ಹಿಂದೂ ಧರ್ಮ ಸಂಪದ್ಭರಿತ ಧಾರ್ಮಿಕ ವಿಧಿ-ವಿಧಾನ ಹೊಂದಿದೆ

KannadaprabhaNewsNetwork | Published : May 30, 2024 12:45 AM

ಮುದಗಲ್ ಸಮೀಪದ ಸುಕ್ಷೇತ್ರ ಅಂಕಲಿಮಠದಲ್ಲಿ ಶ್ರೀ ಸದ್ಗುರು ನಿರುಪಾಧೀಶ್ವರರ ಜಾತ್ರೆ ಅಂಗವಾಗಿ ಹಮ್ಮಿಕೊಂಡ ವಟುಗಳಿಗೆ ಅಯ್ಯಾಚಾರ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮಕ್ಕೆ ಆಳಂದ-ನಂದವಾಡಗಿ ಮಹಾಂತಲಿಂಗ ಶಿವಾಚಾರ್ಯರು ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಮುದಗಲ್

ಹಿಂದೂ ಧರ್ಮ ಒಂದು ವಿಶಿಷ್ಟ, ಸಂಪದ್ಭರಿತವಾದ ಧಾರ್ಮಿಕ ವಿಧಿ ವಿಧಾನ ಹೊಂದಿರುವಂತಹದು. ಮಹಿಳೆಯರಿಗೆ ಉಡಿ ತುಂಬುವದು, ವಟುಗಳಿಗೆ ಅಯ್ಯಾಚಾರ ಮಾಡುವದು ಧಾರ್ಮಿಕವಾಗಿ ಒಂದು ವಿಶೇಷವಾದ ಮಹತ್ವ ಪಡೆದಿದೆ. ಅದು ಹಿಂದೂ ಧರ್ಮದ ಶ್ರೇಷ್ಠ ಸಂಸ್ಕೃತಿಯಾಗಿದೆ ಎಂದು ಆಳಂದ-ನಂದವಾಡಗಿ ಮಹಾಂತಲಿಂಗ ಶಿವಾಚಾರ್ಯರು ಬಣ್ಣಿಸಿದರು.

ಸಮೀಪದ ಸುಕ್ಷೇತ್ರ ಅಂಕಲಿಮಠದಲ್ಲಿ ಶ್ರೀ ಸದ್ಗುರು ನಿರುಪಾಧೀಶ್ವರರ ಜಾತ್ರೆ ಅಂಗವಾಗಿ ಹಮ್ಮಿಕೊಂಡ ವಟುಗಳಿಗೆ ಅಯ್ಯಾಚಾರ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು. ಹಿಂದೂ ಧರ್ಮದಲ್ಲಿ ಅಯ್ಯಾಚಾರದ ಸಮಯದಲ್ಲಿ ವಟುಗಳಿಗೆ, ಮುತ್ತೈದೆಯರಿಗೆ ಉಡಿ ತುಂಬುವದಕ್ಕಾಗಿ ವಿಶೇಷ ಸ್ಥಾನ ಮಾನ ಕಲ್ಪಿಸಿದೆ. ಅದಕ್ಕಾಗಿ ಇಂದು ಅಂಕಲಿಮಠದಲ್ಲಿ ನಿರುಪಾಧೀಶ್ವರರ ಜಾತ್ರೆ ಅಂಗವಾಗಿ ಅಯ್ಯಾಚಾರ ಹಾಗೂ ಉಡಿ ತುಂಬುವ ಕಾರ್ಯಕ್ರಮವನ್ನು ಶ್ರೀ ವೀರಭದ್ರ ಮಹಾಸ್ವಾಮೀಜಿ ನೇತೃತ್ವದಲ್ಲಿ ಹಮ್ಮಿಕೊಂಡಿರುವುದು ಒಂದು ಹೆಮ್ಮೆಯ ಸಂಗತಿಯೇ ಸರಿ. ವಟುಗಳು ಅಯ್ಯಾಚಾರ ಮಾಡಿಕೊಂಡ ನಂತರ ಜೀವನ ಶೈಲಿ ಧಾರ್ಮಿಕವಾಗಿ ವಿಶೇಷವಾಗಿರುತ್ತದೆ. ದಿನಂಪ್ರತಿ ಲಿಂಗ ಪೂಜೆ, ವಿಭೂತಿ ಧಾರಣೆ ಅತ್ಯಂತ ಶ್ರೇಷ್ಠಕರವಾದುದು. ಮುತ್ತೈದೆಯರಿಗೆ ಕುಂಕುಮ, ಬಳೆ ಎಷ್ಟು ಅಂದವೋ ಅದೇ ರೀತಿ ಉಡಿ ತುಂಬುವಾಗ ತಾಯಿ ಸ್ಥಾನ ಮಾನದೊಂದಿಗೆ ತವರು ಮನೆ ಹರಕೆ, ಹಾರೈಕೆಗೆ ಎಲ್ಲಿಲ್ಲದ ಸಂತಸವೋ ಸಂತಸ. ಅದೇ ರೀತಿ ಶ್ರೀ ಮಠದಲ್ಲಿ ಕೂಡ ತಾಯಂದಿರಿಗೆ ಉಡಿ ತುಂಬುವ ಕಾರ್ಯಕ್ರಮದ ಮೂಲಕ ಶ್ರೀಮಠದ ಭಕ್ತರು ಸಂಸಾರದಲ್ಲಿ ಅತ್ಯಂತ ಸುಖಕರವಾಗಿ, ಶಾಂತಿ ಸಮೃದ್ಧಿಯಿಂದ ಇರಲಿ ಎಂದು ಹಾರೈಕೆ ಸಂದೆಶವೇ ಇಂದು ತಾಯಂದಿರಿಗೆ ಉಡಿ ತುಂಬಿ ಶ್ರೀ ಮಠದಿಂದ ಹಾರೈಸಿದರು.

ಸಮಾರಂಭದಲ್ಲಿ ಶ್ರೀಮಠದ ವೀರಭದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ವೇದಿಕೆ ಮೇಲೆ ಫಕೀರೇಶ್ವರ ಸ್ವಾಮೀಜಿ, ತುರವಿ ಹಾಳದ ಅಮರಗುಂಡ ದೇವರು, ಗುರಗುಂಟಾದ ಸಂಸ್ಕೃತಿ ಪಾಠ ಶಾಲೆ ಗಂಗಾಧರ ಶಾಸ್ತ್ರಿ ಸೇರಿ ಇತರರಿದ್ದರು.