ಹೊಳೆಆಲೂರು: ಹೊಳೆಆಲೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗುರುವಾರ ರಭಸವಾಗಿ ಮಳೆ ಸುರಿಯಿತು.
ರಭಸದ ಮಳೆಗೆ ಹೊಳೆಆಲೂರಿನ ಕೆಳ ಸೇತುವೆ ಜಲಾವೃತಗೊಂಡಿದ್ದರಿಂದ ಒಂದು ತಾಸಿಗೂ ಅಧಿಕ ಕಾಲ ವಾಹನ ಸವಾರರು ಪರದಾಡಿದರು.ಇಂತಹ ಘಟನೆ ಇದೇ ಮೊದಲೇನಲ್ಲ, ಬಹಳ ದಿನಗಳಿಂದ ದೊಡ್ಡ ಮಳೆಯಾದಾಗ ಪ್ರಯಾಣಿಕರು ಪರದಾಡಿದ್ದಾರೆ. ಆದರೆ ಜಯ ಕರ್ನಾಟಕ ಸಂಘಟನೆ ಹಾಗೂ ಸ್ಥಳೀಯ ಸಂಘಟನೆಗಳು ಪ್ರತಿಭಟನೆಯ ಮೂಲಕ, ರೈಲ್ವೆ ಅಧಿಕಾರಿಗಳಿಗೆ 20 ದಿನಗಳ ಹಿಂದೆ ಮನವಿ ನೀಡಿದ್ದರು. ಆನಂತರ ಕಬ್ಬಿಣದ ರಾಡ್ ತೆಗೆದು, ಸಿಮೆಂಟ್ ಹಾಕಿ ನೀರು ಹಾಯ್ದು ಹೋಗುವ ಹಾಗೆ ಮಾಡಿದ್ದರು. ಆದರೆ ಗುರುವಾರ ಸುರಿದ ಭಾರಿ ಮಳೆಗೆ ಸುತ್ತಲಿನ ನೀರು ಜಮೆಯಾಗಿ ಜನರು ಪರದಾಡುವಂತೆ ಮಾಡಿದೆ.
ರೈತರು, ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ರೋಣ ಮಾರ್ಗವಾಗಿ ಬೇರೆ ಗ್ರಾಮಗಳಿಗೆ ಹೋಗುವ ಜನರು ಅಧಿಕಾರಿಗಳ ವಿರುದ್ಧ ಆಕ್ರೋಶ ಪಡಿಸಿದ್ದಾರೆ. ಎಲ್ಲರೂ ರೋಣದಿಂದ ಕೊಣ್ಣೂರ ಮಾರ್ಗವಾಗಿ ಬರುವ ಗ್ರಾಮಗಳು ಹಾಗೂ ಕೊಣ್ಣೂರದಿಂದ ರೋಣ ಮಾರ್ಗವಾಗಿ ಬೇರೆ ಗ್ರಾಮಗಳಿಗೆ ಹೋಗುವ ಪ್ರಯಾಣಿಕರು ಈ ರೈಲ್ವೆ ಕೆಳಸೇತುವೆ ಮೂಲಕವೇ ಹೋಗಬೇಕು. ಸ್ವಲ್ಪ ಮಳೆಯಾದರೂ ಕೆಳಗೆ ನೀರು ತುಂಬುತ್ತದೆ. ಆದ್ದರಿಂದ ಮಳೆಯ ನೀರು ಸರಾಗವಾಗಿ ಹರಿದು ಹೋಗುವ ಹಾಗೆ ಮಾಡಬೇಕು ಎಂದು ಸಾರ್ವಜನಿಕರು ವಿನಂತಿಸಿದ್ದಾರೆ.ಮುಂಡರಗಿಯಲ್ಲಿ ಗುರುವಾರ ಉತ್ತಮ ಮಳೆ:
ಕಳೆದ ಒಂದು ವಾರದಿಂದ ಮುಂಡರಗಿ ಪಟ್ಟಣವೂ ಸೇರಿದಂತೆ ತಾಲೂಕಿನಾದ್ಯಂತ ಉತ್ತಮವಾದ ಮಳೆಯಾಗುತ್ತಿದ್ದು, ರೈತರು ಸಂತಸದಲ್ಲಿದ್ದಾರೆ. ಉತ್ತಮವಾಗಿ ಮಳೆಯಾಗಿದ್ದರಿಂದ ಮುಂಡರಗಿ ಭಾಗಗಳಲ್ಲಿ ಬಿತ್ತನೆ ಕಾರ್ಯ ನಡೆಯುತ್ತಿದೆ.ಗುರುವಾರ ಮಧ್ಯಾಹ್ನ 2 ಗಂಟೆಯಿಂದ 2.45ರ ವರೆಗೆ ಮುಕ್ಕಾಲು ಗಂಟೆ ರಭಸದ ಮಳೆಯಾಯಿತು. ಇದರಿಂದ ಈಗಾಗಲೇ ಬಿತ್ತನೆ ಮಾಡಿದ ರೈತರು ಇನ್ನಷ್ಟು ಹರ್ಷಗೊಂಡರು.ಗುರುವಾರ ಮಧ್ಯಾಹ್ನದ ಮಳೆಯಿಂದಾಗಿ ಪಟ್ಟಣದ ಕಾಲೇಜು ರಸ್ತೆಯಲ್ಲಿನ ಮೂತ್ರಾಲಯದ ಹತ್ತಿರವಿರುವ ಚರಂಡಿಯಲ್ಲಿ ನೀರು ಹೋಗಲು ತೊಂದರೆಯಾಗಿದ್ದರಿಂದಾಗಿ ಸಾಕಷ್ಟು ನೀರು ರಸ್ತೆಯಲ್ಲಿ ನಿಂತು ಕೆಲಸಮಯ ಆ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ ತೊಂದರೆಯಾಗಿದ್ದು ಕಂಡು ಬಂದಿತು.