ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ಬೇಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಸಂಘದ ಮಾಜಿ ಅಧ್ಯಕ್ಷ ತಗ್ಗಲೂರು ತಮ್ಮಯ್ಯಪ್ಪ ಬಣ ಮೈಲುಗೈ ಸಾಧಿಸಿದ್ದು, ಕಾಂಗ್ರೆಸ್ನ ಮತ್ತೊಂದು ಗುಂಪಿನಲ್ಲಿ ಇಬ್ಬರು ಗೆಲವು ಸಾಧಿಸಿದರೆ, ಬಿಜೆಪಿಯ ಏಳು ಮಂದಿ ಸೋಲುವ ಮೂಲಕ ತೀವ್ರ ಮುಖಭಂಗ ಅನುಭವಿಸಿದೆ.ಸಂಘದ ಮಾಜಿ ಅಧ್ಯಕ್ಷ ತಗ್ಗಲೂರು ತಮ್ಮಯ್ಯಪ್ಪ ಬಣದಲ್ಲಿ ತಮ್ಮಯ್ಯಪ್ಪ, ರಾಜಣ್ಣ ಜೈನ್, ಶಂಕರಪ್ಪ, ಬಿಳಿಗಿರಿನಾಯಕ, ಪಿ.ಚಂದ್ರು, ರತ್ನಮ್ಮ, ನಿರ್ಮಲ ಭರ್ಜರಿ ಗೆಲುವು ಸಾಧಿಸಿದರು. ಹಿಂದುಳಿದ ವರ್ಗದ ʼಬಿʼ ಮೀಸಲು ಕ್ಷೇತ್ರದಿಂದ ತಮ್ಮಯ್ಯಪ್ಪ ಬಣದ ಕೆ. ನಂದೀಶ್ ಕಾಂಗ್ರೆಸ್ನ ಮತ್ತೊಂದು ಗುಂಪಿನ ರಮೇಶ್ ಬೇಗೂರು ವಿರುದ್ಧ 43 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ತಾಪಂ ಮಾಜಿ ಸದಸ್ಯ ಮಲ್ಲಿದಾಸ್ ೧೦೯ ಮತ ಪಡೆದು ಗೆಲುವು ಸಾಧಿಸಿದ್ದಾರೆ. ಹಿಂದುಳಿದ ವರ್ಗದ ʼಎʼ ಕ್ಷೇತ್ರದಿಂದ ನಾರಾಯಣ ಅವಿರೋಧ ಆಯ್ಕೆಯಾಗಿದ್ದಾರೆ. ಏಳು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಸೋಲು ಕಾಣುವ ಮೂಲಕ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ.
ನೂತನವಾಗಿ ಗೆಲುವು ಸಾಧಿಸಿದ ನಿರ್ದೇಶಕರನ್ನು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್. ನಂಜುಂಡಪ್ರಸಾದ್ ಅಭಿನಂದಿಸಿ ಮಾತನಾಡಿ, ಶುಭ ಕೋರಿದರು.ಈ ವೇಳೆ ತಾಪಂ ಮಾಜಿ ಸದಸ್ಯ ನೀಲಕಂಠಪ್ಪ, ಯಜಮಾನ ಶಿವಮೂರ್ತಿ, ಗ್ರಾಪಂ ಸದಸ್ಯ ಪುನೀತ್, ಡೇರಿ ಮಾಜಿ ಅಧ್ಯಕ್ಷ ಬಿ.ಸಿ.ಮಹದೇವಸ್ವಾಮಿ, ಮುಖಂಡರಾದ ಬಡ್ಡಿನಾಗಪ್ಪ, ಬಾಸ್ಕರ್, ಬಸವನಾಯಕ, ಆಟೋ ಮಹೇಶ್, ಕೆ.ಮಹದೇವಶೆಟ್ಟಿ, ಕಬ್ಬೇಪುರ ಮಧುಸೂದನ್, ಮಂಜುನಾಥ್ ಸೇರಿದಂತೆ ಹಲವರಿದ್ದರು.
ಸದಾಶಿವಮೂರ್ತಿಗೆ ಭರ್ಜರಿ ಗೆಲುವು:ಸಾಲಗಾರರಲ್ಲದ ಕ್ಷೇತ್ರದಿಂದ ಸ್ಪರ್ಧಿಸಿದ್ದ ತಮ್ಮಯ್ಯಪ್ಪ ಬಣದ ಸದಾಶಿವಮೂರ್ತಿ ಟಿ ಆಲಿಯಾಸ್ ಸದಾ ಬಿಜೆಪಿ ಬೆಂಬಲಿತ ಅಭ್ಯರ್ಥಿ ನಾಗಶೆಟ್ಟಿ ವಿರುದ್ಧ 115 ಮತಗಳು, ಕಾಂಗ್ರೆಸ್ನ ಮತ್ತೊಂದು ಗುಂಪಿನ ಸುರೇಶ್ ಪಿ ವಿರುದ್ಧ 116 ಮತಗಳಿಂದ ಗೆಲುವು ಸಾಧಿಸಿದ್ದಾರೆ.