದ ಜನರು ಹೊರಗಡೆ ಹೆಚ್ಚಾಗಿ ಕಂಡು ಬರಲಿಲ್ಲ. ದೀಪಾವಳಿ ಹಬ್ಬಕ್ಕೆಂದು ತಂದಿದ್ದ ಪಟಾಕಿಗಳು ಸದ್ದು ಮಾಡಲಿಲ್ಲ.
ಇನ್ನು ಮೂರು ದಿನ ಬಳ್ಳಾರಿ ಜಿಲ್ಲೆಯಲ್ಲಿ ಭಾರೀ ಮಳೆ ಇರಲಿದೆ ಎಂದು ಹೇಳುತ್ತಿದ್ದು, ರೈತರು ತೀವ್ರ ಆತಂಕದಲ್ಲಿದ್ದಾರೆ. ಈ ಮಳೆ-ಗಾಳಿಗೆ ಭತ್ತ ಹಾಗೂ ಮೆಣಸಿನಕಾಯಿ ಬೆಳೆಗೆ ಸಮಸ್ಯೆಯಾಗಲಿದೆ ಎನ್ನುತ್ತಾರೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಮಾಧವರೆಡ್ಡಿ ಕರೂರು.