ಹಿಂದೂ ಎಂಬುದು ಧರ್ಮವಲ್ಲ ಜೀವನ‌ ವಿಧಾನ: ನಿಜಗುಣಪ್ರಭು ಸ್ವಾಮೀಜಿ

KannadaprabhaNewsNetwork |  
Published : Sep 28, 2025, 02:00 AM IST

ಸಾರಾಂಶ

ಬೆಳಗಾವಿಯ ಡಾ.ಮಹಂತ ಪ್ರಭು ಸ್ವಾಮೀಜಿಗಳ ನೇತೃತ್ವದಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿಗಳೊಂದಿಗೆ ವಚನ ಸಂವಾದ ಕಾರ್ಯಕ್ರಮದಲ್ಲಿ ನಗರದ ಎಸ್.ಆರ್.ಎಸ್ ಕಾಲೇಜಿನ ವಿದ್ಯಾರ್ಥಿಯೊಬ್ಬಳ ಪ್ರಶ್ನೆಗೆ ಶ್ರೀಗಳು ಉತ್ತರಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಹಿಂದೂ ಎಂಬುದು ಒಂದು ಜೀವನ ವಿಧಾನವೇ ಹೊರತು, ಅದು ಧರ್ಮವಲ್ಲ. ಲಿಂಗಾಯತ ಎಂಬುದು ಜಗಜ್ಯೋತಿ ಬಸವೇಶ್ವರರಿಂದ ಸ್ಥಾಪಿಸಲ್ಪಟ್ಟ ಧರ್ಮವಾಗಿದ್ದು, ವಚನ ಸಾಹಿತ್ಯವೇ ಧರ್ಮ ಗ್ರಂಥವಾಗಿದೆ ಎಂದು ಮಂಡರಗಿಯ ನಿಷ್ಕಲ ಮಠದ ನಿಜಗುಣಪ್ರಭು ಸ್ವಾಮೀಜಿ ತಿಳಿಸಿದ್ದಾರೆ.

ನಗರದ ಶ್ರೀಸಿದ್ದಿವಿನಾಯಕ ಸಮುದಾಯ ಭವನದಲ್ಲಿ ರಾಜ್ಯ ಲಿಂಗಾಯತ ಮಠಾಧೀಶರ ಒಕ್ಕೂಟದಿಂದ ಆಯೋಜಿಸಿದ್ದ ಬಸವ ಸಂಸ್ಕೃತಿ ಆಭಿಯಾನದ ಅಂಗವಾಗಿ ಬೆಳಗಾವಿಯ ಡಾ.ಮಹಂತ ಪ್ರಭು ಸ್ವಾಮೀಜಿಗಳ ನೇತೃತ್ವದಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿಗಳೊಂದಿಗೆ ವಚನ ಸಂವಾದ ಕಾರ್ಯಕ್ರಮದಲ್ಲಿ ನಗರದ ಎಸ್.ಆರ್.ಎಸ್ ಕಾಲೇಜಿನ ವಿದ್ಯಾರ್ಥಿಯೊಬ್ಬಳ ಪ್ರಶ್ನೆಗೆ ಶ್ರೀಗಳು ಉತ್ತರಿಸಿದರು.

ಬಸವಣ್ಣ ಲಿಂಗಾಯತರಿಗೆ ಸೀಮಿತವಲ್ಲ. ಸಕಲರಿಗೆ ಒಳಿತನ್ನೇ ಬಯಸುವುದೇ ನಿಜವಾದ ಧರ್ಮ. ಆದೇ ಬಸವ ಧರ್ಮ ಅಥವಾ ಲಿಂಗಾಯತ ಧರ್ಮ. ಹಾಗಾಗಿ ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಸ್ಪಷ್ಟಪಡಿಸಿದರು.

