)
ಕನ್ನಡಪ್ರಭ ವಾರ್ತೆ ಬೆಂಗಳೂರು:
ತಮಿಳುನಾಡಿಗೆ ಪ್ರತಿದಿನ 3500 ಕ್ಯುಸೆಕ್ನಂತೆ ಮುಂದಿನ 15 ದಿನಗಳ ಕಾಲ 4.50 ಟಿಎಂಸಿ ನೀರು ಹರಿಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿ ಆದೇಶಿಸಿವೆ. ಅದರಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿಯು ಕಳೆದ ಜು. 28ರಂದು ನೀರು ಹರಿಸುವಂತೆ ಆದೇಶಿಸಿದ್ದರೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಜು.30ರಂದು ಆ ಆದೇಶ ಎತ್ತಿ ಹಿಡಿದು ತಮಿಳುನಾಡಿಗೆ ನೀರು ಹರಿಸುವಂತೆ ಸೂಚಿಸಿತ್ತು.
ಅದರ ಪ್ರಕಾರ ಈ ವೇಳೆಗಾಗಲೇ ಕನಿಷ್ಠ 11,574 ಕ್ಯುಸೆರ್ (1 ಟಿಎಂಸಿ) ನೀರು ತಮಿಳುನಾಡಿಗೆ ಬಿಡಬೇಕಿತ್ತು. ಆದರೆ, ಈವರೆಗೆ ಕೇವಲ 0.06 ಟಿಎಂಸಿ (694.4 ಕ್ಯುಸೆಕ್) ನೀರು ಕೆಆರ್ಎಸ್ನಿಂದ ತಮಿಳುನಾಡಿಗೆ ಹರಿಸಲಾಗಿದೆ. ಕಳೆದ 100 ವರ್ಷಗಳಲ್ಲಿ ಇಷ್ಟು ಕಡಿಮೆ ಪ್ರಮಾಣದ ನೀರು ಹರಿದಿರುವುದು ಇದೇ ಮೊದಲು.ಅದರ ಜತೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿ ಸಭೆಗಳಲ್ಲಿ ತಮಿಳುನಾಡು ಸರ್ಕಾರ ಪ್ರತಿದಿನ 9500 ಕ್ಯುಸೆಕ್ ನೀರು ಹರಿಸುವಂತೆ ಪಟ್ಟು ಹಿಡಿದಿತ್ತು. ಅಲ್ಲದೆ, ಕಾವೇರಿ ನೀರು ಹಂಚಿಕೆ ಸೂತ್ರ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿತ್ತು. ಆದರೆ, ಸಂಕಷ್ಟದ ಸ್ಥಿತಿಯಲ್ಲಿ ಕಾವೇರಿ ನೀರು ತಮಿಳುನಾಡಿಗೆ ಹರಿಸಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ವಸ್ತುಸ್ಥಿತಿ ಮುಂದಿಟ್ಟು ಬಲವಾದ ವಾದ ಮಂಡಿಸಿತ್ತು. ಅದರ ಫಲವಾಗಿ ಪ್ರತಿದಿನ 3500 ಕ್ಯುಸೆಕ್ ನೀರು ಹರಿಸಲು ಪ್ರಾಧಿಕಾರ-ಸಮಿತಿ ಆದೇಶಿಸಿವೆ. ಆದರೂ, ರಾಜ್ಯ ಸರ್ಕಾರ ಆದೇಶದಷ್ಟು ನೀರು ಬಿಡದೆ ಕಠಿಣ ಕ್ರಮ ಕೈಗೊಂಡಿದೆ.
