ಕಥಾ ಕಮ್ಮಟ ಸಮಾರೋಪ ಸಮಾರಂಭ
ಹಾಸನ: ಜಿಲ್ಲೆಯಲ್ಲಷ್ಟೇ ಅಲ್ಲ, ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಕೆಲಸ ಮಾಡುತ್ತಿರುವ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಎಲೆಮರೆ ಕಾಯಿಯಂತಹ ಸಾಧಕರನ್ನು, ಉದಯೋನ್ಮುಖ ಬರಹಗಾರರನ್ನು, ಸಾಹಿತ್ಯಿಕ ಹಾಗೂ ಸಾಮಾಜಿಕ ಮುನ್ನೆಲೆಗೆ ತರಲು ಹುಟ್ಟಿದೆ ಎಂದು ಹಾಸನ ತಾಲೂಕು ಅಧ್ಯಕ್ಷೆ ಕೆ.ಸಿ.ಗೀತಾ ಅಭಿಪ್ರಾಯಪಟ್ಟರು.ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಹಾಸನ ತಾಲೂಕು ಘಟಕದ ವತಿಯಿಂದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಜಂಟಿಯಾಗಿ ಸ್ಕೌಟ್ಸ್, ಗೈಡ್ಸ್ ಸಮುದಾಯ ಭವನದಲ್ಲಿ ಮಕ್ಕಳಿಗಾಗಿ ಏರ್ಪಡಿಸಿದ್ದ ಉಚಿತ ಕಥಾ ಕಮ್ಮಟದ ಸಮಾರೋಪ ಮಾತನಾಡಿದರು.
‘ನಮ್ಮ ವೇದಿಕೆಯಿಂದ ಕಳೆದ ವರ್ಷದ ಬೇಸಿಗೆಯಲ್ಲೂ ಇದೇ ರೀತಿಯ ಕಥಾ ಕಮ್ಮಟವನ್ನು ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್.ಉಪ್ಪಾರ್ ಅವರ ಮಾರ್ಗದರ್ಶನದಲ್ಲಿ ಹಮ್ಮಿಕೊಂಡಿದ್ದೆವು. ಕಳೆದ ಕಮ್ಮಟದಲ್ಲಿ ಅತ್ಯುತ್ತಮ ಹದಿನೈದು ಕಥೆಗಳನ್ನು ಆಯ್ಕೆ ಮಾಡಿಕೊಂಡಿದ್ದೆವು, ಅದೇ ರೀತಿ ಈ ಸಲದ ಕಮ್ಮಟದಲ್ಲಿನ ಉತ್ತಮ ಹದಿನೈದು ಕಥೆಗಳನ್ನು ಆಯ್ಕೆ ಮಾಡಿ ಒಟ್ಟು ಮೂವತ್ತು ಮಕ್ಕಳ ಕಥೆಗಳ ಕಥಾ ಸಂಕಲನವನ್ನು ಸದ್ಯದಲ್ಲೇ ಹೊರತರಲಿದ್ದೇವೆ’ ಎಂದು ಹೇಳಿದರು.ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಮುಖ್ಯ ಆಯುಕ್ತ ಡಾ ವೈ.ಎಸ್.ವೀರಭದ್ರಪ್ಪ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್.ಉಪ್ಪಾರ್, ಕೇಂದ್ರ ಸಮಿತಿಯ ಜಂಟಿ ಕಾರ್ಯದರ್ಶಿ ನಾಗರಾಜ್ ದೊಡ್ಡಮನಿ, ಜಿಲ್ಲಾ ಮುಖ್ಯ ಆಯುಕ್ತ ಡಾ.ವೈ.ಎಸ್.ವೀರಭದ್ರಪ್ಪ, ಕೋಶಾಧ್ಯಕ್ಷ ಎಚ್.ಎಸ್.ಬಸವರಾಜ್, ತಾಲೂಕು ಅಧ್ಯಕ್ಷೆ ಕೆ.ಸಿ.ಗೀತಾ, ಮಹಿಳಾ ಕಾರ್ಯದರ್ಶಿ ಪದ್ಮಾವತಿ ವೆಂಕಟೇಶ್, ಸಮಾಜ ಸೇವಕಿ ಭಾನುಮತಿ, ಕವಯಿತ್ರಿ ಗಿರಿಜಾ ನಿರ್ವಾಣಿ, ಪೋಷಕ ರಾಮಭದ್ರಯ್ಯ, ಎಎಸ್ಒಸಿ ಪ್ರಿಯಾಂಕ ಎಚ್.ಎಂ. ಹಾಜರಿದ್ದರು.
ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಹಾಸನ ತಾಲೂಕು ಘಟಕ ಹಾಸನದಲ್ಲಿ ಮಕ್ಕಳಿಗೆ ಕಥಾ ಕಮ್ಮಟ ಸಮಾರೋಪ ಕಾರ್ಯಕ್ರಮ ನಡೆಯಿತು.