ಅತಿವೃಷ್ಟಿಯಿಂದ ಮೂಲಭೂತ ಸೌಕರ್ಯಗಳಿಗೂ ಪೆಟ್ಟು

KannadaprabhaNewsNetwork |  
Published : Oct 31, 2025, 02:30 AM IST
30ಡಿಡಬ್ಲೂಡಿ1ಧಾರವಾಡ ತಾಲೂಕಿನ ನರೇಂದ್ರದಿಂದ ಸವದತ್ತಿ ಮುಖ್ಯ ರಸ್ತೆ ಸಂಪರ್ಕ ಕಲ್ಪಿಸುವ ಗ್ರಾಮೀಣ ರಸ್ತೆಯ ದುಸ್ಥಿತಿ. | Kannada Prabha

ಸಾರಾಂಶ

ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ 500 ಕಿ.ಮೀ.ಗೂ ಹೆಚ್ಚು ರಸ್ತೆ, 102 ಸೇತುವೆ, ಸಿಡಿಗಳಿಗೆ ಹಾನಿಯಾಗಿದ್ದು, 1,241 ವಿದ್ಯುತ್ ಕಂಬಗಳು ಕುಸಿದಿವೆ.

ಬಸವರಾಜ ಹಿರೇಮಠ

ಧಾರವಾಡ: ಸಾಮಾನ್ಯವಾಗಿ ದೀಪಾವಳಿ ಸಂದರ್ಭದಲ್ಲಿ ಮಳೆಗಾಲ ಮುಗಿದು ಚಳಿಗಾಲ ಶುರುವಾಗುವ ಸಮಯ. ಆದರೆ, ದೀಪಾವಳಿ ಮುಗಿದು ವಾರ ಕಳೆದರೂ ಜಿಲ್ಲೆಯಲ್ಲಿ ಮಳೆರಾಯನ ಪ್ರತಾಪ ಮಾತ್ರ ಇನ್ನೂ ನಿಂತಿಲ್ಲ. ಹೀಗಾಗಿ, ಈ ಬಾರಿಯ ಭಾರೀ ಮಳೆಯಿಂದ ಬರೀ ಬೆಳೆ ಹಾನಿ ಮಾತ್ರವಲ್ಲದೇ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದ ಮೂಲಭೂತ ಸೌಕರ್ಯಗಳಿಗೂ ತೀವ್ರ ಪೆಟ್ಟಾಗಿದೆ.

ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳು ಸಮೀಕ್ಷೆಯಲ್ಲಿ ಒಂದು ಲಕ್ಷ ಹೆಕ್ಟೇರ್ ಸಮೀಪದ ಪ್ರದೇಶದಲ್ಲಿನ ವಿವಿಧ ಬೆಳೆಗಳು ಹಾಗೂ 128 ಮನೆಗಳಿಗೆ ಹಾನಿಯಾಗಿದೆ. ಬೆಳೆ ಹಾನಿ ಹಾಗೂ ಮನೆ ಹಾನಿ ಪರಿಹಾರ ನೀಡುವ ಕಾರ್ಯ ಪ್ರಗತಿಯಲ್ಲಿದೆ. ಜೊತೆ ಜೊತೆಗೆ ನಿರಂತರ ಮಳೆಯಿಂದಾಗಿ ನಗರ, ಗ್ರಾಮೀಣ ಭಾಗದಲ್ಲಿನ ಸಾರ್ವಜನಿಕ ಮೂಲಸೌಕರ್ಯಗಳ ಮೇಲೆ ವಿಶೇಷವಾಗಿ ರಸ್ತೆ ಹಾಗೂ ಸೇತುವೆಗಳ ಮೇಲೆ ತೀವ್ರ ಪರಿಣಾಮ ಬೀರಿದೆ.