ನೀರು ಹರಿಸದಿರುವ ನಿರ್ಧಾರದ ಜತೆಗೆ ರಾಜ್ಯದ ಹಿತಕ್ಕಾಗಿ ರಾಜಕೀಯ ಬಿಟ್ಟು ಎಲ್ಲರೂ ಒಗ್ಗಟ್ಟಿನಿಂದ ಸಾಗುವಂತೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಅದಕ್ಕಾಗಿಯೇ ವಿರೋಧ ಪಕ್ಷಗಳ ಅಭಿಪ್ರಾಯ, ಸಲಹೆ ಪಡೆಯಲು ಭಾನುವಾರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಸರ್ವ ಪಕ್ಷ ಸಭೆ ನಡೆಸಲಾಗುತ್ತಿದೆ. ಸಭೆಯಲ್ಲಿ ಈವರೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳು, ರಾಜ್ಯದ ಹಿತ ಕಾಪಾಡಲು ತೆಗೆದುಕೊಂಡ ನಿರ್ಧಾರಗಳು, ಮುಂದಿನ ಸರ್ಕಾರದ ನಿರ್ಧಾರಗಳ ಕುರಿತು ವಿವರಿಸಲಾಗುತ್ತದೆ.ಈವರೆಗಿನ ಕಾವೇರಿ ಆದೇಶ, ತೆಗೆದುಕೊಂಡ ನಿರ್ಧಾರಗಳು:
ಹಾಗೆಯೇ, ಎಸ್.ಎಂ.ಕೃಷ್ಣ ಸಿಎಂ ಆಗಿದ್ದಾಗ 2002-03ರಲ್ಲಿ 9000 ಕ್ಯುಸೆಕ್ ನೀರು ಬಿಡಲು ಆದೇಶಿಸಲಾಗಿತ್ತು. ಅದನ್ನು ಖಂಡಿಸಿದ್ದ ಕೃಷ್ಣ ಬೆಂಗಳೂರಿನಿಂದ ಕೆಆರ್ಎಸ್ವರೆಗೆ ಐತಿಹಾಸಿಕ ಪಾದಯಾತ್ರೆ ನಡೆಸಿದ್ದರು. 2013ರಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಸುಪ್ರೀಂಕೊರ್ಟ್ ಪ್ರತಿದಿನ 15000 ಕ್ಯುಸೆಕ್ ನೀರು ಹರಿಸುವಂತೆ ಆದೇಶಿಸಿತ್ತು. ಆಗಲೂ ರಾಜ್ಯ ಸರ್ಕಾರ ಕಾನೂನು ಹೋರಾಟದ ಮೂಲಕ 12000 ಕ್ಯುಸೆಕ್ ನೀರು ಹರಿಸಲು ಆದೇಶಿಸುವಂತೆ ಮಾಡಿತ್ತು. ಆದರೆ, ಅಂತಿಮವಾಗಿ ಕಾಂಗ್ರೆಸ್ ಸರ್ಕಾರ 10000 ಕ್ಯುಸೆಕ್ ನೀರು ಮಾತ್ರ ಹರಿಸಿತ್ತು. ಆಗಿನ ಜಲಸಂಪನ್ಮೂಲ ಸಚಿವರೂ ಆಗಿದ್ದ ಸಿಎಂ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಜತೆಗೂಡಿ ವಕೀಲರ ತಂಡಕ್ಕೆ ಮಾರ್ಗದರ್ಶನ ಮಾಡಿ ರಾಜ್ಯದ ಪರ ಬಲವಾದ ವಾದ ಮಂಡನೆ ಮಾಡಿಸಿದ್ದರು. ಹಾಗೆಯೇ, ಆ ವರ್ಷ 177 ಟಿಎಂಸಿ ಬದಲು 81 ಟಿಎಂಸಿ ಮಾತ್ರ ನೀರು ಹರಿಸಲಾಗಿತ್ತು.
