ಆನ್‌ಲೈನ್ ಮೂಲಕ ಹೊನ್ನಾವರ ಸಾಲ್ಕೋಡನ ಗೋ ಮಾಂಸ ಮಾರಾಟ!

KannadaprabhaNewsNetwork |  
Published : Jan 27, 2025, 12:49 AM IST
ಸಾಂದರ್ಭಿಕ ಚಿತ್ರ. | Kannada Prabha

ಸಾರಾಂಶ

ಆರೋಪಿಗಳ ಮೊಬೈಲ್‌ನಲ್ಲಿ ಹಲವು ಹಸುಗಳ ಫೋಟೋಗಳು, ಮಾಂಸದ ಫೋಟೋಗಳು ಇರುವುದು ಪತ್ತೆಯಾಗಿದೆ. ಗೂಗಲ್ ಪೇ ಮೂಲಕ ಹಣ ಪಡೆಯುತ್ತಿರುವುದೂ ಬೆಳಕಿಗೆ ಬಂದಿದೆ.

ಕಾರವಾರ: ಹೊನ್ನಾವರ ಸಾಲ್ಕೋಡನ ಗೋ ಹಂತಕರು ಗೋವಿನ ಫೋಟೋ, ಮಾಂಸವನ್ನು ಆನ್‌ಲೈನ್ ಮೂಲಕ ತೋರಿಸಿ ಗ್ರಾಹಕರನ್ನು ಕುದುರಿಸಿ ಮಾರಾಟ ಮಾಡಿ ಗೂಗಲ್ ಪೇದಿಂದ ಹಣ ಪಡೆಯುತ್ತಿದ್ದರು. ಆರೋಪಿಗಳು ಇದನ್ನೇ ಕಸುಬಾಗಿಸಿಕೊಂಡಿದ್ದರು. ಗೋ ಹಂತಕರು ಸೆರೆಯಾಗುತ್ತಿದ್ದಂತೆ ಈ ಬೆಚ್ಚಿ ಬೀಳಿಸುವ ಮಾಹಿತಿ ಬಹಿರಂಗಗೊಂಡಿದೆ.ಈ ಘಟನೆಯಲ್ಲಿ ಮೊದಲನೇ ಆರೋಪಿ ತೌಫೀಕ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಫೈಜಾನ್ ಎಂಬಾತನ ಹೆಸರು ಹೇಳಿದ್ದಾನೆ. ಪ್ರಮುಖ ಆರೋಪಿಗಳಾದ ವಾಸಿಮ್, ಮುಜಾಮಿಲ್‌ (ತಲೆಮರೆಸಿಕೊಂಡಿದ್ದಾರೆ), ಫೈಜಾನ್ ಹಾಗೂ ತೌಫೀಕ್ ವಾಟ್ಸ್‌ಆ್ಯಪ್ ಗ್ರೂಪ್ ಮಾಡಿಕೊಂಡಿದ್ದು, ದನಗಳ ಫೋಟೋ ಹಾಕುತ್ತಿದ್ದರು. ನಂತರ ಆ ದನದ ಮಾಂಸದ ಫೋಟೋ ಹಾಕುತ್ತಿದ್ದರು. ಬೇಡಿಕೆ ಬಂದಾಗ ಮಾಂಸ ಕಳುಹಿಸಿಕೊಟ್ಟು ಗೂಗಲ್ ಪೇ ಮೂಲಕ ಹಣ ಪಡೆಯುತ್ತಿದ್ದರು.ಆರೋಪಿಗಳ ಮೊಬೈಲ್‌ನಲ್ಲಿ ಹಲವು ಹಸುಗಳ ಫೋಟೋಗಳು, ಮಾಂಸದ ಫೋಟೋಗಳು ಇರುವುದು ಪತ್ತೆಯಾಗಿದೆ. ಗೂಗಲ್ ಪೇ ಮೂಲಕ ಹಣ ಪಡೆಯುತ್ತಿರುವುದೂ ಬೆಳಕಿಗೆ ಬಂದಿದೆ. ಘಟನೆ ನಡೆದ ಫೆ. 18ರಂದು ಆರೋಪಿಗಳು ನಾಲ್ವರು ಹಾಗೂ ಸ್ಥಳೀಯ ಇಬ್ಬರು ಹಿಂದುಗಳ ಸಹಕಾರದಿಂದ ಮಾಂಸ ಕಡಿದು ಪ್ಯಾಕ್ ಮಾಡಿದರು. ಫೈಜಾನ್ ಸ್ಕೂಟಿಯ ಮೂಲಕ ಮದುವೆಗೆ ಈ ಮಾಂಸ ಸಾಗಾಟ ಮಾಡಿದ್ದು. ಗೂಗಲ್ ಪೇ ಮೂಲಕ ಹಣ ಪಾವತಿಸಿಕೊಂಡಿದ್ದಾರೆ.ಇವರ ಕೃತ್ಯಕ್ಕೆ ಸ್ಥಳೀಯರಾದ ಇಬ್ಬರು ಹಿಂದುಗಳೂ ಸಹಕರಿಸಿರುವುದು ತನಿಖೆ ವೇಳೆ ಪೊಲೀಸರ ಗಮನಕ್ಕೆ ಬಂದಿದೆ. ಈಗ ಪೊಲೀಸರು ಪ್ರಮುಖ ಆರೋಪಿಗಳಾದ ವಾಸಿಮ್, ಮುಜಾಮಿಲ್ ಹಾಗೂ ಸಹಕರಿಸಿದ ಇಬ್ಬರು ಹಿಂದುಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ತನಿಖೆ ಹೇಗಿತ್ತು?: ಸಾಲ್ಕೋಡ ಕೊಂಡೊಕುಳಿಯಲ್ಲಿ ಗರ್ಭ ಧರಿಸಿದ ಹಸು ಹಾಗೂ ಕರು ಹತ್ಯೆ ಮಾಡಿ ಮಾಂಸ ಒಯ್ದ ದೂರು ಬರುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಹೋಗಿ ಪರಿಶೀಲಿಸಿದಾಗ ಕಾಡುಪ್ರಾಣಿ ಹಸುವನ್ನು ಬೇಟೆಯಾಡಿರಬೇಕೆಂದು ಭಾವಿಸಿದರು. ನಂತರ ಪಶು ವೈದ್ಯರು, ತಹಸೀಲ್ದಾರರನ್ನು ಕರೆದೊಯ್ದು ಪರಿಶೀಲಿಸಿದಾಗ ದನವನ್ನು ಕಡಿದಿರುವುದು ಸ್ಪಷ್ಟವಾಯಿತು. ಗೋವುಗಳು ಮೇಲಿಂದ ಮೇಲೆ ಕಳ್ಳತನವಾಗುತ್ತಿವೆ ಎಂಬ ಮಾಹಿತಿಯೂ ಸಾರ್ವಜನಿಕರಿಂದ ಬಂತು. ಮೂರು ದಿನಗಳ ಕಾಲ ಕಾಡಿನಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಹುಡುಕಾಟ ನಡೆಸಿದರು. ನಂತರ ಸ್ಥಳೀಯರೊಬ್ಬರಿಂದ ಆರೋಪಿಗಳ ಬಗ್ಗೆ ಮಾಹಿತಿ ಬಂತು. ಹೆಚ್ಚುವರಿ ಪೊಲೀಸ್ ವರಿಷ್ಠ ಜಗದೀಶ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠರು ತನಿಖೆಗಾಗಿ ಆರು ತಂಡಗಳನ್ನು ರಚಿಸಿದರು. ಮುಖ್ಯಮಂತ್ರಿ ಸಿದ್ಧರಾಮಯ್ಯ, ಗೃಹ ಸಚಿವ ಪರಮೇಶ್ವರ, ಹಿರಿಯ ಪೊಲೀಸ್ ಅಧಿಕಾರಿಗಳು ಗೋಹತ್ಯೆಯನ್ನು ನಿಲ್ಲಿಸುವಂತೆ ಎಸ್ಪಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ಸ್ಥಳಕ್ಕೆ ಐಜಿಪಿ ಅಮಿತ್ ಸಿಂಗ್ ಕೂಡ ಬಂದು ತನಿಖೆಗೆ ಮಾರ್ಗದರ್ಶನ ಮಾಡಿದರು. ತನಿಖಾ ತಂಡಗಳು ಹೊನ್ನಾವರ ತಾಲೂಕಿನ ವಲ್ಕಿ, ಖರ್ವಾ, ಹೆರಂಗಡಿ, ಉಪ್ಪೋಣಿಗಳಿಗೆ ತೆರಳಿದಾಗ ಎಲ್ಲ ಗ್ರಾಪಂಗಳ ಅಧ್ಯಕ್ಷರು ತಾವು ಮಾಹಿತಿ ಕಲೆ ಹಾಕಿ ತಿಳಿಸುವುದಾಗಿ ಭರವಸೆ ನೀಡಿದರು. ಮುಸ್ಲಿಂ ಪ್ರಮುಖರೂ ಮಾಹಿತಿ ನೀಡುವುದಾಗಿ ತಿಳಿಸಿದರು. ಸಾರ್ವಜನಿಕರಿಂದ ಬಂದ ಮಾಹಿತಿ ಹಿನ್ನೆಲೆಯಲ್ಲಿ ಈ ಪ್ರಕರಣದಲ್ಲಿ ವಾಸಿಮ್ ಭಟ್ಕಳ, ಮುಜಾಮಿಲ್, ತೌಫೀಕ್, ಫೈಜಾನ್ ಹಾಗೂ ಇಬ್ಬರು ಹಿಂದುಗಳು ಇರುವುದು ಸ್ಪಷ್ಟವಾಯಿತು. ಪೊಲೀಸರು ಆರೋಪಿಗಳ ಬೆನ್ನಿಗೆ ಬೀಳುತ್ತಿದ್ದಂತೆ ಅಲರ್ಟ್‌ ಆದ ಆರೋಪಿಗಳು ಊರನ್ನು ತೊರೆದರು. ಮೊಬೈಲ್ ಕೂಡ ಸ್ವಿಚ್ ಆಫ್ ಮಾಡಿಕೊಂಡರು. ತೌಫೀಕನನ್ನು ಭದ್ರಾವತಿಯಲ್ಲಿ ಪತ್ತೆ ಹಚ್ಚಿ ಆರೆಸ್ಟ್ ಮಾಡಲಾಯಿತು. ನಂತರ ಫೈಜಾನ್‌ನನ್ನು ವಿಚಾರಣೆಗೆ ಕರೆದು ಬಂಧಿಸಲಾಯಿತು. ಫೈಜಾನ್ ಬೇರೊಬ್ಬ ವ್ಯಕ್ತಿಯಿಂದ ಬೈಕ್ ಪಡೆದು ವಾಸಿಂ, ಮುಜಾಮಿಲ್ ಹಾಗೂ ತೌಫೀಕ್‌ನನ್ನು ಕುಮಟಾಕ್ಕೆ ಕರೆತಂದು ಅಲ್ಲಿಂದ ಹುಬ್ಬಳ್ಳಿ, ಸವಣೂರಿಗೆ ಕಳುಹಿಸಿರುವುದೂ ಗೊತ್ತಾಯಿತು. ಘಟನೆ ನಡೆದ ಮರುದಿನ ಆರೋಪಿಗಳು ಸಾಕ್ಷಿನಾಶ ಪಡಿಸಲು ಪ್ರಯತ್ನ ನಡೆಸಿದ್ದರು.

