ರಾಣಿಬೆನ್ನೂರು: ನೀರಿನ ತೀವ್ರ ಬರದಲ್ಲೂ ಬುಧವಾರ ನಗರದಲ್ಲಿ ಬಣ್ಣದಾಟವನ್ನು ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಯಿತು.
ಬೈಕ್ ರ್ಯಾಲಿ: ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬೈಕುಗಳ ಮೇಲೆ ತಿರುಗಾಡುತ್ತ ಹೋಳಿ ಆಚರಣೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲಲ್ಲಿ ಯುವಕರು ಹಲಗೆ ಬಾರಿಸುತ್ತಾ ಪರಸ್ಪರ ಬಣ್ಣ ಎರಚುತ್ತಾ ಸಂಭ್ರಮಿಸಿದರು.
ಸಂಪ್ರದಾಯದಂತೆ ಮೆರವಣಿಗೆಯಲ್ಲಿ ಹರಿಜನಕೇರಿಯಿಂದ ಬೆಂಕಿ ತಂದ ನಂತರ ನಗರದ ವಿವಿಧೆಡೆ ಪ್ರತಿಷ್ಠಾಪಿಸಲಾಗಿದ್ದ ಕಾಮಣ್ಣ ಮೂರ್ತಿಗಳನ್ನು ದಹಿಸಲಾಯಿತು. ದುರ್ಗಾ ಸರ್ಕಲ್ ಬಳಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳು ಪ್ರತಿಷ್ಠಾಪಿಸಿದ್ದ ಕಾಮನ ಪ್ರತಿಕೃತಿಗೆ ಮಧ್ಯಾಹ್ನ 1.30ರ ಸುಮಾರು ಬೆಂಕಿ ಹಚ್ಚಲಾಯಿತು. ಆನಂತರ ನಗರದ ವಿವಿಧ ಭಾಗಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಕಾಮನ ಮೂರ್ತಿಗೆ ಬೆಂಕಿ ಹಚ್ಚುವ ಮೂಲಕ ಬಣ್ಣದಾಟಕ್ಕೆ ತೆರೆ ಎಳೆಯಲಾಯಿತು.ತಿಂಡಿ ವ್ಯವಸ್ಥೆ: ನಗರದ ಸಂಗಮ್ ಸರ್ಕಲ್ ಬಳಿಯ ಆಟೋ ಸ್ಟ್ಯಾಂಡ್ ವತಿಯಿಂದ ಬಣ್ಣದಾಟದಲ್ಲಿ ತೊಡಗಿದವರಿಗಾಗಿ ಉಚಿತ ತಿಂಡಿ ವ್ಯವಸ್ಥೆ ಮಾಡಲಾಗಿತ್ತು.
ಬಿಗಿ ಪೊಲೀಸ್ ಬಂದೋಬಸ್ತ್: ಹೋಳಿ ಸಂದರ್ಭದಲ್ಲಿ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.ಹೋಳಿ ನಿಮಿತ್ತ ಚಿಕ್ಕೇರೂರಲ್ಲಿ ಮದ್ಯ ಮಾರಾಟ ನಿಷೇಧ:
ಹೋಳಿ ಹಬ್ಬದ ಪ್ರಯುಕ್ತ ಹಾವೇರಿಯ ಚಿಕ್ಕೇರೂರು ಗ್ರಾಮದಲ್ಲಿ ರಂಗಪಂಚಮಿ ದಿನ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಲು ಮಾ. ೨೯ರ ಬೆಳಗ್ಗೆ ೬ ಗಂಟೆಯಿಂದ ರಾತ್ರಿ ೧೨ ಗಂಟೆ ವರೆಗೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ರಘುನಂದನ್ ಮೂರ್ತಿ ಆದೇಶ ಹೊರಡಿಸಿದ್ದಾರೆ.