ಮುದ್ದೇಬಿಹಾಳ: ಪಟ್ಟಣ ಸೇರಿದಂತೆ ತಾಲೂಕಾದ್ಯಂತ ಗುಡುಗು, ಸಿಡಿಲು ಮಿಂಚು ಸೇರಿದಂತೆ ಭಾರೀ ಬಿರುಗಾಳಿ ಮಳೆ ಸುರಿದಿದೆ. ಉತ್ತಮ ಮಳೆಯಾಗಿದ್ದು, ಕಳೆದು ಎರಡ್ಮೂರು ತಿಂಗಳುಗಳಿಂದ ಬೇಸಿಗೆ ಬಿಸಿಲಿಗೆ ಬಸವಳಿದಿದ್ದ ಜನತೆಗೆ ಗುರುವಾರ ಸಂಜೆ ಸುರಿದ ಮಳೆ ತಂಪೆದಿದೆ. ಧಾರಾಕಾರ ಮಳೆಯಿಂದ ಜನರು ಕೂಡ ಸಂತಸಗೊಂಡಿದ್ದು, ಪಟ್ಟಣದಲ್ಲಿ ತಂಪಾದ ವಾತಾವರಣ ನಿರ್ಮಾಣವಾಗಿದೆ.ಈ ಬಿರುಗಾಳಿ ಮಳೆ ಹಾಗೂ ಸಿಡಿಲಿನ ಹೊಡೆತಕ್ಕೆ ಅವಾಂತರಗಳು ಸೃಷ್ಟಿಯಾಗಿವೆ. ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ವಿವಿಧ ಗ್ರಾಮಗಳಲ್ಲಿ ಮನೆಗಳು ಬಿರುಕು ಬಿಟ್ಟಿವೆ. ಗಿಡಮರಗಳಿ ಉರುಳಿ ಬಿದ್ದ ಘಟನೆಗಳು ಸಂಭವಿಸಿವೆ. ಜೊತೆಗೆ ಗೋನಾಳ ಎಸ್.ಎಚ್ ಗ್ರಾಮ ಸೇರಿ ವಿವಿಧೆಡೆ ಸಿಡಿಲು ಬಡಿದು ಎತ್ತುಗಳು ಹಾಗೂ ಆಕಳು, ಎಮ್ಮೆ ಮೃತಪಟ್ಟಿವೆ. ಗೋನಾಳ ಎಸ್.ಎಚ್ ಗ್ರಾಮದ ಬಸಪ್ಪ ಮಡ್ಡೆಪ್ಪ ಉಪ್ಪಲದಿನ್ನಿ ಎಂಬುವವರಿಗೆ ಸೇರಿದ 1 ಎತ್ತು ಹಾಗೂ ಬಸನಗೌಡ ಶಿವನಗೌಡ ಪಾಟೀಲ ಎಂಬುವವರಿಗೆ ಸೇರಿದ 1 ಅಕಳು ಮತ್ತು ದೇವೂರ ಗ್ರಾಮದ ಹಣಮಂತ ಅಡಿಯಾಳ ಅವರಿಗೆ ಸೇರಿದ 1 ಎಮ್ಮೆ ಹಾಗೂ ಅಡವಿ ಹುಲಗಬಾಲ ಗ್ರಾಮದ ಹಣಮಂತ ಕಂಬಾರ ಅವರಿಗೆ ಸೇರಿದ 1 ಎತ್ತು ಸಿಡಿಲು ಬಡಿದು ಮೃತ ಪಟ್ಟಿವೆ.-----------ಮೃತ ರಾಸುಗಳಿಗೆ ಪರಿಹಾರಕ್ಕೆ ಶಾಸಕರ ಸೂಚನೆ
ಮುದ್ದೇಬಿಹಾಳ: ಭಾರೀ ಮಳೆ ಹಾಗೂ ಸಿಡಿಲು ಬಡಿದು ಮೃತಪಟ್ಟಿರುವ ಆಕಳು, ಹಸು, ಎತ್ತು, ಎಮ್ಮೆರೈತ ಕುಟುಂಬಗಳಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ತಹಸೀಲ್ದಾರ್ಗೆ ಸೂಚಿಸಲಾಗಿದೆ ಎಂದು ಶಾಸಕ ಹಾಗೂ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ ಹೇಳಿದ್ದಾರೆ.ಘಟನೆ ಬಗ್ಗೆ ದೂರವಾಣಿಯಲ್ಲಿ ಪ್ರತಿಕ್ರಿಯೆ ನೀಡಿರುವ ಶಾಸಕರು, ಮತ್ತೆ ಮುಂದೆ ತೊಂದರೆಯಾದರೆ ಪರಿಶೀಲಿಸಿ ಕ್ರಮಕೈಗೊಳ್ಳಬೇಕು. ಮುಂದೆ ಮುಂಗಾರು ಉತ್ತಮವಾಗಿದೆ. ಮುಂಗಾರು ಬಿತ್ತನೆಗೆ ತಾಲೂಕಿನಲ್ಲಿ ರೈತರಿಗೆ ಯಾವುದೇ ಬೀಜ, ಗೊಬ್ಬರ ಕೊರತೆಯಾಗದಂತೆ ಎಚ್ಚರಿಕೆವಹಿಸಬೇಕು. ಮಾರುಕಟ್ಟೆಯಲ್ಲಿ ನಕಲಿ ಬೀಜಗಳ ಹಾವಳಿ ಇದ್ದು, ಈ ಬಗ್ಗೆ ಕ್ರಮಗಳನ್ನು ಕೈಗೊಳ್ಳುವಂತೆ ತಹಸೀಲ್ದಾರ್ ಬಸವರಾಜ್ ನಾಗರಾಳ ಅವರಿಗೆ ಸೂಚನೆ ನೀಡಿದ್ದಾಗಿ ಶಾಸಕ ಹಾಗೂ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ ಹೇಳಿದ್ದಾರೆ. ಅಲ್ಲದೇ, ಕೃಷ್ಣ ನದಿ ತೀರದ ಪ್ರದೇಶದಲ್ಲಿ ಪ್ರವಾಹದಿಂದಾಗಿ ಅನಾಹುತಗಳನ್ನು ಸಂಭವಿಸುವ ಸಾಧ್ಯತೆ ಇದ್ದು, ಅವುಗಳನ್ನು ತಪ್ಪಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ಜರುಗಿಸಬೇಕು. ಆಯಾ ಗ್ರಾಮಗಳಲ್ಲಿ ಡಂಗುರ ಸಾರಿ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು ತಹಸೀಲ್ದಾರ್ಗೆ ಸೂಚನೆ ನೀಡಿದ್ದಾಗಿ ತಿಳಿಸಿದ್ದಾರೆ.