ಫೈಜಾನ್‌ನನ್ನು ಮಹಜರಿಗಾಗಿ ಕರೆದೊಯ್ಯುತ್ತಿದ್ದಾಗ ವಂದೂರು ಸಮೀಪ ದುಗ್ಗೂರು ಗುಡ್ಡದಲ್ಲಿ ಪೊಲೀಸರ ಮೇಲೆ ದಾಳಿ ನಡೆಸಲು ಪ್ರಯತ್ನಿಸಿದಾಗ ಸಿಪಿಐ ಸಿದ್ಧರಾಮೇಶ್ವರ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದರೂ, ಮತ್ತೆ ದಾಳಿಗೆ ಯತ್ನಿಸಿದಾಗ ಕಾಲಿಗೆ ಗುಂಡು ಹಾರಿಸಿದರು.ಜಿಲ್ಲಾ ಪೊಲೀಸ್ ವರಿಷ್ಠ ಎಂ. ನಾರಾಯಣ ತನಿಖೆಯ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ವಿವರಗಳನ್ನು ನೀಡಿದರು. ಆರೋಪಿಯಿಂದ ದಾಳಿಗೊಳಗಾದ ಪೊಲೀಸರು ಹಾಗೂ ಆರೋಪಿ ಫೈಜಾನ್ ಈಗ ಚೇತರಿಸಿಕೊಳ್ಳುತ್ತಿದ್ದಾರೆ.

