ಇ- ಖಾತಾ ಮುಕ್ತ ನಗರವನ್ನಾಗಿಸಲು ಸಹಕರಿಸಿ :ಶಾಸಕ ಇಕ್ಬಾಲ್

KannadaprabhaNewsNetwork |  
Published : Feb 20, 2025, 12:46 AM IST
19ಕೆಆರ್ ಎಂಎನ್ 2.ಜೆಪಿಜಿರಾಮನಗರ ನಗರಸಭೆ ಸಭಾಂಗಣದಲ್ಲಿ ಕ್ರಮಬದ್ದವಲ್ಲದ ಸ್ವತ್ತುಗಳಿಗೆ ನಮೂನೆ 3/ ಎ ವಿತರಿಸುವ ಅಭಿಯಾನಕ್ಕೆ ಅರ್ಜಿ ವಿತರಿಸುವ ಮೂಲಕ ಶಾಸಕ ಇಕ್ಬಾಲ್ ಹುಸೇನ್ ರವರು ಇ - ಖಾತಾ ಅಭಿಯಾನಕ್ಕೆ  ಚಾಲನೆ ನೀಡಿದರು. | Kannada Prabha

ಸಾರಾಂಶ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಇ- ಖಾತಾ ಅಭಿಯಾನವನ್ನು ಯಶಸ್ವಿಗೊಳಿಸುವ ಮೂಲಕ ರಾಮನಗರವನ್ನು ಇ- ಖಾತಾ ಮುಕ್ತವನ್ನಾಗಿ ಮಾಡಲು ನಗರಸಭೆ ಅಧಿಕಾರಿಗಳು ಹಾಗೂ ಸ್ವತ್ತಿನ ಮಾಲೀಕರು ಸಹಕಾರ ನೀಡಬೇಕು ಎಂದು ಶಾಸಕ ಇಕ್ಬಾಲ್ ಹುಸೇನ್ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ರಾಮನಗರ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಇ- ಖಾತಾ ಅಭಿಯಾನವನ್ನು ಯಶಸ್ವಿಗೊಳಿಸುವ ಮೂಲಕ ರಾಮನಗರವನ್ನು ಇ- ಖಾತಾ ಮುಕ್ತವನ್ನಾಗಿ ಮಾಡಲು ನಗರಸಭೆ ಅಧಿಕಾರಿಗಳು ಹಾಗೂ ಸ್ವತ್ತಿನ ಮಾಲೀಕರು ಸಹಕಾರ ನೀಡಬೇಕು ಎಂದು ಶಾಸಕ ಇಕ್ಬಾಲ್ ಹುಸೇನ್ ಮನವಿ ಮಾಡಿದರು.

ನಗರಸಭೆ ಸಭಾಂಗಣದಲ್ಲಿ ಕ್ರಮಬದ್ಧವಲ್ಲದ ಸ್ವತ್ತುಗಳಿಗೆ ನಮೂನೆ 3/ ಎ ವಿತರಿಸುವ ಅಭಿಯಾನಕ್ಕೆ ಅರ್ಜಿ ವಿತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಎಲ್ಲ ಆಸ್ತಿಗಳಿಗೆ ಇ- ಖಾತಾ ವಿತರಣೆ ಮಾಡುವುದರಿಂದ ರಾಮನಗರ ನಗರಸಭೆ ಇ- ಖಾತಾ ಮುಕ್ತ ನಗರವಾಗುವುದರ ಜೊತೆಗೆ ತೆರಿಗೆ ರೂಪದಲ್ಲಿ ಆದಾಯವೂ ಬರಲಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ನೊಂದ ಜನರು ತಮ್ಮ ಆಸ್ತಿಗಳಿಗೆ ನಮೂನೆ 3/ ಎ ಇ- ಖಾತಾ ಮಾಡಿಸಿಕೊಳ್ಳಲು ಒಳ್ಳೆಯ ಅವಕಾಶ ನೀಡಿದೆ. ಈ ಅಭಿಯಾನಕ್ಕೆ ರಾಜ್ಯಾದ್ಯಂತ ಚಾಲನೆ ನೀಡಿದ್ದು, ನಾನೂ ಸಹ ನನ್ನ ಕ್ಷೇತ್ರದಲ್ಲಿ ಸಂತೋಷದಿಂದ ಚಾಲನೆ ನೀಡಿದ್ದೇನೆ. ಒದಗಿಸಬೇಕಾದ ಅಗತ್ಯ ದಾಖಲಾತಿಗಳನ್ನು ಸರಳೀಕರಣ ಮಾಡಿರುವ ಈ ಕಾರ್ಯಕ್ರಮಕ್ಕೆ ಬೆಲೆ ಕಟ್ಟಲಾಗದು ಎಂದರು.

