ಕನ್ನಡಪ್ರಭ ವಾರ್ತೆ ಯಾದಗಿರಿ
ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ತತ್ವಾದರ್ಶಗಳು ಸರ್ವಕಾಲಿಕ ಶ್ರೇಷ್ಠ ಎಂದು ಡಾ.ಮಹಾದೇವಿ ಮಾಲಕರೆಡ್ಡಿ ಹೇಳಿದರು.ಜಿಲ್ಲೆಯ ವಡಗೇರಾ ತಾಲೂಕಿನ ಕೃಷ್ಣವೇಣಿ ಭೀಮಾ ಸಂಗಮದಲ್ಲಿ ಸಂಗಮೇಶ್ವರ ಜಾತ್ರೆ ನಿಮಿತ್ತ ನಡೆದ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮಳ ಪುರಾಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಲ್ಲಮ್ಮರ ಪುರಾಣ ಕೇಳುವುದರಿಂದ ನಾವುಗಳು ಕೂಡ ಅವರ ತತ್ವಾದರ್ಶ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬಹುದು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಂತ ಮಲ್ಲಿಕಾರ್ಜುನ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಸಾಕ್ಷಾತ ಶಿವನನ್ನೇ ಒಲಿಸಿಕೊಂಡ ಮಹಾನ್ ಶರಣೆ. ಹಲವಾರು ವಚನಗಳ ಮೂಲಕ ಸಮಾಜದಲ್ಲಿನ ಅಂಕು-ಡೊಂಕು ತಿದ್ದಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಪ್ರತಿಯೊಬ್ಬ ಮಹಿಳೆಯರು ಮಲ್ಲಮ್ಮಳಂತೆ ಬದುಕಬೇಕು. ಇತ್ತೀಚಿನ ದಿನಗಳಲ್ಲಿ ಕುಟುಂಬ ಕಲಹಗಳಿಂದ ಮಾನಸಿಕ ನೆಮ್ಮದಿ ಹಾಳಾಗುತ್ತಿದೆ. ಪ್ರತಿಯೊಬ್ಬರು ಒಗ್ಗಟ್ಟಿನಿಂದ ಜೀವನ ಸಾಗಿಸಿದಾಗ ಮಾತ್ರ ನೆಮ್ಮದಿ ಸಾಧ್ಯ ಎಂದರು.ಕರುಣೇಶ್ವರ ಶ್ರೀಗಳು ಕೃಷ್ಣವೇಣಿ ಭೀಮಾ ಸಂಗಮದ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದ್ದಾರೆ. ಭಕ್ತರು ಕೂಡ ಶ್ರೀಗಳೊಂದಿಗೆ ಕೈಜೋಡಿಸಿ ಈ ಪವಿತ್ರ ಐತಿಹಾಸಿಕ ಸ್ಥಳದ ಅಭಿವೃದ್ಧಿಗೆ ಶ್ರಮಿಸುವಂತೆ ಹೇಳಿದರು.
ಕರುಣೇಶ್ವರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಪುರಾಣ ಪ್ರವಚನ ಮಲ್ಲಿಕಾರ್ಜುನ್ ಶಾಸ್ತ್ರಿ ನಡೆಸಿಕೊಟ್ಟರು. ಮಲ್ಲಮ್ಮ ಅವರ ನಾಮಕರಣದ ಕಾರ್ಯಕ್ರಮ ಜರುಗಿತು.ವೀರಭದ್ರೇಶ್ವರ ಸ್ವಾಮಿ ದೇವಸೂಗೂರ, ಭೀಮಾವತಿ ಚನ್ನಾರೆಡ್ಡಿ ತುನ್ನೂರ, ಪಾರ್ವತಿ ಮಲ್ಹಾರ, ವಿದ್ಯಾ ಮೇಟಿ, ಅಂಜನಮ್ಮ ಗುರ್ಜಾಲ, ಬಸವರಾಜೇಶ್ವರಿ ಗೋನಾಲ, ಅನ್ನಪೂರ್ಣಮ್ಮ ಗುತ್ತೇದಾರ, ಮಂಜುಳಾ ಗೋಳಿ, ಮೈತ್ರಿ ಕರೆಕಲ, ಕವಿತಾ ಪಾಟೀಲ್, ಗುರುನಾಥ್ ರೆಡ್ಡಿ ಗೌಡ ಕದ್ರಾಪುರ, ವೆಂಕಟರೆಡ್ಡಿ ಶಿವನೂರ, ಬಸಯ್ಯಸ್ವಾಮಿ ಶಿವಪುರ, ಸಿದ್ದಲಿಂಗಪಗೌಡ ಇತರರಿದ್ದರು. ಮೌನೇಶ್ ನಿರೂಪಿಸಿದರು. ಮಲ್ಲು ಶಿವಪೂರ ವಂದಿಸಿದರು.