ಮಠಕ್ಕೆ ಭಕ್ತರು ನೀಡುವ ಕಾಣಿಕೆ ಪಡೆಯುವ ಸಂದರ್ಭದಲ್ಲಿ ಇದು ಒಳ್ಳೆಯ ದಾರಿಯಲ್ಲಿ ಸಂಪಾದನೆ ಮಾಡಿದ್ದೆ ಇಲ್ಲವೇ ಎಂದು ಸ್ವಾಮೀಜಿಗಳು ಪ್ರಶ್ನೆ ಮಾಡಿದ್ದೀರಾ ಎಂಬ ವಿದ್ಯಾರ್ಥಿನಿಯೊಬ್ಬಳ ಪ್ರಶ್ನೆಗೆ ಉತ್ತರ ನೀಡಿದ ನಿಜಗುಣನಂದಶ್ರೀಗಳು, ಮಠಕ್ಕೆ ಕಾಣಿಕೆ ನೀಡುವ ಪ್ರತಿಯೊಬ್ಬರನ್ನು ಪ್ರಶ್ನಿಸಿ ಖಚಿತ ಪಡಿಸಿಕೊಳ್ಳುವುದು ಕಷ್ಟ ಸಾಧ್ಯ. ದಾನವು ಸತ್ಯ, ಶುದ್ಧ ಕಾಯಕದಿಂದ ಕೂಡಿದ್ದರೆ ಅದು ಲಿಂಗಕ್ಕೆ ಅರ್ಪಿತ ಎಂದು ಬಸವಣ್ಣನವರೇ ಹೇಳಿದ್ದಾರೆ. ಆದರೆ ತಾಯಂದಿರು ಮನಸ್ಸು ಮಾಡಿ, ತಮ್ಮ ಗಂಡಂದಿರು ದುಡಿದು ತರುವ ಆದಾಯವನ್ನು ಇದು ಒಳ್ಳೆಯ ಮಾರ್ಗದಲ್ಲಿ ದುಡಿದ್ದೋ, ಇಲ್ಲವೋ ಎಂದು ಪ್ರಶ್ನಿಸಿದರೆ ದೇಶದಲ್ಲಿ ನಡೆಯುವ ಅರ್ಧದಷ್ಟು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದು. ಈ ನಿಟ್ಟಿನಲ್ಲಿ ತಾಯಂದಿರು ಮುನ್ನುಡಿ ಬರೆಯಬೇಕೆಂದರು.

ಲಿಂಗಾಯತ ಮಠಾಧೀಶರಲ್ಲಿ ತಾತ್ವಿಕ ಭಿನ್ನಾಭಿಪ್ರಾಯಗಳಿವೆ. ಹಾಗಾಗಿ ಸುಮಾರು 200ಕ್ಕೂ ಹೆಚ್ಚು ಲಿಂಗಾಯತ ಮಠಾಧೀಶರು ಬಸವ ಸಂಸ್ಕೃತಿ ಅಭಿಯಾನದ ಹೆಸರಿನಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಜನರಲ್ಲಿಗೆ ಸತ್ಯವನ್ನು ತಿಳಿಸುವ ಸಲುವಾಗಿ ಇಂತಹ ಅಭಿಯಾನ ನಡೆಸುತ್ತಿದ್ದೇವೆ. ಈ ಅಭಿಯಾನದ ಒಟ್ಟು ಉದ್ದೇಶ. ಲಿಂಗಾಯತ ಧರ್ಮಕ್ಕೆ ಬಸವಣ್ಣನೇ ಗುರು, ವಚನವೇ ಗ್ರಂಥ. ಕಸಾಯ ವಸ್ತ್ರತ್ಯಾಗದ ಸಂಕೇತ. ಇದನ್ನು ಇಂತಹವರೇ ಧರಿಸಬೇಕೆಂದಿನಿಲ್ಲ. ಜನರಲ್ಲಿ ವೈಜ್ಞಾನಿಕ, ವೈಚಾರಿಕ ಭಾವನೆಯನ್ನು ಮೂಡಿಸುವ ಸಲುವಾಗಿ, ಕಾಯಕ, ದಾಸೋಹದ ಮಹತ್ವವನ್ನು ಪ್ರಚುರ ಪಡಿಸುವ ಸಲುವಾಗಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದು 26ನೇ ಜಿಲ್ಲೆಯಾಗಿದೆ ಎಂದರು.

ತಸ್ಮೀಯ ಎಂಬ ಯುವತಿಯ ದಾಸೋಹ ಪರಿಕಲ್ಪನೆಯ ಮಹತ್ವ ಕುರಿತ ಪ್ರಶ್ನೆಗೆ ಉತ್ತರ ನೀಡಿದ ಕೂಡಲಸಂಗಮದ ಬಸವ ಧರ್ಮ ಪೀಠದ ಡಾ.ಗಂಗಾಮಾತಾಜಿ, ಸತ್ಯ, ಶುದ್ಧ ಕಾಯಕದಿಂದ ಗಳಿಸಿದ್ದನ್ನು, ಇಲ್ಲದವರಿಗೆ ಹಂಚುವುದು ದಾಸೋಹ. ಅದು ಅನ್ನ, ಅಕ್ಷರ, ಆಶ್ರಯ ಎಲ್ಲವೂ ದಾಸೋಹದ ಪ್ರತೀಕವೇ ಆಗಿವೆ. ಹಾಗಾಗಿಯೇ ಸಾವಿರಾರು ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ನೀಡಿದ ಡಾ. ಶಿವಕುಮಾರ ಸ್ವಾಮೀಜಿಗಳನ್ನು ತ್ರಿವಿಧ ದಾಸೋಹಿ ಎಂದು ಕರೆಯಲಾಗುತಿತ್ತು. ಕಾಯಕ, ದಾಸೋಹ, ಅಂತರಜಾತಿ ವಿವಾಹಗಳಂತಹ ಕ್ರಾಂತಿಕಾರಿ ಕೆಲಸಗಳಿಂದ ವಿಚಲಿತರಾದ ಸಂಪ್ರದಾಯವಾದಿಗಳು, ಬಿಜ್ಜಳ ಮತ್ತು ಬಸವಣ್ಣನ ನಡುವೆ ವೈಮನಸ್ಸು ಉಂಟಾಗುವಂತೆ ಹುನ್ನಾರ ನಡೆಸಿದರು ಎಂದರು.

