ಕನ್ನಡಪ್ರಭ ವಾರ್ತೆ ಕುಂದಾಪುರ
ನಿರಂತರವಾಗಿ ಸಮಾಜಮುಖಿ ಕಾರ್ಯ ಅದರಲ್ಲೂ ಅನಾಥಾಶ್ರಮಕ್ಕೆ ನಿರಂತರ ಸೇವೆ ಪಂಚವರ್ಣದ ಮುಕುಟಕ್ಕೆ ಹಿಡಿದ ಕೈಗನ್ನಡಿ ಎಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಆಡಳಿತ ಟ್ರಸ್ಟಿ ಕೆ.ಅನಂತಪದ್ಮನಾಭ ಐತಾಳ್ ಹೇಳಿದರು.ಅವರು ಇಲ್ಲಿನ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ಆಶ್ರಯದಲ್ಲಿ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಅವರ ಹುಟ್ಟು ಹಬ್ಬದ ಅಂಗವಾಗಿ ಉಡುಪಿಯ ಹೊಸಬದುಕು ಆಶ್ರಮಕ್ಕೆ ದಿನಸಿ ಇನ್ನಿತರ ಪರಿಕರವನ್ನು ಹಸ್ತಾಂತರಿಸಿ ಮಾತನಾಡಿದರು.ಹಿರಿಯ ಜೀವಗಳನ್ನು ಆಶ್ರಮಕ್ಕೆ ಸೇರಿಸುವ ಮನಸ್ಥಿತಿ ತೊಲಗಬೇಕು ನಮ್ಮ ಜೀವದಾತರ ಜೀವ ರಕ್ಷಣೆ ಕೊನೆತನಕ ಇರಬೇಕು. ಆ ಮೂಲಕ ಭಗವಂತನೊಲುಮೆಯ ಕಾರ್ಯ ಮಾಡಬೇಕಿದೆ. ಆಶ್ರಮಗಳು ನಡೆಸುವುದು ಸುಲಭದ ಮಾತಲ್ಲ. ಅಲ್ಲಿನ ಸೇವಾ ಕಾರ್ಯಗಳು ಅತ್ಯಂತ ಕ್ಲಿಷ್ಟಕರವಾದದ್ದು, ಈ ದಿಸೆಯಲ್ಲಿ ಸಮಾಜದ ನೋವು ನಲಿವುಗಳಿಗೆ ಸ್ಪಂದಿಸುವ ಹೊಸಬದುಕು ಆಶ್ರಮ ಹಾಗೂ ಪಂಚವರ್ಣ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದವರು ಕೊಂಡಾಡಿದರು. ಇದೇ ವೇಳೆ ಹೊಸಬದುಕು ಆಶ್ರಮದ ಮುಖ್ಯಸ್ಥ ಹ.ರಾ ವಿನಯಚಂದ್ರ - ರಾಜೇಶ್ವರಿ ಸಾಸ್ತಾನ ಇವರಿಗೆ ದಿನಸಿ ಪರಿಕರಗಳನ್ನು ಹಸ್ತಾಂತರಿಸಿ ಹುಟ್ಟು ಹಬ್ಬ ಆಚರಿಸಿಕೊಂಡ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಇವರಿಗೆ ಶುಭಾಶಯ ಕೋರಲಾಯಿತು.ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಅಧ್ಯಕ್ಷ ಸತೀಶ್ ಹೆಚ್. ಕುಂದರ್, ಕೋಟ ಗ್ರಾಪಂ ಸದಸ್ಯ ಅಜಿತ್ ದೇವಾಡಿಗ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ, ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಮಹಿಳಾ ಮಂಡಲದ ಚಾಲಕಿ ಸುಜಾತ ಬಾಯರಿ ಸ್ವಾಗತಿಸಿ ನಿರೂಪಿಸಿದರು. ಸಂಘದ ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್ ವಂದಿಸಿದರು. ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.