ಕನ್ನಡಪ್ರಭ ವಾರ್ತೆ ಕಲಬುರಗಿ
ಈ ಕುರಿತು ಶುಕ್ರವಾರ ಆದೇಶ ಹೊರಬಿದ್ದು, ಲಾಡ್ಲೆ ಮಶಾಕ್ ದರ್ಗಾದಲ್ಲಿ ಮಹಾಶಿವರಾತ್ರಿಯ ದಿನವಾದ ಶುಕ್ರವಾರದಂದು ಮಧ್ಯಾಹ್ನದ ನಂತರ ಪೂಜೆಗೆ 15ಜನ ಹಿಂದೂಗಳಿಗೆ ಅವಕಾಶ ಕೊಟ್ಟಿದೆ. ಪೂಜೆ ಸಲ್ಲಿಸುವವರ 15 ಜನರ ಪಟ್ಟಿಯನ್ನು ಸಲ್ಲಿಸುವಂತೆ ನ್ಯಾಯಾಲಯವು ಸೂಚಿಸಿದೆ. ಇಲ್ಲದಿದ್ದರೆ ಅನುಮತಿ ನೀಡಲಾಗುವುದಿಲ್ಲ ಎಂದು ಹೇಳಿದೆ.
ಮುಸ್ಲಿಂ ಸಮುದಾಯದವರೂ ಸಹ ಮಹಾಶಿವರಾತ್ರಿಯ ದಿನದಂದು ಶುಕ್ರವಾರ ಇರುವುದರಿಂದ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಲು ಹದಿನೈದು ಜನರಿಗೆ ಮಾತ್ರ ಉಚ್ಛ ನ್ಯಾಯಾಲಯವು ಅವಕಾಶ ಕೊಟ್ಟಿದೆ.ಬಿಗಿ ಬಂದೋಬಸ್ತ್ಗೆ ಜಿಲ್ಲಾಡಳಿತಕ್ಕೆ ಸೂಚನೆ: ಕಳೆದ ಬಾರಿಯೂ ಸಹ ಇದೇ ರೀತಿಯಲ್ಲಿ ಉಚ್ಛ ನ್ಯಾಯಾಲಯವು ಅನುಮತಿ ಕೊಟ್ಟಿತ್ತು. ಆದಾಗ್ಯೂ, ಪೂಜೆಯ ನಂತರದಲ್ಲಿ ಹಿಂಸಾತ್ಮಕ ಘಟನೆಗಳು ಸಂಭವಿಸಿದ್ದವು. ಕೇಂದ್ರ ಸಚಿವ ಭಗವಂತ್ ಖೂಬಾ, ಶಾಸಕರಾಗಿದ್ದ ಬಸವರಾಜ ಮತ್ತಿಮಡು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಾರುಗಳ ಮೇಲೆ ಕಲ್ಲು ತೂರಾಟ ಮಾಡಿದ್ದರು. ಈ ಬಾರಿ ಹಿಂದಿನ ಹಿಂಸಾತ್ಮಕ ಘಟನೆಗಳು ಸಂಭವಿಸದಂತೆ ಸೂಕ್ತ ಬಂದೋಬಸ್ತ್ ಕಲ್ಪಿಸಬೇಕು ಎಂದು ನ್ಯಾಯಾಲಯವು ಜಿಲ್ಲಾಡಳಿತಕ್ಕೆ ಸೂಚಿಸಿದೆ.
ಇಲ್ಲಿನ ಉಚ್ಛ ನ್ಯಾಯಾಲಯಕ್ಕೆ ರಾಘವಚೈತನ್ಯ ಮಂದಿರದ ಜೀರ್ಣೋದ್ಧಾರ ಸಮಿತಿಯು ಸಹ ಅರ್ಜಿಯನ್ನು ಸಲ್ಲಿಸಿ, ಮಹಾಶಿವರಾತ್ರಿಯಂದು ಲಾಡ್ಲೆ ಮಶಾಕ್ ದರ್ಗಾ ಆವರಣದಲ್ಲಿರುವ ರಾಘವಚೈತನ್ಯರ ಶಿವಲಿಂಗಕ್ಕೆ ಸುಮಾರು 100 ಜನ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅನುಮತಿ ನೀಡುವಂತೆ ಕೋರಿತ್ತು. ಸಮಿತಿಯಲ್ಲಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಅವರ ಪುತ್ರ ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ್ ಗುತ್ತೇದಾರ್, ಸಮಿತಿ ಅಧ್ಯಕ್ಷ ನ್ಯಾಯವಾದಿ ಎಸ್.ಎ. ಪಾಟೀಲ್ ಮುಂತಾದವರು ಅರ್ಜಿ ಸಲ್ಲಿಸಿದ್ದರು.
