ಪಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ಹೈಕೋರ್ಟ್‌ ತಡೆ

KannadaprabhaNewsNetwork | Published : Mar 12, 2025 12:48 AM

ಸಾರಾಂಶ

ಬಿಜೆಪಿ ಅಧ್ಯಕ್ಷರ ವಿರುದ್ಧವೇ ಬಿಜೆಪಿ, ಕಾಂಗ್ರೆಸ್‌ ಸದಸ್ಯರು ಅವಿಶ್ವಾಸ ಮಂಡನೆಗೆ ಮುಂದಾಗಿದ್ದು ಮಂಗಳವಾರ ಬೆಳಗ್ಗೆ ೧೧ಕ್ಕೆ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಬೆಲೇರಿ ಅಧ್ಯಕ್ಷತೆಯಲ್ಲಿ ಸಭೆ ನಿಗದಿಗೊಳಿಸಲಾಗಿತ್ತು. ಅಧ್ಯಕ್ಷ ಅಂದಯ್ಯ ಕಳ್ಳಿಮಠ ಅವರು ಧಾರವಾಡ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ತಡೆಯಾಜ್ಞೆ ತಂದರು.

ಯಲಬುರ್ಗಾ:

ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಂದಯ್ಯ ಕಳ್ಳಿಮಠ ಅವರ ವಿರುದ್ಧ ಮಂಗಳವಾರ ನಡೆಯಬೇಕಿದ್ದ ಅವಿಶ್ವಾಸ ಗೊತ್ತುವಳಿ ಸಭೆಗೆ ಧಾರವಾಡ ಹೈಕೋರ್ಟ್‌ ತಡೆಯಾಜ್ಞೆ ನೀಡಿದ್ದರಿಂದ ಅವಿಶ್ವಾಸ ಮಂಡನೆಗೆ ನಿಗದಿಯಾಗಿದ್ದ ಸಭೆ ರದ್ದಗೊಂಡಿದೆ.

ಅವಿಶ್ವಾಸಕ್ಕೆ ಹಿನ್ನಡೆ:

ಬಿಜೆಪಿ ಅಧ್ಯಕ್ಷರ ವಿರುದ್ಧವೇ ಬಿಜೆಪಿ, ಕಾಂಗ್ರೆಸ್‌ ಸದಸ್ಯರು ಅವಿಶ್ವಾಸ ಮಂಡನೆಗೆ ಮುಂದಾಗಿದ್ದು ಮಂಗಳವಾರ ಬೆಳಗ್ಗೆ ೧೧ಕ್ಕೆ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಬೆಲೇರಿ ಅಧ್ಯಕ್ಷತೆಯಲ್ಲಿ ಸಭೆ ನಿಗದಿಗೊಳಿಸಲಾಗಿತ್ತು. ಅಧ್ಯಕ್ಷ ಅಂದಯ್ಯ ಕಳ್ಳಿಮಠ ಅವರು ಧಾರವಾಡ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ತಡೆಯಾಜ್ಞೆ ತಂದರು. ಹೀಗಾಗಿ ಸಭೆ ಮೊಟಕುಗೊಂಡು ಅವಿಶ್ವಾಸ ಪ್ರಯತ್ನಕ್ಕೆ ಹಿನ್ನನೆಡೆಯಾಯಿತು.

ಕಡಿತಕ್ಕೆ ಸಹಿ ಬೇಡ:

ನ್ಯಾಯಾಲಯದ ತಡೆ ಕೇವಲ ಮಂಗಳವಾರ ನಡೆಯಬೇಕಿದ್ದ ಅವಿಶ್ವಾಸ ಸಭೆಗೆ ಮಾತ್ರ ಎಂದು ತಿಳಿದು ಬಂದಿದೆ. ಮತ್ತೊಮ್ಮೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಸಭೆ ನಡೆಸುವ ಲಕ್ಷಣಗಳು ಕಂಡುಬರುತ್ತಿದ್ದು ತೆರಮರೆಯಲ್ಲಿ ನ್ಯಾಯಾಲಯದ ಮೂಲಕ ಹಾಲಿ ಅಧ್ಯಕ್ಷರು ಹೋರಾಟ ನಡೆಸುತ್ತಿದ್ದಾರೆ. ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದು ಹಾಲಿ ಅಧ್ಯಕ್ಷರು ಕಡತಗಳಿಗೆ ಸಹಿ ಹಾಗೂ ಅಧಿಕಾರ ನಡೆಸಬಾರದು ಎಂಬುದು ಸದಸ್ಯರ ವಾದವಾಗಿದೆ.

ಸಾರ್ವಜನಿಕರ ಬೇಸರ:

ಅಧ್ಯಕ್ಷ ಮತ್ತು ಸದಸ್ಯರ ಮಧ್ಯ ಕುರ್ಚಿಗಾಗಿ ಹಗ್ಗ-ಜಗ್ಗಾಟ ನಡೆಯುತ್ತಿದ್ದು ಪಪಂ ಅಭಿವೃದ್ಧಿಗೆ ಗ್ರಹಣ ಬಡಿದಂತಾಗಿದೆ. ಇಂತಹ ಬೇಸಿಗೆ ಸಂದರ್ಭದಲ್ಲಿ ಸಾರ್ವಜನಿಕರಿಗೆ ಆಡಳಿತ ಮಂಡಳಿ ನಡೆ ತೀವ್ರ ಬೇಸರ ತರಿಸಿವೆ.

ಪಪಂ ಗೋಡೆಗೆ ನೋಟಿಸ್:

ಪಟ್ಟಣ ಪಂಚಾಯಿತಿ ಕಚೇರಿ ಕಟ್ಟಡದ ಮುಂಭಾಗದಲ್ಲಿ ಸಭೆ ರದ್ದಾದ ಕುರಿತು ನೋಟಿಸ್ ಅಂಟಿಸಿ ಹಾಗೇ ಎಲ್ಲ ಸದಸ್ಯರಿಗೆ ನೋಟಿಸ್ ಪ್ರತಿ ತಲುಪಿಸಲಾಗಿದೆ.ಪಟ್ಟಣ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಸದಸ್ಯರು ಅವಿಶ್ವಾಸ ನಿರ್ಣಯ ಕೈಗೊಳ್ಳಲು ಸಭೆ ನಡೆಯಬೇಕಿತ್ತು. ನ್ಯಾಯಾಲಯ ಸಭೆ ನಡೆಸದಂತೆ ತಡೆಯಾಜ್ಞೆ ನೀಡಿದ್ದರಿಂದ, ಈ ಸಭೆಯನ್ನು ಕಾನೂನು ನಿಯಮದಂತೆ ರದ್ದುಪಡಿಸಲಾಗಿದೆ ಎಂದು ಮುಖ್ಯಾಧಿಕಾರಿ ನಾಗೇಶ ಹೇಳಿದರು.

Share this article