ಕೊಡಗಿನೊಂದಿಗೆ ಮೈಸೂರು ಸಂಸ್ಥಾನ ಐತಿಹಾಸಿಕ ಸಂಬಂಧ: ಯದುವೀರ್‌

KannadaprabhaNewsNetwork |  
Published : Dec 26, 2024, 01:04 AM IST
ಮೈಸೂರು ಸಂಸ್ಥಾನ ಹಿಂದಿನಿಂದಲೂ ಕೊಡವ ಜನಾಂಗದೊಂದಿಗೆ ಐತಿಹಾಸಿಕ ಸಂಬಂಧವನ್ನು ಹೊಂದಿತ್ತು-ಸಂಸದ ಯದುವೀರ ಒಡೆಯರ್ | Kannada Prabha

ಸಾರಾಂಶ

ಮೈಸೂರು ಸಂಸ್ಥಾನ ಹಿಂದಿನಿಂದಲೂ ಕೊಡವ ಜನಾಂಗದೊಂದಿಗೆ ಐತಿಹಾಸಿಕ ಸಂಬಂಧ ಹೊಂದಿತ್ತು ಎಂದು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಮೈಸೂರು ಸಂಸ್ಥಾನ ಹಿಂದಿನಿಂದಲೂ ಕೊಡವ ಜನಾಂಗದೊಂದಿಗೆ ಐತಿಹಾಸಿಕ ಸಂಬಂಧವನ್ನು ಹೊಂದಿತ್ತು. ಮೈಸೂರು ಅರಸರು ಕೊಡಗನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಲು ಕೊಡವರ ಧೈರ್ಯ, ಸಾಹಸದ ಹೋರಾಟದಿಂದ ಸಾಧ್ಯವಾಗಲಿಲ್ಲ ಎಂದು ಮೈಸೂರು- ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಬುಧವಾರ ಪಟ್ಟಣದ ಕೊಡವ ಸಮಾಜದಲ್ಲಿ ಆಯೋಜಿಸಿದ್ದ ಸುವರ್ಣಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತಮಾಡಿದರು. ಟಿಪ್ಪು ಸುಲ್ತಾನ್ ಕೊಡಗನ್ನು ಆಳ್ವಿಕೆ ಮಾಡುತ್ತಿದ್ದ ಸಂದರ್ಭ ಕೊಡವರು ತಮ್ಮ ಧೈರ್ಯ, ಸಾಹಸದಿಂದ ಟಿಪ್ಪುವನ್ನು ಹಿಮ್ಮೆಟ್ಟಿಸಿದ ನಂತರ ಮೈಸೂರು ಅರಸರು ಮತ್ತು ಕೊಡವ ಜನಾಂಗದೊಂದಿಗೆ ಅವಿನಾಭಾವ ಸಂಬಂಧ ಏರ್ಪಟ್ಟಿತು ಎಂದು ಸಂಸದರು ಸ್ಮರಿಸಿದರು.

ದೇಶಕ್ಕಾಗಿ ಹಾಗೂ ರಾಷ್ಟ್ರೀಯತೆಗಾಗಿ ಸೇವೆ ಮಾಡಿದ ಕೊಡವ ಜನಾಂಗದವರು ಮುಂಬರುವ ಪೀಳಿಗೆಗೆ ಉತ್ತಮ ವಾತಾವರಣ ನಿರ್ಮಾಣ ಮಾಡಬೇಕಾಗಿದ್ದು, ಕೊಡವ ಸಮಾಜದ ಅಭಿವೃದ್ಧಿಗಾಗಿ ತಮ್ಮ ಸಂಸದರ ನಿಧಿಯಿಂದ ಅನುದಾನ ಒದಗಿಸಲು ಬದ್ಧರಾಗಿರುವುದಾಗಿ ತಿಳಿಸಿದರು.

ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಚೆಪ್ಪುಡಿರ ಪೂಣಚ್ಚ ಮಾತನಾಡಿ, ಕೊಡವ ಜನಾಂಗ ಚಿಕ್ಕ ಸಮುದಾಯವಾದರೂ ಕ್ರೀಡೆ, ಸೇನೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡುವ ಮೂಲಕ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಕೊಡವರ ಸಮಗ್ರ ಅಭಿವೃದ್ಧಿಯಲ್ಲಿ ಕೊಡವ ಸಮಾಜಗಳ ಪಾತ್ರ ಅಪಾರವಾದುದು ಎಂದು ಶ್ಲಾಘಿಸಿದರು.