500 ಕಿ.ಮೀ. ರಸ್ತೆಗೆ ಹಾನಿ

ಸಮೀಕ್ಷಾ ವರದಿಗಳ ಪ್ರಕಾರ, ಜಿಲ್ಲೆಯಲ್ಲಿ 500 ಕಿ.ಮೀ.ಗೂ ಹೆಚ್ಚು ರಸ್ತೆಗಳು ಹದಗೆಟ್ಟಿವೆ. ಹಾನಿಗೊಳಗಾದ ರಸ್ತೆಗಳು ಪ್ರಯಾಣಿಕರಿಗೆ ಅಪಾಯಕಾರಿಯಾಗಿದ್ದು, ಪಿಡಬ್ಲ್ಯೂಡಿ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳು ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲು ಮತ್ತು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಮಳೆ ಬಿಡುತ್ತಿಲ್ಲ. ಜೊತೆಗೆ ಅನುದಾನದ ಕೊರತೆಯೂ ಸ್ಥಳೀಯ ಆಡಳಿತಕ್ಕೆ ಅಡ್ಡಿಯಾಗಿದೆ.

ಜಿಲ್ಲೆಯಲ್ಲಿ ಮಳೆ ಸಂಬಂಧಿತ ಹಾನಿಗಳ ಕುರಿತ ಜಂಟಿ ಸಮೀಕ್ಷೆಯ ವರದಿಯ ಪ್ರಕಾರ, ಅಧಿಕಾರಿಗಳು 37ಕ್ಕೂ ಹೆಚ್ಚು ಸಣ್ಣ ಸೇತುವೆಗಳು ಮತ್ತು ಅಡ್ಡ-ಒಳಚರಂಡಿ (ಸಿಡಿ) ಕಾಮಗಾರಿಗಳಿಗೆ ಹಾನಿಯಾಗಿರುವುದನ್ನು ಪತ್ತೆ ಹಚ್ಚಿದ್ದಾರೆ. ಹೆಚ್ಚುವರಿಯಾಗಿ, ಲೋಕೋಪಯೋಗಿ ಇಲಾಖೆಯಿಂದ ನಿರ್ವಹಿಸಲ್ಪಡುವ 20.38 ಕಿ.ಮೀ. ಜಿಲ್ಲಾ ರಸ್ತೆಗಳು ಮತ್ತು ಆರು ಕಿ.ಮೀ. ರಾಜ್ಯ ಹೆದ್ದಾರಿಗಳು ಹಾನಿಗೊಳಗಾಗಿವೆ. ಗ್ರಾಮೀಣ ಪ್ರದೇಶಗಳಲ್ಲಿ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ, ಅಲ್ಲಿ 340 ಕಿ.ಮೀ.ಗೂ ಹೆಚ್ಚು ರಸ್ತೆಗಳು ಹಾನಿಗೊಳಗಾಗಿವೆ, 65 ಸೇತುವೆಗಳು ಹಾನಿಗೊಳಗಾಗಿವೆ ಮತ್ತು 12 ಸಣ್ಣ ಟ್ಯಾಂಕ್‌ಗಳು ಹಾನಿಗೊಳಗಾಗಿವೆ. ನಗರ ಪ್ರದೇಶಗಳು ಸಹ ವ್ಯಾಪಕವಾಗಿ ಹಾನಿಗೊಳಗಾಗಿವೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 106 ಕಿ.ಮೀ. ವ್ಯಾಪ್ತಿಯ ರಸ್ತೆಗಳು ಕಳಪೆ ಸ್ಥಿತಿಯಲ್ಲಿವೆ ಎಂದು ವರದಿಯಾಗಿದೆ. ಇದಲ್ಲದೆ, 72 ಶಾಲೆಗಳು ಮತ್ತು 49 ಅಂಗನವಾಡಿ ಕೇಂದ್ರಗಳು ಸಹ ಮಳೆಯಿಂದ ಹಾನಿಗೊಳಗಾಗಿವೆ. ಮಳೆಯಿಂದಾಗಿ ವಿದ್ಯುತ್ ಮೂಲಸೌಕರ್ಯದ ಮೇಲೂ ಪರಿಣಾಮ ಬೀರಿದ್ದು, 1,241ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಕುಸಿದಿದ್ದು, 80 ಟ್ರಾನ್ಸ್‌ಫಾರ್ಮರ್‌ಗಳು ಹಾನಿಗೊಳಗಾಗಿವೆ.