ಮೇಕೆದಾಟು ಹೋರಾಟಕ್ಕೂ ಬಲ:
ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರವಾಗಿ ವಿರೋಧ ಪಕ್ಷದ ನಾಯಕರ ಅಭಿಪ್ರಾಯ ಪಡೆದು, ರಾಜ್ಯದ ಮುಂದಿನ ಕ್ರಮ ನಿರ್ಧರಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಭಾನುವಾರ ಸರ್ವ ಪಕ್ಷ ಸಭೆ ನಡೆಯಲಿದೆ.ಮಳೆ ಕೊರತೆಯಿಂದ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನ ಹರಿವು ಕುಸಿತ ಕಂಡಿದ್ದು, ಇಂಥ ಸಂಕಷ್ಟದ ಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡುವುದು ಅಸಾಧ್ಯ ಎಂದು ರಾಜ್ಯ ಸರ್ಕಾರ ಹೇಳಿದೆ. ಹೀಗಿರುವಾಗಲೂ ತಮಿಳುನಾಡಿಗೆ ಪ್ರತಿದಿನ 3500 ಕ್ಯುಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿ ಆದೇಶಿಸಿದೆ. ಈ ಆದೇಶ ಪಾಲನೆ ಅಥವಾ ತಿರಸ್ಕಾರ ಹಾಗೂ ರಾಜ್ಯದ ಮುಂದಿರುವ ಆಯ್ಕೆಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಸರ್ವ ಪಕ್ಷ ಸಭೆ ನಡೆಸಲಾಗುತ್ತಿದೆ.ಜತೆಗೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿ ಆದೇಶ ಪಾಲಿಸದಿದ್ದರೆ ಮುಂದೆ ಎದುರಾಗಬಹುದಾದ ಸಮಸ್ಯೆಗಳು ಹಾಗೂ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸುವುದಾದರೆ, ಯಾವೆಲ್ಲ ಅಂಶಗಳನ್ನು ಮುಂದಿಟ್ಟುಕೊಂಡು ಅರ್ಜಿ ಸಲ್ಲಿಸಬೇಕು ಎಂಬ ಬಗ್ಗೆಯೂ ಚರ್ಚಿಸಿ ನಿರ್ಧರಿಸಲಾಗುತ್ತದೆ. ಒಂದು ವೇಳೆ ಸುಪ್ರೀಂ ಕೋರ್ಟ್ ಕೂಡ ನೀರು ಬಿಡಲು ಆದೇಶಿಸಿದರೆ, ಆಗ ರಾಜ್ಯ ಸರ್ಕಾರ ಯಾವ ನಡೆ ಇಡಬೇಕು ಎಂಬ ಬಗ್ಗೆಯೂ ವಿಪಕ್ಷಗಳಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ.
ಸಭೆಯಲ್ಲಿ ಕಾವೇರಿ ಕೊಳ್ಳದ ಜಲಾಶಯಗಳಾದ ಕೆಆರ್ಎಸ್, ಹೇಮಾವತಿ, ಹಾರಂಗಿ ಮತ್ತು ಕಬಿನಿಯಲ್ಲಿನ ನೀರಿನ ಶೇಖರಣೆ, ತಮಿಳುನಾಡಿಗೆ ನೀರು ಹರಿಸಿದರೆ ಉಳಿಯುವ ನೀರಿನ ಪ್ರಮಾಣ, ಮುಂದಿನ ಮಳೆಗಾಲದವರೆಗೆ ಕುಡಿಯುವ ಉದ್ದೇಶಕ್ಕೆ ಅಗತ್ಯವಿರುವ ನೀರಿನ ಪ್ರಮಾಣ ಹಾಗೂ ಜಲಾಶಯಗಳಲ್ಲಿ ಉಳಿಯುವ ನೀರು ಸಾಕಾಗಲಿದೆಯೇ ಎಂಬ ಕುರಿತು ಸರ್ಕಾರದಿಂದ ವಿರೋಧ ಪಕ್ಷದ ನಾಯಕರು, ಶಾಸಕರಿಗೆ ಮಾಹಿತಿ ನೀಡಲಾಗುತ್ತದೆ.ಒಂದು ವೇಳೆ ಹೊಸದಾಗಿ ಡಿಪಿಆರ್ ಸಲ್ಲಿಸಬೇಕೆಂದರೆ ಯಾವೆಲ್ಲ ಅಂಶಗಳನ್ನು ಸೇರಿಸಬೇಕು, ಮೇಕೆದಾಟು ಯೋಜನೆ ಕುರಿತು ಕೇಂದ್ರ ಸರ್ಕಾರದ ಎದುರು ರಾಜಕೀಯವಾಗಿ ಒಗ್ಗಟ್ಟು ಪ್ರದರ್ಶಿಸುವ ಕುರಿತೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಪಕ್ಷ ನಾಯಕರನ್ನು ಕೋರುವ ಸಾಧ್ಯತೆಗಳಿವೆ.