ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಪುರಸಭಾ ಮೈದಾನದಲ್ಲಿ ಆರ್ಎಸ್ಎಸ್ ಮತ್ತು ಹಿಂದೂಪರ ಸಂಘಟನೆಗಳು ಒಗ್ಗೂಡಿ ಆಯೋಜಿಸಿದ್ದ ಹಿಂದೂ ಸಮಾಜೋತ್ಸವದಲ್ಲಿ ಮಾತನಾಡಿ, ಭಾರತ ದೇಶದ ಹಿಂದೂ ಸಂಸ್ಕೃತಿಯು ವಿಶ್ವ ಮಾನ್ಯತೆ ಪಡೆದುಕೊಂಡಿದೆ. ಇಡೀ ವಿಶ್ವ ಇಂದು ಹಿಂದೂ ಧರ್ಮದ ಮಹತ್ವ ಮತ್ತು ಅಗತ್ಯತೆ ಪ್ರತಿಪಾದಿಸುತ್ತಿವೆ ಎಂದರು.
ಡಾ.ಹೆಗಡೆವಾರ್ ಅವರು ಈ ಬಲಿಷ್ಠ ಸಂಘಟನೆಯನ್ನು ಕಟ್ಟಲು ಅಪಮಾನ ಮಾಡಿಸಿಕೊಂಡಿದ್ದಾರೆ. ಆದರೂ ಛಲಬಿಡದೆ ಅವರು ಸಂಘವನ್ನು ಕಟ್ಟಿದ ಪರಿಣಾಮ ಇಂದು ದೇಶದಲ್ಲಿ ಹಿಂದೂಗಳು ಬಲಿಷ್ಠರಾಗಿದ್ದಾರೆ. ಹಿಂದುತ್ವವನ್ನು ಅಪಮಾನಿಸುವ ಕೆಲಸವನ್ನು ಹಿಂದೂಗಳೇ ಮಾಡುತ್ತಿರುವುದು ಬೇಸರದ ಸಂಗತಿ ಎಂದು ವಿಷಾದಿಸಿದರು.ವಿಶ್ವಕ್ಕೆ ಹಿಂದುತ್ವದ ಪರಿಚಯಿಸುವ ಕೆಲಸವನ್ನು ಸಂಘವು ಮಾಡುತ್ತಿದೆ. ಹಿಂದುತ್ವ ಹಾಗೂ ಹಿಂದೂವನ್ನು ಬಿಟ್ಟು ಭಾರತವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹಿಂದೂಗಳೆಂದರೆ ಕೇಸರಿ ಧರಿಸಿವರಷ್ಟೆ ಅಲ್ಲ. ಇಲ್ಲಿರುವ ಎಲ್ಲರೂ ಕೂಡಾ ನಮ್ಮವರು. ಆದರೆ, ಆಯಾ ಕಾಲದ ಪರಿಸ್ಥಿತಿಯ ಒತ್ತಡಗಳಿಗೆ ಮಣಿದು ಮತಾಂತರಗೊಂಡವರು ನಮ್ಮ ಧರ್ಮವನ್ನು ಅಭದ್ರಗೊಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ತೆಂಡೇಕೆರೆ ಬಾಳೆಹೊನ್ನೂರು ಮಠದ ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಬೆಡದಹಳ್ಳಿಯ ಪಂಚಭೂತೇಶ್ವರ ಮಠದ ರುದ್ರಮುನಿ ಸ್ವಾಮೀಜಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ಮಾಡಿದರು.
ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ಹಿರಿಯ ಆರ್ಎಸ್ಎಸ್ ಕಾರ್ಯಕರ್ತ ಬಿ.ನಂಜಪ್ಪ ಹಾಗೂ ಕೆ.ಆರ್.ಪೇಟೆ ಆರ್ಎಸ್ಎಸ್ ಕಾರ್ಯವಾಹಕ ರವಿ, ಸಂಚಾಲಕ ಕೆ.ಕಾಳೇಗೌಡ ಸೇರಿದಂತೆ ಹಲವು ಗಣ್ಯರು ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಿಂದೂ ಸಮಾಜೋತ್ಸವದ ಶೋಭಾಯಾತ್ರೆ ನಡೆಯಿತು. ಪಟ್ಟಣದ ನಾಗಮಂಗಲ ರಸ್ತೆಯ ಶ್ರೀಪ್ರಸನ್ನ ಆಂಜನೇಯ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಆರಂಭಗೊಂಡ ಶೋಭಾಯಾತ್ರೆ ಮುಖ್ಯರಸ್ತೆ, ಎಂ.ಕೆ.ಬೊಮ್ಮೇಗೌಡ ವೃತ್ತ, ಎಪಿಎಂಸಿ ಮುಂಭಾಗದಿಂದ ಕಾರ್ಯಕ್ರಮವು ನಡೆಯುವ ಸ್ಥಳ ತಲುಪಿತು.
ಹಳ್ಳಿಕಾರ್ ಎತ್ತುಗಳ ಜೊತೆಯಲ್ಲಿ ಮಾಜಿ ಸಚಿವ ಕೆ.ಸಿ.ನಾರಾಯಣಗೌಡರ ನೇತೃತ್ವದಲ್ಲಿ ಅದ್ಧೂರಿಯಾಗಿ ಮೆರವಣಿಗೆಯು ಸಾಗಿಬಂದು ಪುರಸಭೆ ಮೈದಾನದಲ್ಲಿ ಸಮ್ಮಿಳಿತಗೊಂಡಿತು. ಪಟ್ಟಣದ ಎಲ್ಲಾ ಬೀದಿಗಳಲ್ಲಿ ಕೇಸರಿ ಧ್ವಜಗಳು ಹಾರಾಡಿದವು. ಯುವಕರು ತಮ್ಮ ತಮ್ಮ ಗ್ರಾಮಗಳಿಂದ ಎತ್ತಿನ ಗಾಡಿಗಳ ಮೂಲಕ ಆಗಮಿಸಿ ಮೆರವಣಿಗೆಗೆ ಕಳೆತಂದರು. ಜಾನಪದ ಕಲಾ ತಂಡಗಳು ಮೆರವಣಿಗೆಯ ಅಂದವನ್ನು ಹೆಚ್ಚಿಸಿದವು.