ಭದ್ರಾ ಐಸಿಸಿ ಸಭೆ ದಾ‍ವಣಗೆರೆಯಲ್ಲೇ ನಡೆಸಿ

KannadaprabhaNewsNetwork |  
Published : Jan 05, 2024, 01:45 AM IST
4ಕೆಡಿವಿಜಿ8-ದಾವಣಗೆರೆ ನೀರಾವರಿ ಇಲಾಖೆ ಆವರಣದಲ್ಲಿ ಇಇ ಮಂಜುನಾಥ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಭದ್ರಾ ಅಚ್ಚುಕಟ್ಟು ರೈತರು, ಸಂಘಟನೆಗಳ ಸಭೆಯಲ್ಲಿ ರೈತ ಮುಖಂಡ ಬಿಎಂ ಸತೀಶ ಕೊಳೇನಹಳ್ಳಿ ಮಾತನಾಡಿದರು.  | Kannada Prabha

ಸಾರಾಂಶ

ಐಸಿಸಿ ಸಭೆಯ ನಿರ್ಣಯವಾಗದ ಹೊರತು ಸರ್ಕಾರದ ಆದೇಶದ ಮೇರೆಗೆ ಯಾವುದೇ ಕಾರಣಕ್ಕೂ, ಎಂತಹದ್ದೇ ಸಂದರ್ಭದಲ್ಲೂ ನೀರು ಬಿಡಬಾರದು. ಜಲಾಶಯದ ನೀರಿನ ಮಟ್ಟ 151.4 ಅಡಿ ಇದ್ದು, ಲಭ್ಯತೆಯ ನೀರಿನ ಪ್ರಮಾಣ 21.54 ಟಿಎಂಸಿ ನೀರಿದೆ. ಈ ಪ್ರಮಾಣದ ನೀರನ್ನು 72 ದಿನ ಹರಿಸಬಹುದಾಗಿದ್ದು, ಫೆ.1ರಿಂದ 20 ದಿನ ನೀರು ಬಿಡಬೇಕು.

ನೀರಾವರಿ ಇಲಾಖೆಯಲ್ಲಿ ನಡೆದ ಸಭೆಯಲ್ಲಿ ರೈತ ಮುಖಂಡರ ಬಿಗಿ ಪಟ್ಟು । ಫೆಬ್ರವರಿಯಿಂದ 3 ತಿಂಗಳು ತಲಾ 20 ದಿನ ನೀರು ಬಿಡಲಿ

ಕನ್ನಡಪ್ರಭ ವಾರ್ತೆ ದಾವಣಗೆರೆ

ಭದ್ರಾ ಜಲಾಶಯದಿಂದ ಪ್ರತಿ ವರ್ಷ ಫೆಬ್ರವರಿ- ಏಪ್ರಿಲ್ ವರೆಗೆ ಪ್ರತಿ ತಿಂಗಳು 20 ದಿನ ನೀರು ಬಿಡಬೇಕು, ಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಶೇ.70ರಷ್ಟು ಅಚ್ಚುಕಟ್ಟು ಪ್ರದೇಶ ಹೊಂದಿರುವ ದಾವಣಗೆರೆಯಲ್ಲೇ ಇನ್ನು ಮುಂದೆ ನಡೆಸಬೇಕೆಂಬುದೂ ಸೇರಿ ಎಲ್ಲಾ ನಿರ್ಣಯ ಜಾರಿಗೊಳಿಸಲು ರೈತ ಮುಖಂಡರು ಒಕ್ಕೊರಲಿನಿಂದ ಒತ್ತಾಯಿಸಿದರು.

