ಸಮರ್ಪಕ ವಿದ್ಯುತ್‌ ಪೂರೈಕೆಗಾಗಿ ಹೆಸ್ಕಾಂ ಕಚೇರಿಗೆ ಚಕ್ಕಡಿ, ಎತ್ತಿನೊಂದಿಗೆ ಮುತ್ತಿಗೆ

KannadaprabhaNewsNetwork |  
Published : Jun 03, 2026, 02:00 AM IST
ಸಮರ್ಪಕ ವಿದ್ಯುತ್‌ ಪೂರೈಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಹುಬ್ಬಳ್ಳಿ ತಾಲೂಕಿನ 10ಕ್ಕೂ ಅಧಿಕ ಗ್ರಾಮಗಳ ರೈತರು ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. | Kannada Prabha

ಸಾರಾಂಶ

ಕೃಷಿ ಪಂಪಸೆಟ್‌ಗಳಿಗೆ ಸರಿಯಾದ ಸಮಯಕ್ಕೆ ಮತ್ತು ಸಮರ್ಪಕವಾಗಿ ವಿದ್ಯುತ್ ಸರಬರಾಜು ಆಗುತ್ತಿಲ್ಲ. ಪ್ರತಿ ದಿನವೂ ಅಘೋಷಿತ ವಿದ್ಯುತ್ ಕಡಿತವಾಗುತ್ತಿದೆ. ನಿರಂತರವಾಗಿ ಕನಿಷ್ಠ 7 ಗಂಟೆ ತ್ರಿಫೇಸ್ ವಿದ್ಯುತ್ ನೀಡುವುದಾಗಿ ಹೇಳುತ್ತಾರೆ. ಆದರೆ, ದಿನಕ್ಕೆ 2-3 ಗಂಟೆ ಮಾತ್ರ ಪೂರೈಕೆಯಾಗುತ್ತಿದೆ.

ಹುಬ್ಬಳ್ಳಿ:

ಸಮರ್ಪಕ ವಿದ್ಯುತ್ ಪೂರೈಕೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಗೆ ಆಗ್ರಹಿಸಿ 10ಕ್ಕೂ ಅಧಿಕ ಹಳ್ಳಿಗಳಿಂದ ನೂರಾರು ರೈತರು ಎತ್ತು-ಚಕ್ಕಡಿ, ಟ್ರ್ಯಾಕ್ಟರ್‌ ಸಮೇತ ಸುಟ್ಟಿರುವ ಟಿಸಿಯೊಂದಿಗೆ ಮಂಗಳವಾರ ನಗರದ ತಬೀಬ್‌ ಲ್ಯಾಂಡ್‌ನಲ್ಲಿರುವ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ತಾಲೂಕಿನ ಹಳೇಹುಬ್ಬಳ್ಳಿ, ಮಾವನೂರ, ಕಟ್ನೂರ, ಗಿರಿಯಾಲ, ಬುಡರಸಿಂಗಿ, ಬೆಳಗಲಿ, ಇನಾಮ್ ವೀರಾಪುರ, ಕರಡಿಕೊಪ್ಪ, ಕುರಡಿಕೇರಿ, ಬಮ್ಮಸಮುದ್ರ ಸೇರಿದಂತೆ 10ಕ್ಕೂ ಹೆಚ್ಚು ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಆಗಮಿಸಿದ ರೈತರು ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಹೆಸ್ಕಾಂ ಎಂಡಿ ಸ್ಥಳಕ್ಕೆ ಆಗಮಿಸುವ ವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟುಹಿಡಿದರು.

ಕೃಷಿ ಪಂಪಸೆಟ್‌ಗಳಿಗೆ ಸರಿಯಾದ ಸಮಯಕ್ಕೆ ಮತ್ತು ಸಮರ್ಪಕವಾಗಿ ವಿದ್ಯುತ್ ಸರಬರಾಜು ಆಗುತ್ತಿಲ್ಲ. ಪ್ರತಿ ದಿನವೂ ಅಘೋಷಿತ ವಿದ್ಯುತ್ ಕಡಿತವಾಗುತ್ತಿದೆ. ನಿರಂತರವಾಗಿ ಕನಿಷ್ಠ 7 ಗಂಟೆ ತ್ರಿಫೇಸ್ ವಿದ್ಯುತ್ ನೀಡುವುದಾಗಿ ಹೇಳುತ್ತಾರೆ. ಆದರೆ, ದಿನಕ್ಕೆ 2-3 ಗಂಟೆ ಮಾತ್ರ ಪೂರೈಕೆಯಾಗುತ್ತಿದೆ. ಬೆಳೆ ನೀರಿಲ್ಲದೆ ಕಣ್ಣೆದುರೆ ಒಣಗುತ್ತಿವೆ. ಇದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆಯ ಹಾದಿ ಹಿಡಿಯುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಮುಖ ಬೇಡಿಕೆ:

