ಡಂಬಳ: ಶರಣೆ ಹೇಮರಡ್ಡಿ ಮಲ್ಲಮ್ಮ ಮಹಾಸಾದ್ವಿಯಾಗಿದ್ದು, ಅವರ ತಾಳ್ಮೆಗುಣಗಳು ಪ್ರತಿಯೊಬ್ಬ ಮಹಿಳೆಯರಿಗೆ ಆದರ್ಶ ಎಂದು ಹರ್ಲಾಪೂರದ ಅಭಿನವ ಕೊಟ್ಟುರೇಶ್ವರ ಮಹಾಸ್ವಾಮಿಗಳು ಹೇಳಿದರು.
ಜಗತ್ತಿನಲ್ಲಿ ದ್ವೇಷದಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ. ಪ್ರೀತಿ ಮನೋಭಾವನೆ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಉತ್ತಮ ಸಾಧನೆ ಮಾಡಲು ಸಾಧ್ಯ. ಆ ನಿಟ್ಟಿನಲ್ಲಿ ಮನುಷ್ಯರಲ್ಲಿ ಮೂರು ಗುಣವುಳ್ಳವರು ಇರುತ್ತಾರೆ. ಸತ್ತು ಸತ್ತವರು, ಇದ್ದು ಸತ್ತವರು, ಸತ್ತು ಇದ್ದವರು ಇರುವ ಸಮಾಜದಲ್ಲಿ ಪ್ರತಿಯೊಬ್ಬರ ಬದುಕು ಸಾತ್ವಿಕ ಸತ್ಯ ನ್ಯಾಯ ನಿಷ್ಠೆ ಕಾಯಕದ ಬದುಕು ನಿರ್ಮಿಸಿಕೊಳ್ಳುವಂತಾಗಲಿ. ಕೌಟುಂಬಿಕ ಜೀವನದಲ್ಲಿ ಅತ್ತೆಯಾದವಳು ಸೊಸೆಯನ್ನು ಮಗಳಂತೆ, ಸೊಸೆ ಅತ್ತೆಯನ್ನು ತಾಯಿಯಾಗಿ ಪ್ರೀತಿ ವಾತ್ಸಲ್ಯದಿಂದ ಇರುತ್ತಾಳೆಯೋ ಆ ಕುಟುಂಬ ಆದರ್ಶ ಮತ್ತು ಸುಂದರ ಕುಟುಂಬಗಳು ಆಗಿರಲು ಸಾಧ್ಯ ಎನ್ನುವದನ್ನು ತೋರಿಸಿಕೊಟ್ಟ ಶಿವ ಶರಣೆ ಹೇಮರೆಡ್ಡಿ ಮಲ್ಲಮ್ಮ ವಿಚಾರಗಳು ಸದಾ ಕಾಲ ಇರುತ್ತವೆ ಎಂದು ಹೇಳಿದರು.
ಜಮಖಂಡಿ ಓಂಕಾರ ಆಶ್ರಮದ ಮಾತೋಶ್ರೀ ಶ್ರೀ ದೇವಿತಾಯಿ ಪ್ರವಚನ ನೀಡಿ ಮಾತನಾಡಿ, ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಹಾಕಿಕೊಟ್ಟ ಸದ್ವಿಚಾರ ಮತ್ತು ಶಿವ ಶರಣರ ವಚನಗಳ ಸಾರ ಜೀವನದಲ್ಲಿ ಅಳವಡಿಸಿಕೊಳ್ಳವುದರ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ನಾವು ನಿವೇಲ್ಲರು ಸಿದ್ಧರಾಗಬೇಕು,ಕಡು ಕಷ್ಟದ ದಿನಗಳ ಮೂಲಕ ಉತ್ತಮ ಸಾಧನೆ ಮಾಡಬಹುದು ಎಂದು ತೋರಿಸಿಕೊಟ್ಟ ಮಲ್ಲಮ್ಮ ಅವರ ಆದರ್ಶಗಳು ಇಂದಿನ ಪೀಳಿಗೆಗೆ ಮಾರ್ಗದರ್ಶನ ಎಂದು ಹೇಳಿದರು.ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಮತ್ತು ಬಸವಣ್ಣ ಅವರ ಭಾವಚಿತ್ರದ ಮೆರವಣಿಗೆಯನ್ನು ಕುಂಭ ಹೊತ್ತ ನೂರಾರು ಮಹಿಳೆಯರು ಮತ್ತು ವಿವಿಧ ವಾಧ್ಯಗಳ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.