ಸುಳಿವು ನೀಡಿದವರಿಗೆ ₹50 ಸಾವಿರ ಬಹುಮಾನ

ಪ್ರಮುಖ ಆರೋಪಿ ಸುಳಿವು ನೀಡಿದವರಿಗೆ ₹50 ಸಾವಿರ ಬಹುಮಾನವನ್ನು ಜಿಲ್ಲಾ ಪೊಲೀಸ್ ವರಿಷ್ಠರು ಘೋಷಣೆ ಮಾಡಿದ್ದು, ಸುಳಿವು ನೀಡುವವರ ಹೆಸರನ್ನು ಗೋಪ್ಯವಾಗಿ ಇಡಲಾಗುವುದು ಎಂದು ಪೊಲೀಸ್ ವರಿಷ್ಠ ಎಂ. ನಾರಾಯಣ ತಿಳಿಸಿದ್ದಾರೆ.

ಗೋಹತ್ಯೆ ಮಾಡಿದರೆ ಮಸೀದಿಯಿಂದ ಬಹಿಷ್ಕಾರ

ಕಾರವಾರ: ಗೋಹತ್ಯೆ ಮಾಡಿದರೆ ಮಸೀದಿಯಿಂದ ಬಹಿಷ್ಕಾರ ಹಾಕುವಂತೆ ಭಟ್ಕಳದ ತಂಜಿಂ ನಿರ್ಣಯ ಮಾಡಿದೆ. ಇದೊಂದು ಸ್ವಾಗತಾರ್ಹ ಬೆಳವಣಿಗೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಎಂ. ನಾರಾಯಣ ತಿಳಿಸಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಭಟ್ಕಳದಲ್ಲಿ ಪೊಲೀಸ್ ಅಧಿಕಾರಿಗಳ ಸೂಚನೆಯಂತೆ ಎಲ್ಲ ಅಕ್ರಮ ಕಸಾಯಿಖಾನೆಯನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಲಾಗಿದೆ.ಗೋಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ವಾಸಿಮ್ ಹಾಗೂ ಮುಜಾಮಿಲ್ ಬಂಧನವಾದ ಮೇಲೆ ಹೆಚ್ಚಿನ ಮಾಹಿತಿ ತಿಳಿಯಲಿದೆ. ಆರೋಪಿ ಫೈಜಾನ್‌ಗೆ ಕಾರವಾರದ ಕ್ರಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತೌಫೀಕ್‌ಗೆ ಉನ್ನತ ಚಿಕಿತ್ಸೆಗೆ ಶಿಫಾರಸು ಮಾಡಲಾಗಿದೆ. ಗಾಯಗೊಂಡಿರುವ ಮೂವರು ಪೊಲೀಸ್ ಸಿಬ್ಬಂದಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುವುದು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

2025ರಲ್ಲಿ ಬಿಯರ್‌ ಮಾರಾಟ ಭಾರೀ ಕುಸಿತ
ಜನಾಶೀರ್ವಾದದಿಂದ ದೀರ್ಘಾವಧಿ ಸಿಎಂ : ಸಿದ್ದು