ನಗರದ ನೀರಾವರಿ ಇಲಾಖೆ ವಿಭಾಗ ಕಚೇರಿಯಲ್ಲಿ ಗುರುವಾರ ಭದ್ರಾ ಅಚ್ಚುಕಟ್ಟು ಪ್ರದೇಶದ 2023-24ನೇ ಸಾಲಿನ ಬೇಸಿಗೆ ಹಂಗಾಮಿಗೆ ನೀರು ಹರಿಸುವ ಬಗ್ಗೆ ಜ.6ರಂದು ಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸೂಚನೆಯಂತೆ ಹಮ್ಮಿಕೊಂಡಿದ್ದ ರೈತರ ಸಭೆಯಲ್ಲಿ ರೈತ ಮುಖಂಡರು ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ ಮಂಜುನಾಥ್ ಗೆ ಒತ್ತಾಯಿಸಿದರು.

ಐಸಿಸಿ ಸಭೆಯ ನಿರ್ಣಯವಾಗದ ಹೊರತು ಸರ್ಕಾರದ ಆದೇಶದ ಮೇರೆಗೆ ಯಾವುದೇ ಕಾರಣಕ್ಕೂ, ಎಂತಹದ್ದೇ ಸಂದರ್ಭದಲ್ಲೂ ನೀರು ಬಿಡಬಾರದು. ಜಲಾಶಯದ ನೀರಿನ ಮಟ್ಟ 151.4 ಅಡಿ ಇದ್ದು, ಲಭ್ಯತೆಯ ನೀರಿನ ಪ್ರಮಾಣ 21.54 ಟಿಎಂಸಿ ನೀರಿದೆ. ಈ ಪ್ರಮಾಣದ ನೀರನ್ನು 72 ದಿನ ಹರಿಸಬಹುದಾಗಿದ್ದು, ಫೆ.1ರಿಂದ 20 ದಿನ ನೀರು ಬಿಡಬೇಕು. 10 ದಿನ ನೀರು ನಿಲ್ಲಿಸಿ, ಮತ್ತೆ ಮಾರ್ಚ್‌ನಲ್ಲಿ 20 ದಿನ ಬಿಡಬೇಕು. ಏಪ್ರಿಲ್‌ನಲ್ಲಿ ಸಹ 20 ದಿನ ನೀರು ಬಿಟ್ಟು, 10 ದಿನ ನೀರು ನಿಲ್ಲಿಸಬೇಕು. ಮೇ ತಿಂಗಳಿನಲ್ಲಿ ಉಳಿದ ನೀರು ಬಿಡಬೇಕು. ನಾಲೆಯಲ್ಲಿ ಹರಿಸುವ ಪ್ರಮಾಣದಲ್ಲಿ ಅರ್ಧದಷ್ಟು ನೀರು ಬೆಳ್ಳಿಗನೂಡು, ಹಿರೇಕೋಗಲೂರು ಸೂಪರ್ ಪ್ಯಾಸೇಜ್ ಒಡೆದಿದ್ದರಿಂದ ಅಲ್ಲಿ ವ್ಯರ್ಥವಾಗಿ ಹರಿಯುತ್ತಿದ್ದು, ಅಲ್ಲಿ ದುರಸ್ತಿಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕಾಡಾ ಸಮಿತಿ ಸಭೆಯಲ್ಲಿ ಗಮನಕ್ಕೆ ತರುವೆ:

ನೀರಾವರಿ ಇಲಾಖೆ ಇಇ ಮಂಜುನಾಥ ಮಾತನಾಡಿ, ಅಚ್ಚುಕಟ್ಟು ರೈತರ ನಿರ್ಣಯ, ಬೇಡಿಕೆಗಳ ಬಗ್ಗೆ ಜ.6ರಂದು ಶಿವಮೊಗ್ಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ಭದ್ರಾ ಕಾಡಾ ಸಮಿತಿ ಸಭೆಯ ಗಮನಕ್ಕೆ ತರುತ್ತೇವೆ. ಭದ್ರಾ ಕಾಡಾ ಸಭೆ ದಾವಣಗೆರೆಯಲ್ಲೇ ನಡೆಸಬೇಕು, ಫೆಬ್ರುವರಿಯಿಂದ ಏಪ್ರಿಲ್‌ವರೆಗೆ ಪ್ರತಿ ತಿಂಗಳು 20 ದಿನ ನಾಲೆಗಳಿಗೆ ನೀರು ಹರಿಸುವುದೂ ಸೇರಿ ಅಚ್ಚುಕಟ್ಟು ರೈತರ ಬೇಡಿಕೆ ಬಗ್ಗೆ ಸಭೆಯಲ್ಲಿ ಪ್ರವ ಶಿವಮೊಗ್ಗದಲ್ಲಿ ಅಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ಭದ್ರಾ ಕಾಡಾ ಸಮಿತಿ ಸಭೆಯ ಗಮನಕ್ಕೆ ತರುವ ಭರವಸೆ ನೀಡಿದರು.

