ಮುಂಗಾರು ಅಬ್ಬರ : ಭಾರೀ ಮಳೆಗೆ ಡ್ಯಾಂಗಳಿಗೆ ಭರ್ಜರಿ ನೀರು

KannadaprabhaNewsNetwork | Updated : Jun 18 2025, 07:02 AM IST

ಕೊಡಗು, ಮಲೆನಾಡು, ಕರಾವಳಿ ಭಾಗದಲ್ಲಿ ಮುಂಗಾರು ಅಬ್ಬರಿಸುತ್ತಿದ್ದು, ಈ ಭಾಗದ ನದಿಗಳ ಒಳಹರಿವಿನಲ್ಲಿ ಹೆಚ್ಚಳವಾಗಿದೆ. 

  ಬೆಂಗಳೂರು :  ಕೊಡಗು, ಮಲೆನಾಡು, ಕರಾವಳಿ ಭಾಗದಲ್ಲಿ ಮುಂಗಾರು ಅಬ್ಬರಿಸುತ್ತಿದ್ದು, ಈ ಭಾಗದ ನದಿಗಳ ಒಳಹರಿವಿನಲ್ಲಿ ಹೆಚ್ಚಳವಾಗಿದೆ. ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿಗೆ ಒಂದೇ ದಿನ ಮೂರೂವರೆ ಅಡಿಗಳಷ್ಟು ನೀರು ಹರಿದು ಬಂದಿದ್ದರೆ, ಕೆಆರ್‌ಎಸ್‌ ನೀಡಿನ ಮಟ್ಟ 111 ಅಡಿಗಳಿಗೆ ಏರಿದೆ. ಇದೇ ವೇಳೆ, ಕೊಡಗಿನ ಭಾಗಮಂಡಲದಲ್ಲಿ ಸ್ನಾನಘಟ್ಟ ಮುಳುಗಡೆಯಾಗಿದೆ.

ಡ್ಯಾಂಗಳಲ್ಲಿ ನೀರಿನ ಮಟ್ಟ ಏರಿಕೆ:

ಕೊಡಗಿನಲ್ಲಿ ಮಳೆ ಅಬ್ಬರಿಸುತ್ತಿದ್ದು, ಭಾಗಮಂಡಲದಲ್ಲಿ ತ್ರಿವೇಣಿ ಸಂಗಮದ ಸ್ನಾನಘಟ್ಟ, ಉದ್ಯಾನವನ ಮುಳುಗಡೆಯಾಗಿದೆ. ಹಾರಂಗಿ ಜಲಾಶಯದಿಂದ 18 ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ. ಕಣಿವೆ ತೂಗು ಸೇತುವೆಯನ್ನು ತಾತ್ಕಾಲಿಕವಾಗಿ ಬಂದ್‌ ಮಾಡಲಾಗಿದೆ. ಇದೇ ವೇಳೆ,

ಕೆ‌ಆರ್‌ಎಸ್ ನಲ್ಲಿ ನೀರಿನ ಮಟ್ಟ 111 ಅಡಿಗಳಿಗೆ (ಗರಿಷ್ಠ 124.80 ಅಡಿ) ಏರಿದ್ದು, ಅಣೆಕಟ್ಟಿಗೆ 16 ಸಾವಿರ ಕ್ಯೂಸೆಕ್ ಹರಿದು ಬರುತ್ತಿದೆ.

ಯಾದಗಿರಿ ಜಿಲ್ಲೆಯ ನಾರಾಯಣಪುರ ಡ್ಯಾಂನ 6 ಗೇಟ್‌ಗಳ ಮೂಲಕ ಕೃಷ್ಣಾನದಿಗೆ 25 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದ್ದು, ನೀರು ಹಾಲ್ನೋರೆಯಂತೆ ದುಮ್ಮಿಕ್ಕುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ತುಂಗಾ-ಭದ್ರಾ-ಹೇಮಾವತಿ ನದಿಗಳು ತುಂಬಿ ಹರಿಯುತ್ತಿವೆ. ಜಿಲ್ಲೆಯ ಹೆಬ್ಬೆ ಜಲಪಾತ ಸುಮಾರು 80 ಅಡಿ ಎತ್ತರದಿಂದ ಧುಮ್ಮಿಕ್ಕುತ್ತಿದೆ. ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿರುವ ಜಲಪಾತದ ಜಲವೈಭವ ನೋಡಲು ಜನ ಮುಗಿ ಬೀಳುತ್ತಿದ್ದಾರೆ. ಕೇರಳದ ವಯನಾಡಿನಲ್ಲಿ ಮಳೆಯಾಗುತ್ತಿದ್ದು, ಕಬಿನಿ ಜಲಾಶಯದ ನೀರಿನ ಮಟ್ಟ 2279.56 (ಗರಿಷ್ಟ ಮಟ್ಟ 2284) ಅಡಿಗಳಿಗೆ ಏರಿದೆ. ಜಲಾಶಯದಿಂದ 10 ಸಾವಿರ ಕ್ಯುಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ.

ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಮಳೆ ಅಬ್ಬರಿಸುತ್ತಿದ್ದು, ಕೃಷ್ಣಾ, ದೂದಗಂಗಾ, ವೇದಗಂಗಾ ಹಾಗೂ ಹಿರಣ್ಯಕೇಶಿ ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಕೃಷ್ಣಾ ನದಿಗೆ 50 ಸಾವಿರ ಕ್ಯೂಸೆಕ್ ನೀರಿನ ಒಳ ಹರಿವಿದ್ದು, ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ 12 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ 6 ಕೆಳಹಂತದ ಸೇತುವೆಗಳು ಮುಳುಗಡೆಯಾಗಿವೆ. ಶಿವಮೊಗ್ಗ ತಾಲೂಕಿನ ಗಾಜನೂರು ಸಮೀಪ ಇರುವ ತುಂಗಾ ಜಲಾಶಯದ ಎಲ್ಲಾ 22 ಕ್ರಸ್ಟ್ ಗೇಟ್ ಗಳನ್ನು ತೆರೆದು ನದಿಗೆ ನೀರು ಬಿಡುಗಡೆ ಮಾಡಲಾಗುತ್ತಿದೆ. ಲಿಂಗನಮಕ್ಕಿ ಜಲಾಶಯಕ್ಕೆ ಒಂದೇ ದಿನ ಮೂರೂವರೆ ಅಡಿ ನೀರು ಹರಿದು ಬಂದಿದ್ದು, ಜೋಗಫಾಲ್ಸ್‌ ಮೈದುಂಬಿದೆ. ಮಂಗಳೂರಲ್ಲೂ ಮಳೆಯಾಗುತ್ತಿದ್ದು, ಗಡಿನಾಡು ಕಾಸರಗೋಡಿನ ಪ್ರಸಿದ್ಧ ಮಧೂರು ಶ್ರೀಸಿದ್ಧಿವಿನಾಯಕ ದೇವಸ್ಥಾನ ಭಾರಿ ಮಳೆಗೆ ಮುಳುಗಡೆಯಾಗಿದೆ.

ಕುಂದಾಪುರದಲ್ಲಿ ಜಲಾವೃತಗೊಂಡ 6 ಮನೆಗಳ ಸದಸ್ಯರನ್ನು ಸ್ಥಳಾಂತರಗೊಳಿಸಲಾಗಿದೆ. ಸಮುದ್ರದಲ್ಲಿ ಭಾರೀ ಗಾಳಿ ಬೀಸುತ್ತಿದ್ದು, ಎತ್ತರದ ಅಲೆಗಳು ಅಪ್ಪಳಿಸುವ ಸಾಧ್ಯತೆಗಳಿವೆ. ಹೀಗಾಗಿ, ಕಡಲಿಗೆ ಇಳಿಯದಂತೆ ತೀರದ ನಿವಾಸಗಳಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.

ಮುಂದುವರಿದ ಭೂಕುಸಿತ:

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಲಿಗೆ ಗ್ರಾಮದಲ್ಲಿ ಮಳೆಗೆ ಭೂಕುಸಿತವಾಗಿದ್ದು, ಐದು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಕಂಚಿನಕಲ್‌ ದುರ್ಗದಲ್ಲಿ ಮರದ ಟೊಂಗೆ ಬಿದ್ದು, ಮಹಿಳೆಯೊಬ್ಬಳು ಗಾಯಗೊಂಡಿದ್ದಾರೆ. ಸಕಲೇಶಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಘಾಟ್ ನ ದೊಡ್ಡತಪ್ಲು ಬಳಿ ಬೃಹತ್ ಮರ ಉರುಳಿ ಬಿದ್ದಿದ್ದು, ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಮಂಗಳೂರು ಹೊರವಲಯದ ಕಣ್ಣೂರು ದಯಾಂಬು ಎಂಬಲ್ಲಿ‌‌ ಮನೆ ಮೇಲೆ ಗುಡ್ಡ ಕುಸಿದಿದ್ದು, 4 ಮನೆಗಳಿಗೆ ಹಾನಿಯಾಗಿದೆ. ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಗುಡ್ಡದ ಕೆಳ ಭಾಗದ ಸುಮಾರು 50ಕ್ಕೂ ಹೆಚ್ಚು ಮನೆಗಳಿಗೆ ಅಪಾಯ ಎದುರಾಗಿದೆ. ಹೊಸನಗರ ತಾಲೂಕಿನ ಅರಮನೆ ಗ್ರಾಪಂ ವ್ಯಾಪ್ತಿಯಲ್ಲಿ ಕುಂದಗಲ್ ಗ್ರಾಮದಲ್ಲಿ ಭಾರಿ ಭೂಕುಸಿತ ಉಂಟಾಗಿದೆ. ಉತ್ತರ ಕನ್ನಡ ಜಿಲ್ಲೆ ಬನವಾಸಿ ಬಳಿ ನವಲಗುಂದ-ಬನವಾಸಿ- ಮೊಗವಳ್ಳಿ ರಾಜ್ಯ ಹೆದ್ದಾರಿಯಲ್ಲಿ ಮರ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.

ಬಳ್ಳಾರಿ ತಾಲೂಕಿನ ಸಿರವಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯ ಚಾವಣಿ ಕುಸಿದು ಮೂರನೇ ತರಗತಿ ವಿದ್ಯಾರ್ಥಿ ಸೋಮಲಿಂಗಪ್ಪ ಎಂಬಾರ ಗಾಯಗೊಂಡಿದ್ದಾನೆ. ಮಳೆಯಿಂದಾಗಿ ಉಡುಪಿ, ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ 260ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

Read more Articles on