ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಬುಧವಾರ ರಂಗಮಂದಿರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಟಿ.ವೆಂಕಟೇಶ್, 2016ರಲ್ಲೂ ಒಮ್ಮೆ ರಂಗಮಂದಿರದ ನವೀಕರಣ ಮಾಡಲಾಗಿತ್ತು. ಆದರೆ ಈ ಬಾರಿ ಇದನ್ನು ಒಂದು ಸವಾಲಾಗಿ ಸ್ವೀಕರಿಸಿ, ಪಿವಿಆರ್ ಮಾದರಿಯಲ್ಲಿ ಅತ್ಯಾಧುನಿಕ ಸೌಂಡ್ ಮತ್ತು ಲೈಟಿಂಗ್ಸ್ ಹೊಂದಿರುವ ‘ಅಕಾಸ್ಟಿಕ್ ಥಿಯೇಟರ್’ ಆಗಿ ಪರಿವರ್ತಿಸಲಾಗಿದೆ. ಬೆಂಗಳೂರಿನ ‘ಬ್ರಿಕ್ಸ್ ವಾಲ್'''''''' ಎಂಬ ಹೆಸರಾಂತ ಸಂಸ್ಥೆಯ ತಾಂತ್ರಿಕ ನೆರವಿನೊಂದಿಗೆ ಈ ಸುಸಜ್ಜಿತ ಒಳಾಂಗಣ ವಿನ್ಯಾಸ ಮಾಡಲಾಗಿದ್ದು, ಇನ್ನು ಹೊರಗಡೆ ಕೇವಲ ನಾಮಫಲಕ ಹಾಗೂ ಪ್ಲಾಂಟೇಶನ್ ಕೆಲಸಗಳು ಮಾತ್ರ ಬಾಕಿ ಉಳಿದಿವೆ ಎಂದು ತಿಳಿಸಿದರು.
ಜಿಲ್ಲಾ ಖನಿಜ ಪ್ರತಿಷ್ಠಾನ (ಡಿಎಂಎಫ್) ನಿಧಿಯಿಂದ 2.5 ಕೋಟಿ ರು. ವೆಚ್ಚದಲ್ಲಿ ರಂಗಮಂದಿರದ ಒಳಾಂಗಣ ಹಾಗೂ ಹೊರಾಂಗಣದ ಸಿವಿಲ್ ಸ್ಟ್ರಕ್ಚರ್, ಪೇವರ್ಸ್ ಮತ್ತು ಮೇಲ್ಛಾವಣಿ ಸೇರಿದಂತೆ ಸಂಪೂರ್ಣ ದುರಸ್ತಿ ಕಾರ್ಯ ಮಾಡಲಾಗಿದ್ದು, ಆಧುನೀಕರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹರ್ಷ ವ್ಯಕ್ತಪಡಿಸಿದರು.ಜಿಲ್ಲೆಯ ಹೆಮ್ಮೆಯ ಬರಹಗಾರರಾದ ತರಾಸು ಅವರ ಹೆಸರನ್ನು ರಂಗಮಂದಿರಕ್ಕೆ ನಾಮಕರಣ ಮಾಡಲಾಗಿದೆ. ಇಂದಿನ ಪೀಳಿಗೆಗೆ ತರಾಸು ಅವರ ಕೊಡುಗೆ ಹಾಗೂ ಕಾದಂಬರಿಗಳ ಪರಿಚಯ ಇರಲಿ ಎಂಬ ಉದ್ದೇಶದಿಂದ, ಅವರ ಪ್ರಸಿದ್ಧ ಕಾದಂಬರಿಗಳಾದ ದುರ್ಗಾಸ್ತಮಾನ, ಕಂಬನಿಯ ಕುಯಿಲು, ರಕ್ತರಾತ್ರಿ ಸೇರಿದಂತೆ ಹಲವು ಕೃತಿಗಳ ಹೆಸರುಗಳನ್ನು ಒಳಾಂಗಣದಲ್ಲಿ ಪ್ರದರ್ಶಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕ ಎಂ.ಜೆ.ಮಹೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಬಿ.ಎಸ್.ಹರೀಶ್ ಕುಮಾರ್ ಇದ್ದರು.