ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮೂರೂವರೆ ವರ್ಷದ ಬಾಲಕಿಗೆ ನೆರವು

KannadaprabhaNewsNetwork |  
Published : May 21, 2026, 01:15 AM IST
 ಸಿಕೆಬಿ-2 ಉಸಿರಾಟ ಸಮಸ್ಯೆಯಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಬಾಲಕಿ ಶಿವಾಂಗಿ ಶರ್ಮಾ ಜೊತೆಗೆ ತಂದೆ ಗೌರವ್‌ ಶರ್ಮಾ ಹಾಗೂ ತಾಯಿ ವಿಭಾ ಶರ್ಮಾ | Kannada Prabha

ಸಾರಾಂಶ

ಛತ್ತೀಸ್‌ಗಢ ಮೂಲದ ಬಾಲಕಿ ಶಿವಾಂಗಿ ಶರ್ಮಾ 2025ರಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು. ಶಸ್ತ್ರಚಿಕಿತ್ಸೆಯ ನಂತರ ಉಂಟಾದ ತೊಂದರೆಗಳಿಂದಾಗಿ ಆಕೆಗೆ ದೀರ್ಘಕಾಲ ಉಸಿರಾಟದ ಟ್ಯೂಬ್ ಅಳವಡಿಸಬೇಕಾಯಿತು. ಇದರ ಪರಿಣಾಮವಾಗಿ ‘ಸಬ್‌ಗ್ಲೋಟಿಕ್ ಸ್ಟೆನೋಸಿಸ್‌’ (ಉಸಿರಾಟದ ನಾಳ ಕಿರಿದಾಗಿ ಬಹುತೇಕ ಮುಚ್ಚಿ ಹೋಗುವ ಸ್ಥಿತಿ) ಎಂಬ ಗಂಭೀರ ಸಮಸ್ಯೆ ಕಾಣಿಸಿಕೊಂಡು, ಉಸಿರಾಟದ ನಾಳ ಕಿರಿದಾಗಿ ಸಂಪೂರ್ಣ ಮುಚ್ಚಿಕೊಂಡಿತ್ತು. ಪರಿಣಾಮ, ಬಾಲಕಿಗೆ ಸಹಜವಾಗಿ ಉಸಿರಾಡುವುದೇ ಕಷ್ಟವಾಗಿತ್ತು.

ಮಧುಸೂದನ ಸಾಯಿ ಆಸ್ಪತ್ರೆಯಲ್ಲಿ ಉಚಿತ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಹೃದಯ ಕಾಯಿಲೆಯ ಶಸ್ತ್ರಚಿಕಿತ್ಸೆಗೊಳಗಾದ ಬಳಿಕ ಗಂಭೀರ ಉಸಿರಾಟ ಸಮಸ್ಯೆಯಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮೂರೂವರೆ ವರ್ಷದ ಬಾಲಕಿಗೆ ಮುದ್ದೇನಹಳ್ಳಿಯ ಸತ್ಯಸಾಯಿಗ್ರಾಮದ ಶ್ರೀ ಮಧುಸೂದನ ಸಾಯಿ ಆಸ್ಪತ್ರೆಯ ವೈದ್ಯರು ಹೊಸ ಬದುಕು ನೀಡಿದ್ದಾರೆ.

ಸಂಪೂರ್ಣವಾಗಿ ಮುಚ್ಚಿಕೊಂಡಿದ್ದ ಉಸಿರಾಟದ ನಾಳವನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಯಶಸ್ವಿಯಾಗಿ ಮರುನಿರ್ಮಿಸಿ, ಅಪರೂಪದ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ನಡೆಸಿದ್ದಾರೆ.ಛತ್ತೀಸ್‌ಗಢ ಮೂಲದ ಬಾಲಕಿ ಶಿವಾಂಗಿ ಶರ್ಮಾ 2025ರಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು. ಶಸ್ತ್ರಚಿಕಿತ್ಸೆಯ ನಂತರ ಉಂಟಾದ ತೊಂದರೆಗಳಿಂದಾಗಿ ಆಕೆಗೆ ದೀರ್ಘಕಾಲ ಉಸಿರಾಟದ ಟ್ಯೂಬ್ ಅಳವಡಿಸಬೇಕಾಯಿತು. ಇದರ ಪರಿಣಾಮವಾಗಿ ‘ಸಬ್‌ಗ್ಲೋಟಿಕ್ ಸ್ಟೆನೋಸಿಸ್‌’ (ಉಸಿರಾಟದ ನಾಳ ಕಿರಿದಾಗಿ ಬಹುತೇಕ ಮುಚ್ಚಿ ಹೋಗುವ ಸ್ಥಿತಿ) ಎಂಬ ಗಂಭೀರ ಸಮಸ್ಯೆ ಕಾಣಿಸಿಕೊಂಡು, ಉಸಿರಾಟದ ನಾಳ ಕಿರಿದಾಗಿ ಸಂಪೂರ್ಣ ಮುಚ್ಚಿಕೊಂಡಿತ್ತು. ಪರಿಣಾಮ, ಬಾಲಕಿಗೆ ಸಹಜವಾಗಿ ಉಸಿರಾಡುವುದೇ ಕಷ್ಟವಾಗಿತ್ತು.