ಅದೇ ರೀತಿ ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಅವರು ಸಹ ಪ್ರತ್ಯೇಕ ಅರ್ಜಿ ಸಲ್ಲಿಸಿ, ಮಹಾಶಿವರಾತ್ರಿಯಂದು ರಾಘವಚೈತನ್ಯರ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು 500 ಜನ ಹಿಂದೂಗಳಿಗೆ ಅನುಮತಿ ಕೊಡಲು ಕೋರಿದ್ದರು. ಹಿಂದೂಗಳ ಪರವಾಗಿ ನ್ಯಾಯವಾದಿ ಜಯನಂದನ್ ಸ್ವಾಮಿ ಅವರು ವಾದ ಮಂಡಿಸಿದರು.
ಈಗಾಗಲೇ ರಾಘವಚೈತನ್ಯರ ರಥಯಾತ್ರೆಯು ಆಳಂದ ತಾಲೂಕಿನಲ್ಲಿ ಸಂಚರಿಸಿದ್ದು, ಈಗ ಪೂಜೆಯ ಅಂತಿಮ ಘಟಕ್ಕೆ ಬಂದು ನಿಂತಿದೆ. ರಾಘವ ಚೈತನ್ಯರ ಕೃಪೆಯಿಂದ ಯಾವುದೇ ರೀತಿಯಲ್ಲಿ ಗಲಭೆ, ಅಹಿತಕರ ಘಟನೆಗಳು ಸಂಭವಿಸುವುದಿಲ್ಲ ಎಂದು ಬಿಜೆಪಿಯ ಮುಖಂಡ ಹಾಗೂ ಪ್ರಖರ ಹಿಂದುತ್ವವಾದಿ ಹರ್ಷಾನಂದ ಗುತ್ತೇದಾರ್ ಅವರು ಹೇಳಿದ್ದಾರೆ.
ಕಲಬುರಗಿಯಲ್ಲಿ 25 ಯುವಕರಿಗೆ ಶಿವಮಾಲೆ ದೀಕ್ಷೆ: ಆಳಂದದಲ್ಲಿ ರಾಘವ ಚೈತನ್ಯ ಶಿವಲಿಂಗಕ್ಕೆ ಶಿವರಾತ್ರಿ ದಿನ ಪೂಜೆಗೆ ಅವಕಾಶ ದೊರಕಿದ ಬೆನ್ನಲ್ಲೇ ಸಿದಧತೆಗಳು ಸಾಗಿವೆ. ರಾಮ ಸೇನೆಯ ಆಂದೋಲಾ ಸಿದ್ಧಲಿಂಗ ಶ್ರೀಗಳ ನೇತೃತ್ವದಲ್ಲಿ ಕಲಬುರಗಿ ರಾಮ ಮಂದಿರದಲ್ಲಿ ಹೋಮಾದಿಗಳ ಸಮೇತ ಶಿವಭಕ್ತ 25 ಯುವಕರಿಗೆ ಶಿವಮಾಲೆ ಧಾರಣೆ ದೀಕ್ಷೆ ನೀಡಲಾಯ್ತು. ಈಗಾಗಲೇ ಆಳಂದದಲ್ಲಿ 10 ಯುವಕರು ಶಿವಮಾಲೆ ದೀಕ್ಷೆ ತೊಟ್ಟಿದ್ದಾರೆ. ಕಲಬುರಗಿ- ಆಳಂದ ಸೇರಿದಂತೆ 35 ಶಿವಮಾಲೆ ದೀಕ್ಷಾಧಾರಿಗಳು ರಾಘವ ಚೈತನ್ಯ ಆರಾಧಕರಾಗಿ ಆಳಂದದ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆಳಂದದಲ್ಲಿ ಶಿವರಾತ್ರಿ ದಿನ ಮಧ್ಯಾಹ್ನ ಪೂಜೆಗೂ ಮೊದಲು ಶಿವ ಭಜನೆ, ಸಾರ್ವಜನಿಕ ಬಹಿರಂಗ ಸಭೆ ಇರಲಿದೆ.