ಪಂಪ್‌ಸೆಟ್‌ಗಳಿಗೆ ನಿತ್ಯ ಕನಿಷ್ಠ 14 ಗಂಟೆ ನಿರಂತರ ಹಾಗೂ ಗುಣಮಟ್ಟದ ತ್ರಿಫೇಸ್ ವಿದ್ಯುತ್ ಪೂರೈಸಬೇಕು. ರಾತ್ರಿ ಸಿಂಗಲ್ ಫೇಸ್ ವಿದ್ಯುತ್ ಸರಬರಾಜು ಮಾಡಬೇಕು. ಮುನ್ಸೂಚನೆ ನೀಡದೆ ಅಘೋಷಿತ ವಿದ್ಯುತ್ ಕಡಿತ ನಿಲ್ಲಿಸಬೇಕು. ಸುಟ್ಟು ಹೋದ ಮತ್ತು ಸುಟ್ಟು ಹೋಗುವ ಟ್ರಾನ್ಸಫಾರ್ಮರ್‌ (ಟಿ.ಸಿ) ತ್ವರಿತವಾಗಿ ಬದಲಾಯಿಸಬೇಕು. ಹೊಲದಲ್ಲಿ ಎಲ್‌ಟಿ ಲೈನ್‌ಗಳನ್ನು ದುರಸ್ತಿಗೊಳಿಸಿ ಲೇವೆಲ್ ಮಾಡಬೇಕು. ಟಿಸಿಯಲ್ಲಿ ಹಳೇ ವೈಯರ್ ಮತ್ತು ಹಳೇ ಫ್ಯುಸ್ ತೆಗೆದು ಹೊಸದಾಗಿ ಹಾಕಬೇಕು. ಹೊಲದಲ್ಲಿ ಬಾಗಿದ ಮತ್ತು ದುರಸ್ತಿಯಲ್ಲಿರುವ ಕಂಬಗಳನ್ನು ತೆಗೆದು ಹೊಸದಾಗಿ ಅಳವಡಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಶಿವಾನಂದ ಹೊಸೂರ, ಈರಣ್ಣ ಜಡಿ, ಮುದರಡ್ಡಿ ರಡ್ಡೇರ, ಅಶೋಕ ಹೊಸೂರ, ಸಹದೇವಪ್ಪ ಸುಡಕೇನವರ, ರುದ್ರಯ್ಯ ಕೊರ್ಯಾಣಮಠ, ರಾಜು ಕೋರ್ಯಾಣಮಠ, ಚಿನ್ನಪ್ಪ ಕಾಡಪ್ಪನವರ, ಜಾನಕಪ್ಪ ಬಂಕಾಪುರ, ವೀರಭದ್ರಪ್ಪ ರಾಯನಾಳ, ಉಳವಪ್ಪ ಯಂಟ್ರಾವಿ, ಮಂಜುನಾಥ ಕಟಗಿ, ರಮೇಶ ಕೊಪ್ಪದ, ಹನುಮಂತ ಉಗ್ನಿಕೇರಿ, ನಾಗರಾಜ ಕಮಡೊಳ್ಳಿ, ಸಿದ್ರಾಮಪ್ಪ ಜಿಗಳೂರ, ಸಿದ್ದನಗೌಡ ಪಾಟೀಲ, ರಾಮು ಸೊಳಕೆ, ಕಾಶಿಂಸಾಬ ಲಂಗೋಟಿ, ಅಶೋಕ ಪಾಟೀಲ, ಈರಣ್ಣ ಬೆಂಡಿಗೇರಿ, ಶೇಖಣ್ಣ ರಾಯನಾಳ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.

ಅಧಿಕಾರಿಗಳಿಗೆ ತರಾಟೆ

ಸಂಜೆ ಸ್ಥಳಕ್ಕೆ ಆಗಮಿಸಿದ ಚೀಫ್‌ ಎಂಜಿನಿಯರ್‌ ದೀಪಕ ಕಾಮತ್‌, ಸೂಪರಿಟೆಂಡೆಂಟ್‌ ಎಂಜಿನಿಯರ್‌ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಎಇಇ ಕಿರಣಕುಮಾರ್‌ ಹಾಗೂ ಇತರ ಅಧಿಕಾರಿಗಳನ್ನು ರೈತರು ತರಾಟೆಗೆ ತೆಗೆದುಕೊಂಡರು. ಬಳಿಕ ಅಧಿಕಾರಿಗಳು ಒಂದು ವಾರದೊಳಗೆ ಎಲ್ಲ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆಯಿಂದ ಹಿಂದೆ ಸರಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಈ ಸಲವಾದರೂ ಹಾವೇರಿ ಜಿಲ್ಲೆಗೆ ಸಿಗುತ್ತಾ ಮಂತ್ರಿ ಸ್ಥಾನ?
ಬಳ್ಳಾರಿಯಲ್ಲಿ ಗುಡುಗು-ಸಿಡಿಲು ಸಮೇತ ಮಳೆನೂರಕ್ಕೂ ಅಧಿಕ ಮರಗಳು ಧರೆಗೆ