ಆರೋಗ್ಯ ಸೇವೆ । ರಾಜ್ಯ ವಕ್ಫ್ ಬೋರ್ಡ್ನಿಂದ ನೀಡಿಕೆ । ₹40 ಲಕ್ಷ ಮೌಲ್ಯದ ವಾಹನದಲ್ಲಿ ಅತ್ಯಾಧುನಿಕ ಸೌಲಭ್ಯ
ರಾಜ್ಯ ವಕ್ಫ್ ಬೋರ್ಡ್ನಿಂದ (ಮಂಡಳಿ) ಹರಿಹರದ ಅಂಜುಮನ್ ಕಮಿಟಿಗೆ ಸಾರ್ವಜನಿಕರ ತುರ್ತು ಚಿಕಿತ್ಸೆಯ ಆರೋಗ್ಯ ಸೇವೆಗೆ ರಾಜ್ಯ ಸರ್ಕಾರವು ಅತ್ಯಾಧುನಿಕ ಹೈಟೆಕ್ ಆ್ಯಂಬುಲೆನ್ಸ್ ವಾಹನವನ್ನು ನೀಡಿದೆ ಎಂದು ಅಂಜುಮನ್ ಕಮಿಟಿ ಅಧ್ಯಕ್ಷ ಏಜಾಜ್ ಅಹಮದ್ ಹೇಳಿದರು.
ನಗರದ ಅಂಜುಮನ್ ಕಮಿಟಿಯ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಸುಮಾರು ೪೦ ಲಕ್ಷ ರು. ಮೌಲ್ಯದ ಅತ್ಯಾಧುನಿಕ ಐಸಿಯು ಘಟಕ, ಆಮ್ಲಜನಕ ಘಟಕ, ವೆಂಟಿಲೇಟರ್ ಮತ್ತು ಇತರೆ ಸೌಲಭ್ಯ ಒಳಗೊಂಡಿರುವ ಆ್ಯಂಬುಲೆನ್ಸ್ ವಾಹನವನ್ನು ರಾಜ್ಯ ವಸತಿ ಮತ್ತು ವಕ್ಫ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಬಿ.ಝಡ್.ಜಮೀರ್ ಅಹ್ಮದ್ ಖಾನ್ ಅವರು ವಿಧಾನ ಪರಿಷತ್ ಸದಸ್ಯರಾದ ಜಬ್ಬರ್ ಖಾನ್ ಮತ್ತು ಬಲ್ಕಿಶ್ ಬಾನು ಅವರ ಸಮ್ಮುಖದಲ್ಲಿ ಕಮಿಟಿಗೆ ವಿತರಣೆ ಮಾಡಿದರು ಎಂದರು.ಕಾರ್ಯದರ್ಶಿ ಆಸೀಫ್ ಸೈಯ್ಯದ್ ಸಾಬ್ ಜುನದಿ ಮಾತನಾಡಿ, ಸಮಾಜ ಸೇವಕ ಸೈಯದ್ ಸನಾವುಲ್ಲಾ ಮತ್ತು ಅಂಜುಮನ್ ಕಮಿಟಿಯ ಅಧ್ಯಕ್ಷರು ಮತ್ತು ಸದಸ್ಯರ ಕೋರಿಕೆ, ಜಿಲ್ಲಾ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಅನ್ವರ್ ಪಾಷಾ ಮಹಮ್ಮದ್ ಸಿರಾಜ್ ಸಂಸ್ಥೆಗೆ ಆ್ಯಂಬುಲೆನ್ಸ್ ಕೊಡಿಸಲು ಸಹಕಾರ ನೀಡಿದ್ದಾರೆ. ರಾಜ್ಯ ವಕ್ಫ್ ಬೋರ್ಡ್ ರಾಜ್ಯದ ೩೦ ಜಿಲ್ಲೆಗಳಿಗೆ ಈ ರೀತಿಯ ಹೈಟೆಕ್ ಆ್ಯಂಬುಲೆನ್ಸ್ಗಳನ್ನು ವಿತರಣೆ ಮಾಡಿದ್ದು, ವಿಶೇಷ ಕೋಟಾದಡಿ ಹರಿಹರ ನಗರಕ್ಕೆ ಆ್ಯಂಬುಲೆನ್ಸ್ ಮಂಜೂರು ಮಾಡಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ವಾಹನದಲ್ಲಿ ಚಾಲಕ, ನರ್ಸ್ ಹಾಗೂ ತುರ್ತು ಸೇವೆಯ ದೂರವಾಣಿ ಸಂಖ್ಯೆ ಅಳವಡಿಕೆ ಸೇರಿದಂತೆ ಹಲವು ನಿಯಮಗಳನ್ನು ಅಳವಡಿಸುವ ಕುರಿತು ಸಮಿತಿಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಅಂಜುಮನ್ ಕಮಿಟಿಯ ಉಪಾಧ್ಯಕ್ಷರ ಎಂ.ಎ.ಬಿ ಫಾರೂಕ್, ಸದಸ್ಯರಾದ ಆರ್.ಸಿ ಜಾವಿದ್, ಅಪ್ರೋಸ್ ಖಾನ್, ಸೈಯದ್ ಬಶೀರ್ ದೋಸ್ತಾನ, ರೋಷನ್, ನೂರುಲ್ಲಾ, ಮುಜಾಮಿಲ್ (ಬಿಲ್ಲು),ಸಾದಿಕ್ ವುಲ್ಲಾ, ಇತರರು ಇದ್ದರು.