ಹೈಕಮಾಂಡ್‌ನಿಂದ ಡಿಕೆಶಿಗೆ ಬುಲಾವ್: ಇಕ್ಬಾಲ್ ಹುಸೇನ್

KannadaprabhaNewsNetwork |  
Published : Feb 22, 2026, 01:15 AM IST
21ಕೆಆರ್ ಎಂಎನ್ 1.ಜೆಪಿಜಿರಾಮನಗರದ ಶಾಸಕರ ಕಚೇರಿ ಮುಂಭಾಗದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್  ರವರು ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಿದರು. | Kannada Prabha

ಸಾರಾಂಶ

ಡಿ.ಕೆ.ಶಿವಕುಮಾರ್ ಅವರಿಗೆ ಬುಲಾವ್ ಬಂದಿದ್ದು, ಫೆ.22 ಅಥವಾ 26ರಂದು ಅವರು ದೆಹಲಿಗೆ ತೆರಳಿದ ಬಳಿಕ ಸಿಹಿ ಸುದ್ಧಿ ಸಿಗುವ ವಿಶ್ವಾಸವಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಪ್ರತಿಕ್ರಿಯಿಸಿದರು

ರಾಮನಗರ: ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಚರ್ಚಿಸಲು ಪಕ್ಷದ ವರಿಷ್ಠರಿಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಬುಲಾವ್ ಬಂದಿದ್ದು, ಫೆ.22 ಅಥವಾ 26ರಂದು ಅವರು ದೆಹಲಿಗೆ ತೆರಳಿದ ಬಳಿಕ ಸಿಹಿ ಸುದ್ಧಿ ಸಿಗುವ ವಿಶ್ವಾಸವಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಪ್ರತಿಕ್ರಿಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೆ.22 ಅಥವಾ 26 ಈ ಎರಡಲ್ಲಿ ಒಂದು ದಿನಾಂಕದಂದು ಡಿ.ಕೆ.ಶಿವಕುಮಾರ್ ಅವರಿಗೆ ಒಳ್ಳೆಯದಾಗಲಿದೆ. ಆನಂತರ ಮುಖ್ಯಮಂತ್ರಿ ಬದಲಾವಣೆಯ ಮೂರನೇ ಡೇಟ್ ಹೇಳುತ್ತೇನೆ ಎಂದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಒಳ್ಳೆಯ ಆಡಳಿತಗಾರರು. ಅಹಿಂದ ವರ್ಗದ ಬಗ್ಗೆ ಸದಾ ಚಿಂತನೆ ಮಾಡುವವರು.

ರಾಜ್ಯದಲ್ಲಿ ಅವರಿಗೆ ವಿಶೇಷ ಗೌರವ ಇದೆ. ಅಷ್ಟೇ ಅಲ್ಲ, ಎಲ್ಲ ರಾಜಕೀಯ ಪಕ್ಷಗಳು ಸಿದ್ದರಾಮಯ್ಯವವರ ಬಗ್ಗೆ ಅಪಾರವಾದ ಗೌರವ ಇಟ್ಟುಕೊಂಡಿದ್ದಾರೆ ಎಂದು ಹೇಳಿದರು.

ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆಯಾಗಲಿ ಅಥವಾ ಪಟ್ಟಭದ್ರಹಿತಾಸಕ್ತಿ ಉಳ್ಳವರಾಗಲಿ ಏನೂ ಇಲ್ಲ. ಶಾಸಕರು ಬದಲಾವಣೆ ಬಯಸಿದ್ದು, ಬೇರೆಯವರಿಗೆ ಅವಕಾಶ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಒಳ್ಳೆಯದಾಗಲಿದ್ದು, 2028ರ ಚುನಾವಣೆಗೆ ಮತ್ತಷ್ಟು ಬಲ ಸಿಗುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಡುತ್ತಿದ್ದೇವೆ ಅಷ್ಟೇ. ಇದರಲ್ಲಿ ಗುಂಪುಗಾರಿಕೆ ಏನು ಇಲ್ಲ ಎಂದು ಹೇಳಿದರು.

ಸಚಿವರು ಮತ್ತು ಕಾಂಗ್ರೆಸ್ ಶಾಸಕರ ಹೇಳಿಕೆ ಪ್ರತಿ ಹೇಳಿಕೆಗಳಿಂದ ರಾಜ್ಯ ಸರ್ಕಾರಕ್ಕೆ ಡ್ಯಾಮೇಜ್ ಆಗುತ್ತಿದ್ದು, ಅದನ್ನು ಸರಿಪಡಿಸಬೇಕೆಂಬುದೇ ಎಲ್ಲರ ಬೇಡಿಕೆಯಾಗಿದೆ. ಇದಕ್ಕೆ ಹಿರಿಯ ನಾಯಕರಾದ ಸಚಿವ ಸತೀಶ್ ಜಾರಕಿಹೊಳಿ ಧ್ವನಿಗೂಡಿಸಿದ್ದಾರೆ. ಆದಷ್ಟು ಬೇಗ ಗೊಂದಲ ನಿವಾರಣೆಯಾಗಲಿದೆ ಎಂಬ ವಿಶ್ವಾಸವಿದೆ ಎಂದರು.