ಶಾಸಕ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಮಾತನಾಡಿ, ಮುಂದಿನ ಪೀಳಿಗೆಗೆ ಕೊಡವರ ಆಚಾರ, ವಿಚಾರ, ಸಂಸ್ಕಂ ತಿ, ಸಾಂಪ್ರಾದಾಯಿಕ ಆಚರಣೆಗಳನ್ನು ಉಳಿಸುವ ನಿಟ್ಟಿನಲ್ಲಿ ಕೊಡವ ಜನಾಂಗ ಪಕ್ಷಾತೀತವಾಗಿ ಒಗ್ಗಟ್ಟಾಗಬೇಕಾಗಿರುವುದು ಅನಿವಾರ್ಯವಾಗಿದೆ. ಹೀಗಾಗಿ ಕೊಡವ ಸಮುದಾಯದ ಅಭಿವೃದ್ಧಿಗಾಗಿ ತಾವು ಕಟಿಬದ್ಧನಾಗಿದೇನೆ ಎಂದು ಹೇಳಿದರು.

ಮಾಜಿ ಸಚಿವ ಮಂಡೇಪಂಡ ಅಪ್ಪಚ್ಚು ರಂಜನ್, ವಿಧಾನಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ, ನಿವೃತ್ತ ಕರ್ನಲ್ ಮರುವಂಡ ತಿಮ್ಮಯ್ಯ ಮತ್ತಿತರರು ಮಾತನಾಡಿದರು. ವೇದಿಕೆಯಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜನಿಕಂಡ ಮಹೇಶ್ ನಾಚಯ್ಯ, ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಸಿನಿಮಾ ಕಲಾವಿದ ಆಧ್ಯಾ ಪೂವಣ್ಣ ಮತ್ತಿತರರು ಇದ್ದರು.

ಅಧ್ಯಕ್ಷತೆ ವಹಿಸಿದ್ದ ಮಾಳೇಟಿರ ಅಭಿಮನ್ಯುಕುಮಾರ್ ಮಾತನಾಡಿ, ಕಳೆದ ಐವತ್ತು ವರ್ಷಗಳ ಹಿಂದೆ ಜಿಲ್ಲೆಯ ವಿವಿಧೆಡೆಗಳಿಂದ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಲು ಬಂದ ಕೊಡವ ಜನಾಂಗದ ಪ್ರಮುಖರ ಶ್ರಮದಿಂದಾಗಿ ಕೊಡವ ಸಮಾಜ ಆರಂಭಿಸಲಾಯಿತು. ಆದರೆ ನಂತರದ ದಿನಗಳಲ್ಲಿ ಕೊಡವ ಸಮಾಜ ಕಟ್ಟಡ ನಿರ್ಮಾಣಕ್ಕೆ ಮುಂದಾದ ಸಂದರ್ಭ ಹಂಚೆಟ್ಟಿರ ಕುಟ್ಟಪ್ಪ 30 ಸೆಂಟ್ ಜಾಗವನ್ನು ಸೋಮವಾರಪೇಟೆ ಪಟ್ಟಣದಲ್ಲಿ ದಾನವಾಗಿ ನೀಡುವ ಮೂಲಕ ತಮ್ಮ ಹೃದಯ ವೈಶಾಲ್ಯತೆಯನ್ನು ಮೆರೆದರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಾನಪದ ಕಲಾವಿದೆ ಪದ್ಮಶ್ರೀ ಪುರಸ್ಕೃತರಾದ ಐಮುಡಿಯಂಡ ರಾಣಿ ಮಾಚಯ್ಯ ಹಾಗೂ ವಿದ್ಯುತ್ ಇಲಾಖೆಯ ಮುಖ್ಯ ನಿರೀಕ್ಷಕರಾದ ತೀತಿರ ರೋಷನ್ ಅಪ್ಪಚ್ಚು ಅವರನ್ನು ಸನ್ಮಾನಿಸಲಾಯಿತು. ಸಮಾಜದ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸಿದ ನಿರ್ದೇಶಕರು, ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