ನೇತ್ರ ದಾನದಿಂದ ಅಂದರ ಬಾಳಿಗೆ ಬೆಳಕಾಗಿ

KannadaprabhaNewsNetwork | Published : Aug 31, 2024 1:38 AM

ಸಾರಾಂಶ

39ನೇ ನೇತ್ರದಾನ ಪಾಕ್ಷಿಕ ಮಾಹಿತಿ ಶಿಕ್ಷಣ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಸದಾ ಕಾಲ ಜಗತ್ತು ವೀಕ್ಷಿಸಬೇಕೆಂದೆನಿಸದರೆ ಮರಣದ ನಂತರ ನೇತ್ರ ದಾನ ಮಾಡಿ. ಇಂದೇ ದಾನದ ಪಟ್ಟಿಗೆ ಹಸರು ಸೇರ್ಪಡೆ ಮಾಡುವುದರ ಮೂಲಕ ಅಂಧರ ಬಾಳಿಗೆ ಬೆಳಕಾಗಿ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯ್ಕ್ ಹೇಳಿದರು.

ನಗರ ಪದ್ಮಾವತಿ ಕಾಲೇಜ್ ಆಫ್ ನರ್ಸಿಂಗ್ ಸೈನ್ಸ್‌ನಲ್ಲಿ ಆರೋಗ್ಯ ಇಲಾಖೆ ವತಿಯಿಂದ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ 39ನೇ ನೇತ್ರದಾನ ಪಾಕ್ಷಿಕ ಮಾಹಿತಿ ಶಿಕ್ಷಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನೇತ್ರದಾನ ಪಾಕ್ಷಿಕವು ಆ.25 ರಿಂದ ಆರಂಭವಾಗಿದ್ದು ಸೆಪ್ಟೆಂಬರ್ 10 ರವರಗೆ ನಡೆಯಲಿದೆ. ನೇತ್ರದಾನದ ಮಹತ್ವ ಜಾಗೃತಿಗಾಗಿ ವಿವಿಧ ಕಾಲೇಜುಗಳಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾಹಿತಿ ನೀಡಿ ಸಾರ್ವಕನಿಕರು ನೇತ್ರದಾನದಲ್ಲಿ ಭಾಗವಹಿಸುವಂತೆ ಪ್ರೇರಣೆ ನೀಡಲಾಗುತ್ತದೆ ಎಂದು ಹೇಳಿದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ನೇತ್ರಗಳು ಸದಾ ಜೀವಂತವಾಗಿರಲಿ. ನೇತ್ರದಾನ ಕುಟುಂಬದ ಸಂಪ್ರದಾಯವಾಗಲಿ. ಒಬ್ಬ ವ್ಯಕ್ತಿ ದಾನ ಮಾಡಿದ ನೇತ್ರಗಳು ಇಬ್ಬರು ಕಾರ್ನಿಯಾ ಅಂಧರಿಗೆ ದೃಷ್ಟಿ ನೀಡುತ್ತದೆ ಎಂದರು.

ಪ್ರತಿ ವರ್ಷ ಸರಾಸರಿ 5,600 ನೇತ್ರದಾನಗಳಾಗುತ್ತಿವೆ. ಅಂದಾಜು 1.25 ಲಕ್ಷ ಜನರು ಕಾರ್ನಿಯಾ ಸಂಬಂಧಿಸಿದ ಅಂಧತ್ವದಿಂದ ಬಳಲುತ್ತಿದ್ದು, ದಾನಕ್ಕಾಗಿ ಕಾಯುತ್ತಿರುತ್ತಾರೆ. ನೇತ್ರದಾನ ಮಹಾದಾನವಾಗಿದ್ದು, ರಾಜ್ಯದಲ್ಲಿ 32 ನೇತ್ರ ಬ್ಯಾಂಕ್‌ಗಳು ಸೇವೆ ಸಲ್ಲಿಸುತ್ತಿವೆ ಎಂದು ತಿಳಿಸಿದರು.

ಚಿತ್ರದುರ್ಗ ನಗರದ ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಬಸವೇಶ್ವರ ಪೂರ್ಣ ಜ್ಯೋತಿ ನೇತ್ರ ಬ್ಯಾಂಕ್ ಇದೆ. ವಯಸ್ಸು, ಬಣ್ಣ, ಲಿಂಗ, ಜಾತಿ, ರಕ್ತದ ಗುಂಪು ಯಾವುದೇ ಬೇಧವಿಲ್ಲದೇ ಎಲ್ಲರೂ ನೇತ್ರದಾನ ಮಾಡಬಹುದು.

ವ್ಯಕ್ತಿಯ ಮರಣ ನಂತರ 6 ಗಂಟೆಯ ಒಳಗೆ ನೇತ್ರಗಳನ್ನು ಸಂಗ್ರಹಿಸಲಾಗುವುದು. ನೇತ್ರ ಸಂಗ್ರಹಣೆಗೆ 20 ನಿಮಿಷ ಸಮಯ ಬೇಕು. ಸಂಗ್ರಹಣೆಯ ನಂತರ ಮೃತರ ಮುಖ ವಿಕಾರವಾಗುವುದಿಲ್ಲ. ಜೀವಸಾರ್ಥಕತೆ ವೆಬ್ ಪೋರ್ಟಲ್ ಮೂಲಕವು ನೇತ್ರದಾನ, ಅಂಗಾಂಗ ದಾನ ಮಾಡಬಹುದು. ವೆಬ್‌ಪೋರ್ಟಲ್ ಮೂಲಕ ಮನೆಯಲ್ಲಿಯೇ ಕುಳಿತು ದಾನ ಮಾಡಬಹುದು ಎಂದು ತಿಳಿಸಿದರು.

ಈ ವೇಳೆ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಿವಾಸ, ಕಾಲೇಜಿನ ಪ್ರಾಂಶುಪಾಲ ವೆಂಕಟೇಶ ರೆಡ್ಡಿ, ಉಪನ್ಯಾಸಕರಾದ ಗಂಗಾ, ತೇಜಸ್ವಿನಿ, ಜಬ್ಬಾರ್ ಇದ್ದರು.

Share this article