ಶರಣರು ಜನರನ್ನು ಅರ್ಥಿಕತೆಯನ್ನು ಹೆಚ್ಚಿಸುವ ಬದಲು, ಶಿಕ್ಷಣದ ಮೂಲಕ ಅರಿವನ್ನು ಹೆಚ್ಚಿಸುವ ಕೆಲಸ ಮಾಡಿದರು. ಮಠ ಮಾನ್ಯಗಳು ಐಟಿಐ, ಡಿಪ್ಲಮೋ ದಂತಹ ಶಾಲಾ, ಕಾಲೇಜುಗಳನ್ನು ತೆರೆದು ಜ್ಞಾನದ ಜೊತೆಗೆ, ಬದುಕಿಗೆ ದಾರಿ ಕಲ್ಪಿಸಿದರು,

ಜನ ಕಲ್ಯಾಣವೇ ಲಿಂಗಾಯತ ಧರ್ಮದ ಉದ್ದೇಶ. ಎಲ್ಲರೂ ಅಂಗೈಯಲ್ಲಿ ಇಷ್ಟಲಿಂಗವನ್ನಿಟ್ಟು ಪೂಜಿಸುವ ಅವಕಾಶ ಕಲ್ಪಿಸಿ, ಸಮಾಜದಲ್ಲಿ ಮೇಲು, ಕೀಳು, ಬಡವ, ಬಲ್ಲಿದ, ಹೆಣ್ಣು, ಗಂಡ ಎಂಬ ಭೇಧ ಭಾವ ಹೋಗಲಾಡಿಸಲು ಬಸವಾದಿ ಶರಣರು ಪ್ರಯತ್ನಿಸಿದ್ದರು ಎಂದು ಬಾಲ್ಕಿಯ ಡಾ. ಬಸವಲಿಂಗ ಪಟ್ಟದೇವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವ ಸಂಸ್ಕೃತಿ ಅಭಿಯಾನದ ತುಮಕೂರು ಜಿಲ್ಲಾಧ್ಯಕ್ಷರಾದ ಬೆಟ್ಟದಹಳ್ಳಿ ಗವಿಮಠದ ಶ್ರೀಚಂದ್ರಶೇಖರ ಸ್ವಾಮೀಜಿ ವಹಿಸಿದ್ದರು.ಗದಗದ ಡಾ.ಶ್ರೀತೊಂಟದ ಸಿದ್ದರಾಮ ಸ್ವಾಮೀಜಿ, ತಮ್ಮಡಿಹಳ್ಳಿಯ ಡಾ. ಶ್ರೀಅಭಿನವ ಮಲ್ಲಿಕಾರ್ಜುನ ಸ್ವಾಮೀಜಿ, ಬೆಳ್ಳಾವೆಯ ಶ್ರೀಕಾರದ ವೀರಬಸವ ಸ್ವಾಮೀಜಿ, ಯಳನಾಡು ಮಠದ ಶ್ರೀಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ಮಾಜಿ ಸಚಿವ ಸೊಗಡು ಶಿವಣ್ಣ, ವಿದ್ಯಾವಾಹಿನಿ ಸಂಸ್ಥೆಯ ಕಾರ್ಯದರ್ಶಿ ಎನ್.ಬಿ.ಪ್ರದೀಪ ಕುಮಾರ್, ರೂಪ್ಸಾ ಅಧ್ಯಕ್ಷ ಡಾ.ಹಾಲೇನೂರು ಲೇಪಾಕ್ಷ, ಕೆಂಪಣ್ಣಗೌಡರ್, ಡಾ.ಡಿ.ಎನ್.ಯೋಗೀಶ್ವರಪ್ಪ, ಸಾಗರನಹಳ್ಳಿ ಪ್ರಭು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಾವಿರಾರು ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡಿದ್ದರು.

PREV

Recommended Stories

ಅ.4ರಿಂದ ಅಂತಾರಾಜ್ಯ ವಿವಿ ಕಬಡ್ಡಿ ಕ್ರೀಡಾಕೂಟ
ಜಾನಪದ ಕಲೆ ಉಳಿಸಲು ಸಂಘಟನೆಗಳ ಪಾತ್ರ ಪ್ರಮುಖ: ಎಂ.ಎಂ. ವಿರಕ್ತಮಠ