ಡಿ.ಕೆ.ಶಿವಕುಮಾರ್ ಅವರಿಗೆ ಅವಕಾಶ ಮಾಡಿಕೊಡಬೇಕು. ಆ ಮೂಲಕ ಪಕ್ಷ ಮತ್ತಷ್ಟು ಸಂಘಟನೆ ಆಗಬೇಕೆಂಬುದು ಎಲ್ಲ ಶಾಸಕರ ಬಯಕೆಯಾಗಿದೆ. ಪಕ್ಷವನ್ನು ಅಧಿಕಾರಕ್ಕೆ ತರಲು ಡಿ.ಕೆ.ಶಿವಕುಮಾರ್ ಸಾಕಷ್ಟು ರೀತಿಯಲ್ಲಿ ಹೋರಾಟ ಮಾಡಿದ್ದಾರೆ. ಉಳಿದ ಎರಡೂವರೆ ವರ್ಷ ಡಿ.ಕೆ.ಶಿವಕುಮಾರ್ ಅವರಿಗೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿರುವ ಎಲ್ಲರಲ್ಲಿ ನಾನೂ ಒಬ್ಬನಾಗಿದ್ದೇನೆ ಎಂದು ಇಕ್ಬಾಲ್ ಹುಸೇನ್ ಪ್ರತಿಕ್ರಿಯಿಸಿದರು.

ಬಾಕ್ಸ್‌.............

1500 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವ ಗುರಿ

ರಾಮನಗರ: ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಸುವರ್ಣ ಮಹೋತ್ಸವದ ಅಂಗವಾಗಿ 200 ಫಲಾನುಭವಿಗಳಿಗೆ ಶಾಸಕ ಇಕ್ಬಾಲ್ ಹುಸೇನ್ ಹಕ್ಕುಪತ್ರ ವಿತರಿಸಿದರು.

ನಗರದ ಶಾಸಕರ ಕಚೇರಿ ಮುಂಭಾಗದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು, ರಾಮನಗರ ನಗರಸಭೆ ವ್ಯಾಪ್ತಿಯ ಗಾಂಧಿನಗರದ 75, ಆದಿಶಕ್ತಿಪುರದ 25, ಇಂದಿರಾನಗರದ 100 ಸೇರಿ ಒಟ್ಟು 200 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗುತ್ತಿದೆ ಎಂದರು.

2016 ರಿಂದ 2026ರವರೆಗೆ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಹಕ್ಕು ಪತ್ರ ವಿತರಣೆ ಮಾಡದ ಕಾರಣ ಬಡವರು ವಂಚಿತರಾಗಿದ್ದರು. ಈ ವಿಚಾರವನ್ನು ಮುಖ್ಯಮಂತ್ರಿ , ಉಪಮುಖ್ಯಮಂತ್ರಿ ಹಾಗೂ ವಸತಿ ಸಚಿವರ ಗಮನಕ್ಕೆ ತಂದು 1500 ಜನರಿಗೆ ಹಕ್ಕುಪತ್ರ ವಿತರಿಸಲು ಉದ್ದೇಶಿಸಲಾಗಿದ್ದು, ಇದರಲ್ಲಿ 2 ಸಾವಿರ ಶುಲ್ಕ ಪಾವತಿಸಿದ 200 ಮಂದಿಗೆ ಹಕ್ಕು ಪತ್ರ ನೀಡಲಾಗುತ್ತಿದೆ ಎಂದು ಹೇಳಿದರು.

ನಗರದಲ್ಲಿ 11 ಕೊಳಚೆ ಪ್ರದೇಶಗಳಿದ್ದು, ಅದರಲ್ಲಿ 6 ಕೊಳಗೇರಿ ಪ್ರದೇಶಗಳನ್ನು ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಗುರುತಿಸಲಾಗಿದ್ದರೆ, ಉಳಿದ 5 ಕೊಳಚೆ ಪ್ರದೇಶಗಳು ಖಾಸಗಿ ಹೆಸರಿನಲ್ಲಿವೆ. ಇದನ್ನು ತಹಸೀಲ್ದಾರ್ , ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದು, ಪಹಣಿ ಬದಲಾವಣೆ ಮಾಡಿ ಹಕ್ಕು ಪತ್ರ ವಿತರಣೆಗೆ ಕ್ರಮ ವಹಿಸಲಾಗಿದೆ ಎಂದು ಇಕ್ಬಾಲ್ ಹುಸೇನ್ ತಿಳಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿಎನ್ಆರ್ ವೆಂಕಟೇಶ್, ನಗರಸಭೆ ಉಪಾಧ್ಯಕ್ಷೆ ಗಿರಿಜಮ್ಮ, ಸದಸ್ಯರಾದ ಆಯಿಷಾ ಬಾನು, ಗೋವಿಂದ ರಾಜು, ಮುಖಂಡರಾದ ರೈಡ್ ನಾಗರಾಜು, ಗುಡ್ಡೆ ವೆಂಕಟೇಶ್ ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿಯ ಉಪ‌ ನಿರ್ದೇಶಕ ಶಶಿಕುಮಾರ್, ನಗರಸಭೆ ಪೌರಾಯುಕ್ತ ಡಾ.ಜಯಣ್ಣ ಮತ್ತಿತರರು ಹಾಜರಿದ್ದರು.

21ಕೆಆರ್ ಎಂಎನ್ 1.ಜೆಪಿಜಿ

ರಾಮನಗರದ ಶಾಸಕರ ಕಚೇರಿ ಮುಂಭಾಗದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೆಜೆಎಂ ಕಳಪೆ ಕಾಮಗಾರಿ ಬಿಲ್ ಪಾವತಿ ಬೇಡ
ದೇಶದಲ್ಲಿ ಎರಡು ಕೋಟಿ ಜನರಿಂದ ಮಾತ್ರ ತೆರಿಗೆ ಪಾವತಿ