ಈಗ ಜಲಾಶಯದಲ್ಲಿ ನೀರಿನ ಮಟ್ಟ 151.3 ಅಡಿ ನೀರಿದ್ದು, 35.25 ಟಿಎಂಸಿನಲ್ಲಿ ಡೆಡ್ ಸ್ಟೋರೇಜ್ ತೆಗೆದರೆ, 21.4 ಟಿಎಂಸಿ ನೀರು ಬಳಸಬಹುದು. ಕುಡಿಯುವ ನೀರು, ಕೈಗಾರಿಕೆಗೆ 6.9 ಟಿಎಂಸಿ ನೀರು ಬೇಕು. 2.5 ಟಿಎಂಸಿ ನೀರು ಆವಿಯಾಗುತ್ತದೆ. ಉಳಿದಂತೆ ನೀರಾವರಿಗೆ 12.11 ಟಿಎಂಸಿ ನೀರಿದ್ದು, ಅದನ್ನು ಭದ್ರಾ ಎಡ ಮತ್ತು ಬಲ ದಂಡೆಗೆ ಹರಿಸಿದರೆ, 47 ದಿನಗಳ ಕಾಲ ನಾಲೆಗೆ ನೀರು ಹರಿಸಬಹುದಾಗಿದೆ ಎಂದರು.

ಅದಕ್ಕೆ ಆಕ್ಷೇಪಿಸಿದ ರೈತ ಮುಖಂಡ ಬಿ.ಎಂ.ಸತೀಶ ಕೊಳೇನಹಳ್ಳಿ, ನೀವು ನೀಡಿರುವ ಅಂಕಿ ಅಂಶಗಳ ಪ್ರಕಾರ 72 ದಿನ ಹರಿಸಲು ನೀರಿನ ಪ್ರಮಾಣ ಲಭ್ಯತೆ ಇದೆ. 7 ಟಿಎಂಸಿ ನೀರು ಕುಡಿಯುವ ನೀರಿಗಾಗಿ ಕಾಯ್ದಿರಿಸುವುದು, 2.4 ಟಿಎಂಸಿ ನೀರು ಆವಿಯಾಗುತ್ತದೆಂಬುದೆಲ್ಲಾ ಸರಿಯಲ್ಲ. ನಾಲೆಯಲ್ಲಿ ನೀರು ಹರಿಸಿದಾಗ ಕುಡಿಯುವ ನೀರಿಗಾಗಿ ಕೆರೆಗಳಲ್ಲಿ ಸಂಗ್ರಹಿಸಿ ಕೊಳ್ಳಬಹುದು ಎಂದು ಹೇಳಿದರು.

ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಶಾಬನೂರು ಎಚ್.ಆರ್‌.ಲಿಂಗರಾಜ, 22 ಕೆರೆಗಳ ಏತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಮುದೇಗೌಡ್ರ ಗಿರೀಶ, ಬಾಬು ರಾವ್‌, ಬೆಳ‍ವನೂರು ಬಿ.ನಾಗೇಶ್ವರರಾವ್, ನೀರು ಬಳಕೆಗಾರ ಮಹಾ ಮಂಡಳದ ಅಧ್ಯಕ್ಷ ದ್ಯಾವಪ್ಪ ರೆಡ್ಡಿ, ಮುದೇಗೌಡಪ್ಪ ಕೊಂಡಜ್ಜಿ, ಜಿ.ಮಂಜುನಾಥ ಪಟೇಲ್, ಜಿಗಳಿ ಆನಂದಪ್ಪ, ಕುಕ್ಕವಾಡ ಮಂಜುನಾಥ, ಜಿಗಳಿ ಪ್ರಕಾಶ, ಧನಂಜಯ ಕಡ್ಲೇಬಾಳ್, ಬಲ್ಲೂರು ಬಸವರಾಜ ಇತರರಿದ್ದರು.

ಭದ್ರಾ ಮೇಲ್ದಂಡೆ ಕಾಡಾ ಸಮಿತಿಗೆ ಒಳಪಟ್ಟಿಲ್ಲ. ಹೀಗೆ ದಿಢೀರನೇ ನೀರು ಬಿಟ್ಟರೆ ಅಚ್ಚುಕಟ್ಟು ರೈತರಿಗೆ ಅನ್ಯಾಯವಾಗುತ್ತದೆ. ಕಾಡಾ ಸಮಿತಿಯೇ ನೀರಿನ ನಿರ್ಣಯ ಮಾಡಬೇಕು. ಇಲ್ಲಿ ನಿರ್ಣಯವಾಗುವ ಎಲ್ಲಾ ಬೇಡಿಕೆ ಕಾಡಾ ಸಮಿತಿಗೆ ನೀಡಬೇಕು. ದಾವಣಗೆರೆಯಲ್ಲೇ ಐಸಿಸಿ ಸಭೆ ಮಾಡಬೇಕು.

ಶಾಮನೂರು ಎಚ್‌.ಆರ್.ಲಿಂಗರಾಜ ಅಧ್ಯಕ್ಷರು, ಭಾರತೀಯ ರೈತ ಒಕ್ಕೂಟ.

..................

ಭದ್ರಾ ಅಚ್ಚುಕಟ್ಟು ರೈತರು ಒಗ್ಗಟ್ಟಿನಿಂದ ಇದ್ದರೆ ಮಾತ್ರ ನಮ್ಮ ಹಕ್ಕಿನ ನೀರು ಪಡೆಯಲು ಸಾಧ್ಯ. ನದಿ ನೀರಿಗೆ ಸಂಬಂಧಿಸಿ ರೈತರೆ ಸಮಿತಿ ರಚಿಸಿಕೊಂಡು, ನೀರಿನ ಮಟ್ಟದ ಬಗ್ಗೆ ಅರಿಯಬೇಕು. ಇಲ್ಲದಿದ್ದರೆ ಅಧಿಕಾರಿಗಳು, ಜನ ಪ್ರತಿನಿಧಿಗಳು ಭದ್ರಾ ಜಲಾಶಯದ ನೀರಿನ ಮಟ್ಟದ ಬಗ್ಗೆ ನಮಗೆ ಮೋಸ ಮಾಡುತ್ತಾರೆ. ಬಾಬುರಾವ್, ಅಚ್ಚುಕಟ್ಟು ಪ್ರದೇಶದ ರೈತ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಕ್ಷವಿರೋಧಿ ಚಟುವಟಿಕೆ ನಡೆಸಿದ್ದರೆ ನನ್ನ ವಿರುದ್ಧವೂ ಕ್ರಮ ಆಗಲಿ: ಜಮೀರ್‌
ಈಗಾಗಲೇ ಸಾಕಷ್ಟು ಅನುಭವಿಸಿದ್ದೇವೆ, ಜಮೀರ್‌ರನ್ನು ಮತ್ತೆ ಸೇರ್ಸಿಕೊಳ್ಳಲ್ಲ: ಎಚ್ಡಿಕೆ