- ‘ಹರಿಹರೇಶ್ವರ ದೇವಾಲಯ-ಹಳ್ಳೂರಿನ ಇತಿಹಾಸ’ ವಿಶೇಷ ಉಪನ್ಯಾಸ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಹರಿಹರ
ಇತಿಹಾಸ ಬಹುಶಿಸ್ತಿಯ ಜ್ಞಾನ ಭಂಡಾರವನ್ನು ಹೊಂದಿದೆ. ಇತಿಹಾಸದ ಅಧ್ಯಯನದ ಮೂಲಕ ಮಾನವನ ನಡವಳಿಕೆ, ಸಾಮಾಜಿಕ, ರಾಜಕೀಯ, ಆರ್ಥಿಕ ಮಾದರಿಗಳು ಹಾಗೂ ವಿಭಿನ್ನ ಸಂಸ್ಕೃತಿಗಳು, ಸಮೂಹ ವ್ಯವಸ್ಥೆಗಳ ಬೆಳವಣಿಗಳ ಬಗ್ಗೆ ಒಳನೋಟಗಳನ್ನು ಪಡೆಯಬಹುದಾಗಿದೆ ಎಂದು ಮೈಸೂರಿನ ಡಿ.ಬನುಮಯ್ಯ ವಾಣಿಜ್ಯ ಮತ್ತು ಕಲಾ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ. ಎಚ್.ಜಿ. ಕೃಷ್ಣಪ್ಪ ಅಭಿಪ್ರಾಯಪಟ್ಟರು.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಹಾಗೂ ಇತಿಹಾಸ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ‘ಹರಿಹರೇಶ್ವರ ದೇವಾಲಯ ಮತ್ತು ಹಳ್ಳೂರಿನ ಇತಿಹಾಸ’ ಎಂಬ ವಿಷಯದ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತಿಹಾಸದಿಂದ ಹೊಯ್ಸಳರ ಕಾಲದಲ್ಲಿ ಸೇನಾಮುಖ್ಯಸ್ಥ ಆಗಿದ್ದ ಪೊಲಾಳ್ವ ದಂಡನಾಥನ ಸಹಾಯದಿಂದ ಎರಡನೇ ವೀರನರಸಿಂಹ ಅವರು ಕ್ರಿ.ಶ. 1223ರಲ್ಲಿ ಹರಿಹರದ ತುಂಗಭದ್ರಾ ನದಿ ದಡದಲ್ಲಿ ವಿಶಿಷ್ಟವಾದ ಹರಿಹರೇಶ್ವರ ದೇವಾಲಯ ನಿರ್ಮಾಣ ಮಾಡಿದ್ದರು ಎಂಬುದು ದೇವಾಲಯದಲ್ಲಿನ ಶಾಸನಗಳಿಂದ ಅರಿಯಬಹುದು ಎಂದು ವಿವರಿಸಿದರು.
ವಿದ್ಯಾರ್ಥಿನಿ ಅರ್ಪಿತಾ ಎನ್.ಎಚ್. ಪ್ರಾರ್ಥಿಸಿದರು. ಇತಿಹಾಸ ವಿಭಾಗದ ಅಧ್ಯಾಪಕರಾದ ಮಲ್ಲಿಕಾರ್ಜುನ ಜವಳಿ ಅವರು ಅತಿಥಿಯನ್ನು ಪರಿಚಯಿಸಿ ಸ್ವಾಗತಿಸಿದರು. ಶ್ರೀಮತಿ ರೇಣುಕಾ ಕೆ.ಡಿ. ಕಾರ್ಯಕ್ರಮ ನಿರ್ವಹಿಸಿದರು. ಅಂತಿಮ ಬಿ.ಎ. ವಿದ್ಯಾರ್ಥಿನಿ ವರ್ಷಿಣಿ ವಂದಿಸಿದರು.
(ಕೋಟ್) ಎಲ್ಲ ಜ್ಞಾನ ಶಾಖೆಯು ತನ್ನದೇ ಆದ ಇತಿಹಾಸವನ್ನು ಹೊಂದಿವೆ. ಅವುಗಳ ಶಿಸ್ತುಬದ್ಧ ಅಧ್ಯಯನ ಆಗಬೇಕಾಗಿದೆ. ಇತಿಹಾಸವು ಮುಖ್ಯವಾದುದು. ಏಕೆಂದರೆ, ಅದು ಹಿಂದೆ ನಡೆದ ತಪ್ಪುಗಳು ಮತ್ತು ಯಶಸ್ಸುಗಳನ್ನು ಕಲಿಯುವ ಮೂಲಕ ವರ್ತಮಾನವನ್ನು ಅರ್ಥ ಮಾಡಿಕೊಂಡು ಭವಿಷ್ಯವನ್ನು ರೂಪಿಸಲು ನಮಗೆ ಸಹಾಯ ಮಾಡುತ್ತದೆ.
- - -
ಹರಿಹರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಹಾಗೂ ಇತಿಹಾಸ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ‘ಹರಿಹರೇಶ್ವರ ದೇವಾಲಯ ಮತ್ತು ಹಳ್ಳೂರಿನ ಇತಿಹಾಸ’ ಎಂಬ ವಿಷಯದ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಪ್ರೊ. ಎಚ್.ಜಿ. ಕೃಷ್ಣಪ್ಪ ಉದ್ಘಾಟಿಸಿದರು.