ಇ- ಖಾತಾ ಆಗದ ಎಷ್ಟೋ ಸ್ವತ್ತುಗಳ ಮಾಲೀಕರು ಹಲವು ವರ್ಷಗಳಿಂದ ದೂರುಗಳನ್ನು ಸಲ್ಲಿಸುತ್ತಲೇ ಬಂದಿದ್ದರು. ಆ ದೂರುಗಳಿಂದಾಗಿ ನಾವು ನಿದ್ದೆ ಮಾಡಲಾಗದ ಪರಿಸ್ಥಿತಿ ಇತ್ತು. ಇದೀಗ ಸರ್ಕಾರ ಜನಪರ ತೀರ್ಮಾನ ಕೈಗೊಂಡಿದೆ. ಸಿಕ್ಕಿರುವ ಸದಾವಕಾಶವನ್ನು ಜನರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ನಗರಸಭೆ ಅಧಿಕಾರಿಗಳು ಜನರಿಗೆ ಮಾಹಿತಿ ನೀಡುವ ಜೊತೆಗೆ ಪ್ರತಿ ವಾರ್ಡುಗಳಲ್ಲಿ ಅಭಿಯಾನಗಳನ್ನು ಮಾಡಿ ಜನರಿಗೆ ನಮೂನೆ 3/ ಎ ಇ - ಖಾತಾ ಮಾಡಿಕೊಡಬೇಕು. ಜೊತೆಗೆ 1800 ಆಸ್ತಿಗಳು ಲೋಕಾಯುಕ್ತ ನ್ಯಾಯಾಲಯದಲ್ಲಿದ್ದು. ಈ ವಿಷಯವಾಗಿ ಯೋಜನಾ ನಿರ್ದೇಶಕರೊಂದಿಗೆ ಚರ್ಚೆ ನಡೆಸಿದ್ದೇನೆ. ಅವುಗಳಿಗೂ ನಮೂನೆ 3/ ಎ ಇ- ಖಾತಾ ನೀಡುವಂತೆ ಕ್ರಮ ವಹಿಸಲಾಗುವುದು. ಇದರಿಂದ ಮುಂದಿನ ದಿನಗಳಲ್ಲಿ ಸ್ವತ್ತಿನ ಮಾಲೀಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ 3/ ಎ ಇ- ಖಾತಾ ವಿತರಿಸುವ ನಿರ್ಧಾರ ಕೈಗೊಂಡಿರುವುದು ಐತಿಹಾಸಿಕವಾದದ್ದು, ಇಂತಹ ಕಾರ್ಯಕ್ರಮ ದೇಶದ ಬೇರೆ ಯಾವುದೇ ರಾಜ್ಯಗಳಲ್ಲೂ ಇಲ್ಲ. ಆದ್ದರಿಂದ ಮೂರು ತಿಂಗಳೊಳಗೆ ಅಭಿಯಾನವನ್ನು ಯಶಸ್ವಿಗೊಳಿಸಬೇಕು. ಯಾವ ಕಾರಣಕ್ಕೂ ಸರ್ಕಾರ ದಿನಾಂಕವನ್ನು ವಿಸ್ತರಣೆ ಮಾಡುವುದಿಲ್ಲ ಎಂದು ಇಕ್ಬಾಲ್ ಹುಸೇನ್ ಎಚ್ಚರಿಸಿದರು.

ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಮಾತನಾಡಿ, ಸುಮಾರು 8 ಸಾವಿರ ಆಸ್ತಿಗಳ ಮಾಲೀಕರು ನಮೂನೆ 3/ಎ ಅರ್ಜಿ ಸಲ್ಲಿಸಬಹುದೆಂಬ ನಿರೀಕ್ಷೆಯಿದೆ. ಮೇ 10 ರೊಳಗೆ ಎಲ್ಲ ಸ್ವತ್ತಿನ ಮಾಲೀಕರಿಗೂ ಹಕ್ಕು ಸಿಗುವಂತೆ ಸಿಬ್ಬಂದಿ ಕೊರತೆಯ ನಡುವೆಯೂ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ದಾಖಲೆ ಇಲ್ಲದ ಸ್ವತ್ತುಗಳಿಗೆ ನಮೂನೆ 3/ಎ ಖಾತಾ ವಿತರಣೆಯಿಂದ ಸ್ವತ್ತಿನ ಮಾಲೀಕರಿಗೆ ಅನುಕೂಲ ಆಗುವ ಜೊತೆಗೆ ನಗರಸಭೆಗೆ ರಾಜಸ್ವ ಸಹ ಹೆಚ್ಚು ಬರಲಿದೆ ಎಂದು ಹೇಳಿದರು.

ನಗರಸಭೆ ಆಯುಕ್ತ ಡಾ.ಜಯಣ್ಣ ಮಾತನಾಡಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ , ನಗರಸಭೆ ಉಪಾಧ್ಯಕ್ಷೆ ಆಯಿಷಾಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ, ಸದಸ್ಯರಾದ ಬಿ.ಸಿ.ಪಾರ್ವತಮ್ಮ, ಮುತ್ತುರಾಜು, ಸೋಮಶೇಖರ್, ಗಿರಿಜಮ್ಮ, ವಿಜಯಕುಮಾರಿ, ಅಜ್ಮತ್ , ಬೈರೇಗೌಡ, ಸಮದ್, ಗಿರಿಜಮ್ಮ ಅಧಿಕಾರಿಗಳಾದ ರೇಖಾ, ನಿರ್ಮಲಾ, ತಸ್ಮೀಮ್, ನಟರಾಜೇಗೌಡ, ಕಿರಣ್, ವೇದಾವತಿ, ನಾಗರತ್ನ, ಲಕ್ಷ್ಮೀ ಮತ್ತಿತರಿದ್ದರು.

ಕೋಟ್ ...

ನಗರಸಭೆ ವ್ಯಾಪ್ತಿಯಲ್ಲಿ 13 ಸಾವಿರ ನಿವೇಶನ ರಹಿತರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಗಣಿಸಿ ವಾರ್ಡ್ ವಾರು ಸಮಿತಿ ರಚಿಸಿ ಅರ್ಜಿಗಳ ವಿಲೇವಾರಿಗೆ ಕ್ರಮ ವಹಿಸಲಾಗುವುದು. ಇನ್ನೂ 7 ಎಕರೆ ಪ್ರದೇಶದಲ್ಲಿ 884 ಸ್ಲಂ ಬೋರ್ಡ್ ವಸತಿ ಮನೆಗಳನ್ನು ನಿರ್ಮಾಣ ಮಾಡಲಾಗುವುದು.

- ಎಚ್.ಎ.ಇಕ್ಬಾಲ್ ಹುಸೇನ್, ಶಾಸಕರು, ರಾಮನಗರ ಕ್ಷೇತ್ರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಾರಣ ತಾಣಗಳು ಇಂದು ದುಬಾರಿ ಆಗುತ್ತಿವೆ: ಡಾ.ಶ್ರೀಧರ್‌
5 ವರ್ಷದಲ್ಲಿ ರೈಲ್ವೆ ಕೋಚಿಂಗ್‌ ಟರ್ಮಿನಲ್‌ ದ್ವಿಗುಣಕ್ಕೆ ನಿರ್ಧಾರ