ಚಿಕಿತ್ಸೆಗಾಗಿ ಛತ್ತೀಸ್‌ಗಢದ ಏಮ್ಸ್‌ ಸೇರಿದಂತೆ ಹಲವು ಆಸ್ಪತ್ರೆಗಳನ್ನು ಸಂಪರ್ಕಿಸಿದರೂ, ಪ್ರಕರಣದ ಜಟಿಲತೆ ಹಿನ್ನೆಲೆಯಲ್ಲಿ, ಶಸ್ತ್ರಚಿಕಿತ್ಸೆಗೆ ವೈದ್ಯರು ಹಿಂದೇಟು ಹಾಕಿದ್ದರು. ಅಲ್ಲದೇ ಆರ್ಥಿಕವಾಗಿ ದುರ್ಬಲ ಕುಟುಂಬವಾಗಿದ್ದರಿಂದ ದುಬಾರಿ ಚಿಕಿತ್ಸೆ ಭರಿಸುವುದೂ ಅವರಿಗೆ ಸಾಧ್ಯವಾಗಿರಲಿಲ್ಲ.

ಕೊನೆಯ ಪ್ರಯತ್ನವಾಗಿ ಬಾಲಕಿಯನ್ನು ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ದಾಖಲಿಸಲಾಯಿತು. ಇಲ್ಲಿನ ತಜ್ಞ ವೈದ್ಯರ ತಂಡ ಈ ಸವಾಲನ್ನು ಸ್ವೀಕರಿಸಿ ಹಂತ ಹಂತವಾಗಿ ಚಿಕಿತ್ಸೆ ನೀಡಿತು. ಲೇಸರ್‌, ಕೋಬ್ಲೇಷನ್‌, ಬಲೂನ್ ಡೈಲೇಷನ್ ಹಾಗೂ ಸ್ಟಂಟ್ ಅಳವಡಿಕೆ ಸೇರಿ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಉಸಿರಾಟದ ನಾಳವನ್ನು ಪುನರ್‌ನಿರ್ಮಿಸಲಾಯಿತು.

ಕೋಟ್‌...

ಮಧುಸೂದನ ಸಾಯಿ ಆಸ್ಪತ್ರೆ ದೇವಾಲಯ ಇದ್ದ ಹಾಗೆ. ಯಾವ ಆಸ್ಪತ್ರೆಯಲ್ಲೂ ಸಿಗದ ವೈದ್ಯಕೀಯ ಸೌಲಭ್ಯ ಮತ್ತು ಪ್ರೀತಿಯನ್ನು ಇಲ್ಲಿ ನೀಡುತ್ತಾರೆ. ನನ್ನ ಮಗಳಿಗೆ ಬದುಕು ಕೊಟ್ಟ ವೈದ್ಯರಿಗೆ ಆಭಾರಿ. ನಮ್ಮಂತ ಬಡವರ ಬದುಕಿಗೆ ಇದು ಆಶಾಕಿರಣ.

ಗೌರವ್ ಶರ್ಮಾ, ಬಾಲಕಿ ತಂದೆ

-----

ಬಾಲರೋಗಿಗಳಲ್ಲಿ ಸಂಪೂರ್ಣವಾಗಿ ಮುಚ್ಚಿಕೊಂಡ ಉಸಿರಾಟದ ನಾಳವನ್ನು ಎಂಡೋಸ್ಕೋಪಿಕ್ ತಂತ್ರಜ್ಞಾನ ಬಳಸಿ ಮರುನಿರ್ಮಿಸುವುದು ಅತ್ಯಂತ ಅಪರೂಪದ ಸಾಧನೆ. ಈ ಬಾಲಕಿಗೆ ನಾವು ಅತ್ಯಂತ ಸಂಕೀರ್ಣವಾದ ಐದು ಶಸ್ತ್ರಚಿಕಿತ್ಸೆ ಮಾಡಿದ್ದೇವೆ.

ಡಾ. ಕೆ. ಬಿ. ಬಾಲಿ, ಇಎನ್‌ಟಿ ವಿಭಾಗದ ಮುಖ್ಯಸ್ಥ

---------

ಸಿಕೆಬಿ-2 ಬಾಲಕಿ ಶಿವಾಂಗಿ ಜೊತೆಗೆ ತಂದೆ ಗೌರವ್‌ ಶರ್ಮಾ, ತಾಯಿ ವಿಭಾ ಶರ್ಮಾ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತುಮಕೂರು ವಿವಿ ಕಲಾ ಕಾಲೇಜು ಚಾಂಪಿಯನ್
ಸಾಣೇಹಳ್ಳಿ ಕೆರೆ ಹೂಳೆತ್ತುವ ಕಾರ್ಯ ಒಂದು ವಾರದಲ್ಲಿ ಮುಕ್ತಾಯ