ಸಿದ್ದಾಪುರ ಸ್ವಾತಂತ್ರ್ಯ ಯೋಧರ ವೀರಗಾಥೆ ಅನಾವರಣ

KannadaprabhaNewsNetwork |  
Published : Aug 16, 2024, 12:48 AM IST
ಗೋಕರ್ಣದ ಅಶೋಕೆಯಲ್ಲಿ ಗುರುವಾರ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಿದ್ದಾಪುರದ ಸ್ವಾತಂತ್ರ್ಯಯೋಧರ ವೀರಗಾಥೆಗಳ ಅನಾವರಣ ನಡೆಯಿತು. | Kannada Prabha

ಸಾರಾಂಶ

ಗೋಕರ್ಣ ಅಶೋಕೆಯಲ್ಲಿ ನಡೆಯುತ್ತಿರುವ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಅನಾವರಣ ಚಾತುರ್ಮಾಸ್ಯದ 26ನೇ ದಿನವಾದ ಗುರುವಾರ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಿದ್ದಾಪುರದ ಸ್ವಾತಂತ್ರ್ಯಯೋಧರ ವೀರಗಾಥೆಗಳ ಅನಾವರಣ ನಡೆಯಿತು.

ಗೋಕರ್ಣ: ಅಶೋಕೆಯಲ್ಲಿ ನಡೆಯುತ್ತಿರುವ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಅನಾವರಣ ಚಾತುರ್ಮಾಸ್ಯದ 26ನೇ ದಿನವಾದ ಗುರುವಾರ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಿದ್ದಾಪುರದ ಸ್ವಾತಂತ್ರ್ಯಯೋಧರ ವೀರಗಾಥೆಗಳ ಅನಾವರಣ ನಡೆಯಿತು.

ಶ್ರೀಸಂಸ್ಥಾನದವರ ಸಾನ್ನಿಧ್ಯದಲ್ಲಿ ಸ್ವಾತಂತ್ರ್ಯ ಯೋಧ ಸತ್ಯನಾರಾಯಣ ಪರಮೇಶ್ವರ ಹೆಗಡೆ ಅವರ ಪುತ್ರ ಅನಂತ್ ಎಸ್. ಹೆಗಡೆ ಅನಾವರಣ ನೆರವೇರಿಸಿದರು.

ಶ್ರೀಮಠದ ಪರಂಪರೆಯ 34ನೇ ಪೀಠಾಧ್ಯಕ್ಷರಾಗಿದ್ದ ಶ್ರೀ ರಾಮಚಂದ್ರ ಭಾರತೀ ಮಹಾಸ್ವಾಮಿಗಳು ಬ್ರಿಟಿಷರನ್ನು ಭಾರತದಿಂದ ಹೊರಹಾಕಬೇಕು ಎನ್ನುವ ಸದಪೇಕ್ಷೆಯುಳ್ಳವರಾಗಿದ್ದರು. ಶಿರಸಿ, ಸಿದ್ದಾಪುರ, ಸಾಗರ ಹಾಗೂ ಸೊರಬ ಮುಂತಾದ ಭಾಗದ ಶ್ರೀಮಠದ ಶಿಷ್ಯರಲ್ಲಿ ಬಹುತೇಕ ಮಂದಿ ಸತ್ಯಾಗ್ರಹದಲ್ಲಿ ನೇರವಾಗಿ ಭಾಗಿಗಳಾಗಿದ್ದರು. ಅವರು ಬಂಧನದ ಭೀತಿಗೊಳಗಾದಾಗ ಗುರುವರ್ಯರು ಅಲ್ಲಲ್ಲಿ ಆಶ್ರಯ ಕಲ್ಪಿಸಿ, ಊಟೋಪಚಾರ, ಸಕಲ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದರು. ಸತ್ಯಾಗ್ರಹಿಗಳಿಗೆ ಸಮಯೋಚಿತ ಸಲಹೆ- ಸಹಕಾರಗಳನ್ನೂ ನೀಡುತ್ತಿದ್ದರು ಎನ್ನುವ ಅಂಶವನ್ನು ಬಣ್ಣಿಸಲಾಯಿತು.

