ಕಾರವಾರ: ಉತ್ತರ ಕನ್ನಡ ಜಿಲ್ಲಾ ಶಸ್ತ್ರಸ್ತ್ರ ಮೀಸಲು ಪಡೆಯ ಕಾನ್ಸ್ಟೇಬಲ್ ಸತೀಶ ಕೋಗ್ರೆ ಕೈಯಲ್ಲಿ ಅರಳಿದ ಚಿತ್ರಗಳು ಗೃಹ ಸಚಿವ ಡಾ. ಜಿ.ಪರಮೇಶ್ವರ ಒಳಗೊಂಡು ಹಲವರ ಗಮನ ಸೆಳೆಯಿತು. ಕಲಾವಿದನ ಕೈಚಳಕಕ್ಕೆ ಮೆಚ್ಚುಗೆಯೂ ವ್ಯಕ್ತವಾಯಿತು.ಇಲ್ಲಿನ ಎಸ್ಪಿ ಕಚೇರಿ ಒಳಭಾಗದಲ್ಲಿ ಮಹಾತ್ಮ ಗಾಂಧೀಜಿ, ಡಾ.ಬಿ.ಆರ್. ಅಂಬೇಡ್ಕರ್, ಬಸವಣ್ಣ ಚಿತ್ರ ಹಾಕಲಾಗಿದೆ. ಇದರೊಂದಿಗೆ ಬುಧವಾರ ನಡೆದ ಗೃಹ ಸಚಿವರ ಕಾರ್ಯಕ್ರಮದಲ್ಲಿ ಸಚಿವರನ್ನೊಳಗೊಂಡು ಅತಿಥಿ ಅಭ್ಯಾಗತರಿಗೆ ಅವರವರ ಭಾವಚಿತ್ರ ನೀಡಲಾಯಿತು. ಈ ಚಿತ್ರಗಳೆಲ್ಲ ಚಿತ್ತಾಕರ್ಷಕವಾಗಿದ್ದು, ಗೃಹ ಸಚಿವ ಪರಮೇಶ್ವರ ಅವರಿಗೆ ಈ ಭಾವಚಿತ್ರ ನೀಡುತ್ತಿದ್ದಂತೆ ಕುಂಚದಲ್ಲಿ ಅರಳಿದ ತಮ್ಮ ಚಿತ್ರವನ್ನು ತದೇಕ ಚಿತ್ತದಿಂದ ನೋಡಿದರು. ಯಾರು ಬಿಡಿಸಿದ್ದು? ಎಂದು ಕೇಳಿ ಪ್ರಶಂಸೆ ವ್ಯಕ್ತಪಡಿಸಿದರು.
ಸಚಿವ ಮಂಕಾಳು ವೈದ್ಯ, ಶಾಸಕ ಶಿವರಾಮ ಹೆಬ್ಬಾರ, ಭೀಮಣ್ಣ ನಾಯ್ಕ, ಸತೀಶ ಸೈಲ್ ಕೂಡ ತಮ್ಮ ಚಿತ್ರಗಳನ್ನು ನೋಡಿ ತಲೆದೂಗಿದರು.ಸತೀಶ ಕೋಗ್ರೆ ಮೂಲತಃ ಅಂಕೋಲಾ ತಾಲೂಕಿನ ಕೋಗ್ರೆಯವರಾಗಿದ್ದು, ತಂದೆ ಚಿತ್ರಕಲಾವಿದರಾಗಿದ್ದರು. ಅವರು ಬಿಡಿಸುವ ಚಿತ್ರಗಳನ್ನು ನೋಡಿ ಕಲಿತಿದ್ದಾರೆ. ಎಸ್ಪಿ ಕಚೇರಿಯಲ್ಲಿ ಇರುವ ಹಾಗೂ ಬುಧವಾರದ ಕಾರ್ಯಕ್ರಮದಲ್ಲಿ ಪರಮೇಶ್ವರ ಒಳಗೊಂಡು ಅತಿಥಿಗಳಿಗೆ ನೀಡಲಾದ ಚಿತ್ರಗಳು ಕ್ಯಾನ್ವಾಸ್ ಆರ್ಟ್ ಆಗಿದೆ. ೧೪ ಚಿತ್ರಗಳನ್ನು ಬಿಡಿಸಿದ್ದು, ಇದಕ್ಕಾಗಿ ಒಂದು ಒಂದೂವರೆ ತಿಂಗಳು ಕಾಲಾವಕಾಶ ತೆಗೆದುಕೊಂಡಿದ್ದಾರೆ. ಸತೀಶ ಅವರ ಕುಂಚದಿಂದ ಅರಳಿದ ಚಿತ್ರಗಳು ಚಿತ್ತಾಕರ್ಷಕವಾಗಿರುವುದಂತೂ ನಿಜ.
ಗೃಹ ಸಚಿವರು ಸತೀಶ ಅವರ ಚಿತ್ರಗಳನ್ನು ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಅತ್ಯಂತ ಅಂದವಾಗಿ, ಅಚ್ಚುಕಟ್ಟಾಗಿ ಚಿತ್ರಗಳನ್ನು ಬರೆದಿದ್ದು, ಎಸ್ಪಿ ಕಚೇರಿಯಲ್ಲಿ ಹಾಕಲಾದ ಅಂಬೇಡ್ಕರ್, ಬಸವಣ್ಣ, ಗಾಂಧೀಜಿಯವರ ಫೋಟೊ ಅತ್ಯಂತ ಆಕರ್ಷಣೀಯವಾಗಿದೆ ಎನ್ನುತ್ತಾರೆ ಶಾಸಕ ಸತೀಶ ಸೈಲ್.