ಹಳೆ ಡಿವೈಎಸ್‌ಪಿ ವೃತ್ತದಿಂದ ಮುರುಘಾಮಠದ ವರೆಗಿನ, ಶಾಸಕ ಅರವಿಂದ ಬೆಲ್ಲದ ಅವರ ಮನೆ ಎದುರಿನ ರಸ್ತೆ ಸಹ ಹಾನಿಗೊಳಗಾಗಿದೆ. ತೇಜಸ್ವಿ ನಗರ ಸೇತುವೆಯ ದುರಸ್ತಿ ಬಾಕಿ ಉಳಿದಿದೆ. ಅಲ್ಲಿ ನಿತ್ಯ ಟ್ರಾಫಿಕ್‌ ಕಿರಿಕಿರಿ ಉಂಟಾಗುತ್ತಿದೆ. ಇನ್ನು, ಕಾಲೇಜು ರಸ್ತೆ, ಸಪ್ತಾಪುರ ಭಾವಿ ರಸ್ತೆ, ಶ್ರೀನಗರ, ಬಸವ ನಗರ, ಹೊಯ್ಸಳ ನಗರ ರಸ್ತೆ, ಕೆಎಚ್‌ಬಿ ಕಾಲೋನಿ ರಸ್ತೆ ಮತ್ತು ಹಳೆಯ ಎಪಿಎಂಸಿ ರಸ್ತೆ ಸೇರಿದಂತೆ ಹಲವಾರು ಪ್ರಮುಖ ರಸ್ತೆಗಳಲ್ಲಿ ತಗ್ಗು ಗುಂಡಿಗಳು ಎದ್ದು ಕಾಣುತ್ತಿವೆ.

ಧೂಳುಮಯ

ರಸ್ತೆಗಳಲ್ಲಿ ದೊಡ್ಡ ಗುಂಡಿಗಳು ಸೃಷ್ಟಿಯಾಗಿದ್ದು, ಅಲ್ಲಿ ತಾತ್ಕಾಲಿಕವಾಗಿ ಮಣ್ಣು ಹಾಕಿದ್ದು, ಬಸ್‌, ಲಾರಿಗಳು ಹೋದಾಗ ಬೈಕ್‌ ಸವಾರರು ಹಾಗೂ ಪಾದಾಚಾರಿಗಳಿಗೆ ಉಸಿರಾಡಲು ಕಷ್ಟವಾಗುತ್ತಿದೆ. ರಸ್ತೆ ಬದಿಯ ಮನೆಯವರು ದಿನವಿಡೀ ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಬೇಕಾಗುತ್ತದೆ. ಸ್ಥಳೀಯ ಆಡಳಿತ ವ್ಯವಸ್ಥೆಯು ಈ ಬಗ್ಗೆ ಕಾಳಜಿ ವಹಿಸಲಿ ಎಂದು ಕೊಪ್ಪದಕೇರಿಯ ನಿವಾಸಿ ಮೋಹನ ರಾಮದುರ್ಗ ಆಗ್ರಹಿಸಿದರು.ಜಿಲ್ಲೆಯಲ್ಲಾಗಿರುವ ಮೂಲಭೂತ ಸೌಕರ್ಯಗಳ ಕುರಿತ ಹಾನಿಯಾದ ವರದಿ

1) ರಾಜ್ಯ ಹೆದ್ದಾರಿಗಳು - 5.7 ಕಿ.ಮೀ.

2) ಜಿಲ್ಲಾ ಪ್ರಮುಖ ರಸ್ತೆಗಳು - 20.38 ಕಿ.ಮೀ.

3) ಸೇತುವೆ, ಸಿಡಿಗಳ ಹಾನಿ - 102

4) ಗ್ರಾಮೀಣ ರಸ್ತೆಗಳು - 340 ಕಿ.ಮೀ.

5) ಕೆರೆಗಳ ಹಾನಿ - 12

6) ಸಂಸ್ಥೆಗಳಲ್ಲಿ ರಸ್ತೆ ಹಾನಿ - 106.58 ಕಿ.ಮೀ.

7) ಶಾಲೆಗಳ ಹಾನಿ - 72

8) ಅಂಗನವಾಡಿ ಕೇಂದ್ರ - 49

9) ವಿದ್ಯುತ್‌ ಕಂಬಗಳ ಹಾನಿ - 1241

10) ವಿದ್ಯುತ್‌ ಪರಿವರ್ತಕಗಳ ಹಾನಿ - 80

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