ಮಠ ನಡೆಸುವುದೇ ಕಷ್ಟ ಎನ್ನುವ ಪರಿಸ್ಥಿತಿಯಲ್ಲಿ ಕೂಡಾ ಗುರುಗಳು ₹1000ಗಳನ್ನು ಸ್ವಾತಂತ್ರ್ಯ ಹೋರಾಟಕ್ಕೆ ದೇಣಿಗೆ ನೀಡಿದ್ದನ್ನು ಸ್ಮರಿಸಲಾಯಿತು.

ರಾಷ್ಟ್ರೀಯತೆಯ ಹೋರಾಟಕ್ಕೆ ದೊಡ್ಡ ಕೊಡುಗೆ ನೀಡಿದ ಸಿದ್ದಾಪುರ ತಾಲೂಕಿನ ಒಟ್ಟು 950 ಮಂದಿ ಸ್ವಾತಂತ್ರ್ಯ ಹೋರಾಟಗಾರರ ಪೈಕಿ 789 ಮಂದಿ ಹವ್ಯಕರು. 171 ಮಂದಿ ಮಹಿಳೆಯರು ಕೂಡಾ ಹೋರಾಟಕ್ಕೆ ಧುಮುಕಿದ್ದರು. ಅಂಕೋಲಾ ಸತ್ಯಾಗ್ರಹ, ಹೊಸತೋಟ ಸತ್ಯಾಗ್ರಹ, ಕರಬಂದಿ ಚಳವಳಿ, ಸಿದ್ದಾಪುರ ಮುರುಘಾಮಠ ಎದುರಿನ ಸತ್ಯಾಗ್ರಹ, ಮಾವಿನಗುಂಡಿ ಸತ್ಯಾಗ್ರಹ ಅಕ್ಕಂಜಿ ಸತ್ಯಾಗ್ರಹ, ಚಲೇಜಾವ್ ಚಳವಳಿ ಹೀಗೆ ಎಲ್ಲದರ ಪಾರುಪತ್ಯ ಹವ್ಯಕರದ್ದೇ ಆಗಿತ್ತು ಎಂಬ ಅಪರೂಪದ ಮಾಹಿತಿಗಳು ಇಂದಿನ ಅನಾವರಣದಲ್ಲಿ ಬಿಂಬಿತವಾದವು.

ಗಾಣಿಗ ಸಮಾಜದಿಂದ ಸುವರ್ಣ ಪಾದುಕಾಪೂಜೆ ನೆರವೇರಿತು. ಶಾಸಕ ದಿನಕರ ಶೆಟ್ಟಿ, ತಾಪಂ ಮಾಜಿ ಸದಸ್ಯ ಮಹೇಶ್ ಶೆಟ್ಟಿ, ಮಾರುತಿ ಕಟ್ಟೆ ರಿಕ್ಷಾ ಚಾಲಕರ ಸಂಘದ ಪ್ರಮುಖರು, ಭದ್ರಕಾಳಿ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸದಸ್ಯರು ಶ್ರೀಗಳಿಂದ ಆಶೀರ್ವಾದ ಪಡೆದರು.

ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಚಾತುರ್ಮಾಸ್ಯ ಸಮಿತಿ ಕಾರ್ಯದರ್ಶಿ ಶ್ರೀಕಾಂತ ಪಂಡಿತ, ಶ್ರೀಕಾರ್ಯದರ್ಶಿ ಜಿ.ಕೆ. ಮಧು, ವ್ಯವಸ್ಥಾಪಕ ಪ್ರಮೋದ್ ಮುಡಾರೆ, ಶ್ರೀಶ ಶಾಸ್ತ್ರಿ, ವಿವಿವಿ ಆಡಳಿತಾಧಿಕಾರಿ ಡಾ. ಪ್ರಸನ್ನ ಕುಮಾರ್ ಟಿ.ಜಿ., ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಜಿ.ವಿ. ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ಬಿಂದು ಅವಧಾನಿ ಕಾರ್ಯಕ್ರಮ ನಿರೂಪಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