ಪ್ರವಾಸಿಗರ ಹತ್ಯೆ ಖಂಡಿಸಿ ನರಗುಂದದಲ್ಲಿ ಹೆದ್ದಾರಿ ತಡೆ

KannadaprabhaNewsNetwork | Published : Apr 24, 2025 11:46 PM

ಸಾರಾಂಶ

ಜಮ್ಮು -ಕಾಶ್ಮೀರದ ಶ್ರೀನಗರದ ಪಹಲ್ಗಾಮ್‌ದಲ್ಲಿ ಉಗ್ರರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ಮಾಡಿ 28 ಜನ ಪ್ರವಾಸಿಗರನ್ನು ಕೊಂದದ್ದು ಖಂಡನೀಯವೆಂದು ನರಗುಂದ ಬಿಜೆಪಿ ಮಂಡಲದ ಅಧ್ಯಕ್ಷ ನಾಗನಗೌಡ ತಿಮ್ಮನಗೌಡ್ರ ಹೇಳಿದರು.

ನರಗುಂದ: ಜಮ್ಮು -ಕಾಶ್ಮೀರದ ಶ್ರೀನಗರದ ಪಹಲ್ಗಾಮ್‌ದಲ್ಲಿ ಉಗ್ರರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ಮಾಡಿ 28 ಜನ ಪ್ರವಾಸಿಗರನ್ನು ಕೊಂದದ್ದು ಖಂಡನೀಯವೆಂದು ನರಗುಂದ ಬಿಜೆಪಿ ಮಂಡಲದ ಅಧ್ಯಕ್ಷ ನಾಗನಗೌಡ ತಿಮ್ಮನಗೌಡ್ರ ಹೇಳಿದರು. ಅವರು ಗುರುವಾರ ನರಗುಂದ ಹಾಗೂ ಹೊಳೆಆಲೂರು ಬಿಜೆಪಿ ಮಂಡಲದ ಆಶ್ರಯದಲ್ಲಿ ಜಮ್ಮು ಕಾಶ್ಮೀರದಲ್ಲಿ ಉಗ್ರರು ಹಿಂದುಗಳು ಮೇಲಿನ ದಾಳಿ ಖಂಡಿಸಿ ಪುರಸಭೆಯಿಂದ ಶಾಂತಿಯುತ ಪ್ರತಿಭಟನೆ ನಡೆಸಿ ಆನಂತರ ಹುಬ್ಬಳ್ಳಿ -ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಶಿವಾಜಿ ವೃತ್ತದಲ್ಲಿ 1 ಗಂಟೆ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಿದರು.

ಉಗ್ರರು ಧರ್ಮದ ಆಧಾರದ ಮೇಲೆ ಹಿಂದುಗಳ ಬಟ್ಟೆ ಬಿಚ್ಚಿಸಿ ಹಿಂದು ಎಂದು ತಿಳಿದುಕೊಂಡು ಗುಂಡಿನ ದಾಳಿ ಮಾಡಿ 28 ಜನ ಪ್ರವಾಸಿಗರನ್ನು ಕೊಂದಿದ್ದು, ನಮ್ಮ ಸರ್ಕಾರ ಮತ್ತು ಭಾರತೀಯ ಸೈನಿಕರು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದರು.ಬಿಜೆಪಿ ಯುವ ಮುಖಂಡ ಉಮೇಶಗೌಡ ಪಾಟೀಲ ಮಾತನಾಡಿ, ಧರ್ಮದ ಆಧಾರದ ಮೇಲೆ ಉಗ್ರರು ಹಿಂದುಗಳನ್ನು ಗುರಿಯಾಗಿಸಿಕೊಂಡು ಪ್ರವಾಸಿಗರನ್ನು ಕೊಂದದ್ದು ನೋವಿನ ಸಂಗತಿ. ನಮ್ಮ ಪ್ರಧಾನಿಗಳಾದ ನರೇಂದ್ರ ಮೋದಿಯವರು ಈ ಉಗ್ರರನ್ನು ಮತ್ತು ಇವರಿಗೆ ಬೆಂಬಲ ನೀಡಿದವರಗೆ ತಕ್ಕ ಶಾಸ್ತಿ ಮಾಡುವರು. ನಾವು ಜಾತಿ ಜಾತಿ ಎಂದು ಹೊಡೆದಾಡಿಕೊಂಡರೆ ಇಂಥಾ ದೇಶ ದ್ರೋಹಿಗಳು ಇದರ ಲಾಭ ಪಡೆದುಕೊಂಡು ದೇಶದಲ್ಲಿ ಅಶಾಂತಿ ಸೃಷ್ಟಿಸುವರು ಎಂದರು.ದೇಶದ ಜನ ಸರ್ಕಾರ ಮತ್ತು ಭಾರತೀಯ ಸೈನಿಕರಗೆ ಕೈ ಜೋಡಿಸುವ ಮೂಲಕ ನಾವು ಏನು ಎನ್ನುವುದನ್ನು ಉಗ್ರರಿಗೆ ತಿಳಿಸಲು ಮುಂದಾಗೋಣ, ಉಗ್ರರು ಜೇನು ಹುಟ್ಟಿಗೆ ಕೈ ಹಾಕಿದ್ದಾರೆ. ಅವರನ್ನು ಪ್ರಧಾನಿಗಳು ಮತ್ತು ಭಾರತೀಯ ಸೈನಿಕರು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಬಿಜೆಪಿ ಮುಖಂಡ ವಾಸು ಜೋಗಣ್ಣವರ ಮಾತನಾಡಿ, ಶಾಂತಿ, ಸಹಬಾಳ್ವೆ ಸಮಾನತೆಯಿಂದ ಬದುಕುವ ನಮ್ಮನ್ನು ಉಗ್ರರು ಕೆಣಕಿದ್ದಾರೆ. ಅವರಿಗೆ ತಕ್ಕ ಶಾಸ್ತಿ ನಮ್ಮ ಸರ್ಕಾರ ಮಾಡಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಅಜ್ಜಪ್ಪ ಹುಡೇದ, ಶಿವಾನಂದ ಮುಕ್ತವಾಡ, ಪ್ರಕಾಶಗೌಡ ತಿರಕನಗೌಡ್ರ, ಬಸು ಪಾಟೀಲ, ಪವಾಡಪ್ಪ ವಡ್ಡಿಗೇರಿ, ನಿಂಗಣ್ಣ ಗಾಡಿ, ಚಂದ್ರಶೇಖರ ದಂಡಿನ, ಬಾಬುಗೌಡ ತಿಮ್ಮನಗೌಡ್ರ, ಡಾ.ಸಿ.ಕೆ. ರಾಚನಗೌಡ್ರ, ಮಹೇಶ್ವರಯ್ಯ ಸುರೇಬಾನ, ಹನಮಂತ ಕಾಡಪ್ಪನವರ, ಈರಪ್ಪ ತಾಳಿ, ಶಂಕರ ಪಾಲ್ಟಣಕರ, ಶಿವಾನಂದ ಹೊಂಗಲ, ಅನಿಲ ಧರಿಯಣ್ಣವರ, ಗೌಸ ತಾಲೀಮನವರ, ಸಿದ್ದು ಹೂಗಾರ, ವಿಠಲ್ ಹವಾಲ್ದಾರ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Share this article